ಬಂಧನ ಭೀತಿಯಲ್ಲಿ ನಟ ಅಜಯ್ ರಾವ್: ನಿರೀಕ್ಷಣ ಜಾಮೀನಿಗೆ ಅರ್ಜಿ

25-08-21 10:58 am       Filmbeat   ಸಿನಿಮಾ

ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ ಲವ್ ಯು ರಚ್ಚು ಸಿನಿಮಾದ ಚಿತ್ರೀಕರಣ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ ಪ್ರಕರಣ ಸಂಬಂಧ ನಟ ಅಜಯ್ ರಾವ್ ಅವರಿಗೆ ಬಂಧನ ಭೀತಿ ಎದುರಾಗಿದೆ.

ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ ಲವ್ ಯು ರಚ್ಚು ಸಿನಿಮಾದ ಚಿತ್ರೀಕರಣ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ ಪ್ರಕರಣ ಸಂಬಂಧ ನಟ ಅಜಯ್ ರಾವ್ ಅವರಿಗೆ ಬಂಧನ ಭೀತಿ ಎದುರಾಗಿದೆ. ಹಾಗಾಗಿ ಅಜಯ್ ರಾವ್ ಕೋರ್ಟ್ ಮೊರೆ ಹೋಗಿದ್ದಾರೆ. ನಿರೀಕ್ಷಣ ಜಾಮೀನು ಕೋರಿ ಅಜಯ್ ರಾವ್ ಅರ್ಜಿ ಸಲ್ಲಿಸಿದ್ದಾರೆ. ರಾಮನಗರದ 3ನೇ ಹೆಚ್ಚುವರಿ ಸೆಷನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಆಗಸ್ಟ್ 26ರಂದು ಅಜಯ್ ರಾವ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ರಾಮನಗರದ ಜೋಗಪಾಳ್ಯದಲ್ಲಿ ಲವ್ ಯು ರಚ್ಚು ಸಿನಿಮಾದ ಚಿತ್ರೀಕರಣ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಬಿಡದಿ ಪೊಲೀಸ್ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದು, ಚಿತ್ರ ನಿರ್ದೇಶಕ ಶಂಕರ್, ಫೈಟ್ ಮಾಸ್ಟರ್ ವಿನೋದ್ ಹಾಗು ಕ್ರೇನ್ ಆಪರೇಟರ್ ಮಹದೇವ್ ನನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ನ್ಯಾಯಾಲಯ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಘಟನೆ ನಡೆದ ವೇಳೆ ಚಿತ್ರದ ನಟ ಅಜಯ್ ರಾವ್ ಸ್ಥಳದಲ್ಲಿದ್ದರು. ಹಾಗಾಗಿ ಅಜಯ್ ರಾವ್ ವಿರುದ್ಧ ಕೇಸ್ ದಾಖಲಾಗುವ ಭೀತಿಯಲ್ಲಿದ್ದು ನಿರೀಕ್ಷಣ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.



