ಮಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಹೈದರಾಬಾದ್ ಸಿಸ್ಟಂ ಪರ್ಯಾಯ ; ಎಕ್ಸ್ ಪ್ರೆಸ್ ಬಸ್ ಗಳಿಗೆ ನಗರ ಪ್ರವೇಶಕ್ಕೆ ತಡೆ, ವರ್ತುಲ ಬಸ್ ನಿಲ್ದಾಣ ವ್ಯವಸ್ಥೆ 

14-03-23 07:51 pm       Mangalore Correspondent   ಕರಾವಳಿ

ಹೈದ್ರಾಬಾದ್ ದೇಶದ ಹೈಟೆಕ್ ಸಿಟಿ. ಮುಂಬೈ ಬಿಟ್ಟರೆ ವ್ಯವಸ್ಥಿತವಾಗಿ ಬೆಳೆದ ನಗರ ಇದ್ದರೆ ಅದು ಹೈದರಾಬಾದ್. ಯಾವುದೇ ನಗರವಾದರೂ ಅಲ್ಲಿ ವಾಹನಗಳ ದಟ್ಟಣೆ, ಟ್ರಾಫಿಕ್ಕಿನದ್ದೇ ದೊಡ್ಡ ಸಮಸ್ಯೆ.

ಮಂಗಳೂರು, ಮಾ.14 : ಹೈದ್ರಾಬಾದ್ ದೇಶದ ಹೈಟೆಕ್ ಸಿಟಿ. ಮುಂಬೈ ಬಿಟ್ಟರೆ ವ್ಯವಸ್ಥಿತವಾಗಿ ಬೆಳೆದ ನಗರ ಇದ್ದರೆ ಅದು ಹೈದರಾಬಾದ್. ಯಾವುದೇ ನಗರವಾದರೂ ಅಲ್ಲಿ ವಾಹನಗಳ ದಟ್ಟಣೆ, ಟ್ರಾಫಿಕ್ಕಿನದ್ದೇ ದೊಡ್ಡ ಸಮಸ್ಯೆ. ಹೈದರಾಬಾದ್ ನಲ್ಲಿ ಒಂದು ಹಂತದ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ನೀಗಿಸಲು ಕಂಡುಕೊಂಡಿದ್ದು ನಗರದೊಳಗೆ ಎಕ್ಸ್ ಪ್ರೆಸ್ ಬಸ್ಗಳಿಗೆ ಕಡಿವಾಣ ಹೇರಿದ್ದು. ಮಂಗಳೂರಿನಂಥ ಸಣ್ಣ ನಗರದಲ್ಲಿ ಸದ್ಯಕ್ಕೆ ಟ್ರಾಫಿಕ್ ಸಮಸ್ಯೆ ನಿವಾರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಣಗಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಬೆಳೆಯುವ ನಗರದ ಜನಸಂಖ್ಯೆಗೆ ತಕ್ಕಂತೆ ವಾಹನಗಳಿಗೆ ಮಿತಿ ಹೇರಬೇಕಾದ ಅನಿವಾರ್ಯತೆ ಇದೆ. 
 

ಮಂಗಳೂರು ಐದರಿಂದ ಆರು ಕಿಮೀ ಉದ್ದಗಲದ ಸಣ್ಣ ನಗರವಾಗಿದ್ದು, ಪಂಪ್ವೆಲ್, ನಂತೂರು ಮತ್ತು ಕೊಟ್ಟಾರ ಇದಕ್ಕೆ ಹೆಬ್ಬಾಗಿಲು ಇದ್ದಂತೆ. ಕಾಸರಗೋಡು, ಬೆಳ್ತಂಗಡಿ, ಪುತ್ತೂರು ಕಡೆಗಳ ಬಸ್, ಇನ್ನಿತರ ವಾಹನಗಳು ಪಂಪ್ವೆಲ್ ಮೂಲಕ ನಗರ ಸೇರಿದರೆ, ಮೂಡುಬಿದ್ರೆ ಕಡೆಯ ಬಸ್ ಗಳು ಮತ್ತು ಎರಡು ರಾಷ್ಟ್ರೀಯ ಹೆದ್ದಾರಿ ಸೇರುವುದರಿಂದ ಟ್ಯಾಂಕರ್ ಇನ್ನಿತರ ದೊಡ್ಡ ವಾಹನಗಳಿಂದಾಗಿ ನಂತೂರು ವೃತ್ತ ಪ್ರತಿ ದಿನ ಬ್ಲಾಕ್ ಆಗುತ್ತದೆ. ನಂತೂರಿನ ಸ್ಥಿತಿ ಬದಲಾಗಲು ಅಲ್ಲೊಂದು ಅಂಡರ್ ಪಾಸ್ ಆಗಲೇಬೇಕು. ಕೊಟ್ಟಾರದಲ್ಲಿ ಉಡುಪಿ, ಸುರತ್ಕಲ್ ಕಡೆಯ ವಾಹನಗಳು ಬಂದು ಸೇರುವುದು ಮತ್ತು ಅಲ್ಲಿನ ಅವೈಜ್ಞಾನಿಕ ಫ್ಲೈ ಓವರ್ ಟ್ರಾಫಿಕ್ ಸಮಸ್ಯೆಗೆ ಕಾರಣ. 

ಇದಕ್ಕಾಗಿ ಉಡುಪಿ ಕಡೆಯ ಬಸ್ ಗಳನ್ನು ಕೊಟ್ಟಾರದಲ್ಲಿಯೇ ನಿಲ್ಲಿಸುವುದು, ಕಾಸರಗೋಡು, ಪುತ್ತೂರು, ಬೆಳ್ತಂಗಡಿ ಕಡೆಯ ಸಾರಿಗೆ ಬಸ್ ಗಳನ್ನು ಪಂಪ್ವೆಲ್ ನಲ್ಲಿಯೇ ನಿಲ್ಲಿಸಿ, ಎರಡು ಪ್ರತ್ಯೇಕ ಬಸ್ ನಿಲ್ದಾಣಗಳನ್ನು ಮಾಡಿದಲ್ಲಿ ನಗರದೊಳಗಿನ ಟ್ರಾಫಿಕ್ ಸಮಸ್ಯೆಯನ್ನು ಬಹುತೇಕ ಬಗೆಹರಿಸಬಹುದು. ನಗರದೊಳಗೆ ಸಂಚರಿಸಲು ಸಾರಿಗೆ ಬಸ್ ಗಳು ಮತ್ತು ಇನ್ನಿತರ ಖಾಸಗಿ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಕೊಟ್ಟು ಎಕ್ಸ್ ಪ್ರೆಸ್ ಮತ್ತು ನಗರ ಸಾರಿಗೆಯ ದರವನ್ನು ಕಡಿಮೆ ಮಾಡಿದರೆ ಸಮಸ್ಯೆ ತಪ್ಪಿಸಬಹುದು.

Mangalore Service Bus Stand at State Bank is All Set to Get A Makeover:  Check Out -

ಸ್ಟೇಟ್ ಬ್ಯಾಂಕ್, ಕೆಎಸ್ಸಾರ್ಟಿಸಿಗೆ ಎಲ್ಲ ಬಸ್ ಅಗತ್ಯವೇ ?  

ಉಡುಪಿ- ಮಂಗಳೂರು ಆಗಲೀ, ಮಂಗಳೂರು – ಪುತ್ತೂರು ಅಥವಾ ಕಾಸರಗೋಡು ಸಂಚರಿಸುವ ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಎಕ್ಸ್ ಪ್ರೆಸ್ ಬಸ್ ಗಳೆಲ್ಲ ನಗರದೊಳಕ್ಕೆ ಪ್ರವೇಶ ಪಡೆದು ಇಡೀ ನಗರ ಸುತ್ತಿಕೊಂಡು ಬರುವುದು ನಗರದೊಳಗಿನ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣ. ಇವುಗಳನ್ನು ನಗರ ಪ್ರವೇಶ ಮಾಡದಂತೆ ಕಡಿವಾಣ ಹಾಕುವುದು, ಎಕ್ಸ್ ಪ್ರೆಸ್ ಬಸ್ ಗಳ ವಿಪರೀತ ದರವನ್ನು ತಲಾ ಹತ್ತು ರೂ.ನಂತೆ ಇಳಿಸಿದರೆ ತನ್ನಿಂತಾನೇ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಬೀಳಬಹುದು. ನಗರದೊಳಗಿನ ಸಿಟಿ ಬಸ್ ಗಳ ಸಂಚಾರವನ್ನೂ ಎಲ್ಲಿಯೂ ಪುಕ್ಕಟೆ ನಿಲ್ಲದಂತೆ ರಾತ್ರಿ ಹತ್ತು ಗಂಟೆ ವರೆಗೂ ಸದಾ ಸಾಗುತ್ತಿರಲು ವ್ಯವಸ್ಥೆ ಮಾಡಬೇಕು. 