ವಿಚಾರಣೆಗೆ ಹಾಜರಾಗಿದ್ದ ನಟಿ ರಚಿತಾ

ಚಿತ್ರದ ನಾಯಕಿ ನಟಿ ರಚಿತಾ ರಾಮ್ ಚಿತ್ರೀಕರಣ ಸ್ಥಳದಲ್ಲಿ ಇರಲಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಈ ಪ್ರಕರಣ ಸಂಬಂಧ ನಟಿ ರಚಿತಾ ರಾಮ್ ನಿನ್ನೆ (ಆಗಸ್ಟ್ 24) ವಿಚಾರಣೆಗೆ ಹಾಜರಾಗಿದ್ದರು. ಬಿಡದಿ ಪೋಲೀಸ್ ಠಾಣೆಗೆ ರಚಿತಾ ಹಾಜರಾಗಿದ್ದರು. ಡಿ ವೈ ಎಸ್ ಪಿ ಮೋಹನ್ ಕುಮಾರ್ ಅವರು ರಚಿತಾ ಅವರನ್ನು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರಚಿತಾ, "ಚಿತ್ರೀಕರಣ ವೇಳೆ ನಡೆದ ದುರಂತದ ಸಂದರ್ಭದಲ್ಲಿ ನಾನು ಸ್ಥಳದಲ್ಲಿ ಇರಲಿಲ್ಲ. ಅದನ್ನ ಹೇಳಲು ಅಷ್ಟೇ ನಾನು ಪೊಲೀಸ್ ಠಾಣೆಗೆ ಬಂದಿದ್ದೇನೆ. ಮಾಧ್ಯಮಗಳಲ್ಲಿ ನೋಡಿದ ಬಳಿಕ ಫೈಟರ್ ವಿವೇಕ್ ಸಾವಿನ ವಿಚಾರ ತಿಳಿಯಿತು. ಆದರೆ ಹೇಗಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ಹಳೇ ಶೆಡ್ಯೂಲ್ ನಲ್ಲಿ ಇದ್ದೇ, ಆದರೆ ಇದು ಹೊಸ ಶೆಡ್ಯೂಲ್ ಶೂಟಿಂಗ್ ನಲ್ಲಿ ನಾನು ಇರಲಿಲ್ಲ" ಎಂದು ಹೇಳಿದ್ದಾರೆ.

'ಇದರಲ್ಲಿ ನಿರ್ಲಕ್ಷ್ಯ ಮಾಡೋದು ಅಥವಾ ಉದ್ದೇಶಪೂರ್ವಕವಾಗಿ ಮಾಡೋದು ಏನು ಇಲ್ಲ. ಅದು ಅನಿರೀಕ್ಷಿತವಾಗಿ ನಡೆದ ಅನಾಹುತ. ಅದಕ್ಕೆ ತುಂಬಾ ಬೇಸರವಿದೆ. ಬರಿ ಸ್ಟಂಟ್ ವೇಳೆ ಮಾತ್ರವಲ್ಲ, ಯಾವುದೇ ಸೀನ್ ಇದ್ದರೂ ಮುಂಜಾಗ್ರತಾ ಕ್ರಮ ವಹಿಸಬೇಕು. ಅಜಯ್ ರಾವ್ ಅವರು ಸ್ಥಳದಲ್ಲಿ ಇದ್ದ ಬಗ್ಗೆ ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಸ್ಥಳದಲ್ಲಿ ಇರಲಿಲ್ಲ, ಹಾಗಾಗಿ ಆ ಬಗ್ಗೆ ಏನು ಹೇಳಲು ಆಗಲ್ಲ'' ಎಂದು ರಚಿತಾ ಸ್ಪಷ್ಟನೆ ನೀಡಿದ್ದಾರೆ.

ಸಾಹಸ ನಿರ್ದೇಶಕ ವಿನೋದ್, ಸಿನಿಮಾ ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್ ರಾಮನಗರ ಜೈಲಿನಲ್ಲಿದ್ದಾರೆ. ಆಗಸ್ಟ್ 24ರಂದು ರಾಮನಗರ ಹೆಚ್ಚುವರಿ ಸಿವಿಲ್ ಕೋರ್ಟ್ ಮುಂದೆ ವಿಡಿಯೋ ಕಾಲ್ ಮೂಲಕ ಹಾಜರು ಪಡಿಸಲಾಗಿತ್ತು. ಈ ವೇಳೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಮತ್ತೊಂದೆಡೆ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ತಲೆಮರೆಸಿಕೊಂಡಿದ್ದಾರೆ. ನಿರ್ಮಾಪಕರ ಪರವಾಗಿ ಪತ್ನಿ ಸುದ್ದಿಗೋಷ್ಠಿ ನಡೆಸಿ, ಮೃತ ವಿವೇಕ್ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದರು. ಇನ್ನು ವಿವೇಕ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾನು ಚಿತ್ರೀಕರಣ ಮಾಡಲ್ಲ ಎಂದು ನಟ ಅಜಯ್ ರಾವ್ ಹೇಳಿದ್ದರು.

(Kannada Copy of Filmbeat Kannada)