ಹಾಲಿ ಇರುವ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣವನ್ನು ಕೇವಲ ಸಿಟಿ ಬಸ್ ಗಳಿಗೆ ಮಾತ್ರ ಸೀಮಿತ ಮಾಡಬೇಕು. ಜೊತೆಗೆ, ಲಾಲ್ ಬಾಗ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣವನ್ನು ದೂರದ ಊರುಗಳಿಗೆ ಸಂಚರಿಸಲಷ್ಟೆ ಉಪಯೋಗ ಮಾಡುವಂತಿರಬೇಕು. ಸಿಟಿ ಬಸ್ ಗಳು ಹೇಗೂ ಪಂಪ್ವೆಲ್ ಮತ್ತು ಕೊಟ್ಟಾರ ಕಡೆಯಿಂದ ಸಾಗಿ ಸ್ಟೇಟ್ ಬ್ಯಾಂಕ್ ಬರುತ್ತವೆ. ಅಲ್ಲಿ ಇಳಿಯುವ ಎಕ್ಸ್‌ಪ್ರೆಸ್‌ ಬಸ್ ಪ್ರಯಾಣಿಕರು ತಾವು ಬೇಕೆಂದಲ್ಲಿ ಸಾಗಲು ಬಸ್ ಸಿಗುತ್ತದೆ. ಬೇಕಿದ್ದರೆ ವರ್ತುಲ ರೀತಿಯಲ್ಲಿ ಮೂರೂ ನಿಲ್ದಾಣಕ್ಕೂ ಸಾಗುವ ರೀತಿ ನರ್ಮ್ ಬಸ್ ಗಳನ್ನು ಮಾಡಬಹುದು. ಇದರಿಂದ ಇತರೇ ಖಾಸಗಿ ವಾಹನಗಳ ಸಂಚಾರಕ್ಕೂ ತೊಂದರೆ ಆಗದು. ನಗರಕ್ಕೆ ಬರುವವರು ಪಂಪ್ವೆಲ್, ಕೊಟ್ಟಾರದಿಂದ ಸಿಟಿ ಬಸ್ ಗಳಲ್ಲಿ ಅದೇ ವೇಗದಲ್ಲಿ ಬೇಕಾದಲ್ಲಿಗೆ ತೆರಳಲು ಅವಕಾಶವೂ ಸಿಗುತ್ತದೆ. ನಗರದೊಳಗಿನ ಟ್ರಾಫಿಕ್ ಸಮಸ್ಯೆಯೂ ಬಹಳಷ್ಟು ತಪ್ಪಬಹುದೆಂಬ ಅಭಿಪ್ರಾಯಗಳಿವೆ. ಹೈದರಾಬಾದ್ ನಗರದಲ್ಲಿ ಇದೇ ರೀತಿಯ ಸಾರಿಗೆ ನಿಯಂತ್ರಣ ವ್ಯವಸ್ಥೆ ಇದೆ. ಮಂಗಳೂರನ್ನು ಕೂಡ ಪ್ರವಾಸೋದ್ಯಮ ದೃಷ್ಟಿಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲದ ಸಿಟಿಯಾಗಿ ಬೆಳೆಸಲು ಈ ಬಗ್ಗೆ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಚಿಂತನೆ ನಡೆಸಿದರೆ ಒಳಿತು ಎನ್ನುವುದು ಹೆಡ್ ಲೈನ್ ಕರ್ನಾಟಕ ಆಶಯ.

Hyderabad traffic system is best to implement in Mangalore city, public opinion. Will enter for private buses stop traffic jams inside the city.