ಸುಳ್ಯದಲ್ಲಿ ಬಿಜೆಪಿ ಶಾಸಕರ ವಿರುದ್ಧವೇ ಆಕ್ರೋಶ, ಚುನಾವಣೆ ಹೊಸ್ತಿಲಲ್ಲಿ ಹತ್ತಕ್ಕೂ ಹೆಚ್ಚು ಕಡೆ ಬಹಿಷ್ಕಾರ ಬ್ಯಾನರ್, ಕೇಸರಿ ಕಾರ್ಯಕರ್ತರಿಂದಲೇ ಪ್ರತಿಭಟನೆ ಬಿಸಿ

15-03-23 10:31 pm       Mangalore Correspondent   ಕರಾವಳಿ

ಸುಳ್ಯದಲ್ಲಿ ನಿರಂತರ 30 ವರ್ಷಗಳಿಂದ ಬಿಜೆಪಿ ಶಾಸಕರೇ ಗೆದ್ದುಕೊಂಡು ಬಂದಿದ್ದಾರೆ. ಆರು ಬಾರಿಯ ಶಾಸಕ ಎಸ್. ಅಂಗಾರ ಈ ಬಾರಿ ಸಚಿವರಾದರೂ ಸುಳ್ಯ ಕ್ಷೇತ್ರದಲ್ಲಿ ಕನಿಷ್ಠ ಮೂಲಭೂತ ಸೌಕರ್ಯವನ್ನೇ ಮಾಡಲು ಸಾಧ್ಯವಾಗಿಲ್ಲ ಎಂದು ಜನರು ದೂರತೊಡಗಿದ್ದಾರೆ.

ಸುಳ್ಯ, ಮಾ.15: ಸುಳ್ಯದಲ್ಲಿ ನಿರಂತರ 30 ವರ್ಷಗಳಿಂದ ಬಿಜೆಪಿ ಶಾಸಕರೇ ಗೆದ್ದುಕೊಂಡು ಬಂದಿದ್ದಾರೆ. ಆರು ಬಾರಿಯ ಶಾಸಕ ಎಸ್. ಅಂಗಾರ ಈ ಬಾರಿ ಸಚಿವರಾದರೂ ಸುಳ್ಯ ಕ್ಷೇತ್ರದಲ್ಲಿ ಕನಿಷ್ಠ ಮೂಲಭೂತ ಸೌಕರ್ಯವನ್ನೇ ಮಾಡಲು ಸಾಧ್ಯವಾಗಿಲ್ಲ ಎಂದು ಜನರು ದೂರತೊಡಗಿದ್ದಾರೆ. ಬಿಜೆಪಿ ಶಾಸಕರಿದ್ದರೂ, ಆಡಳಿತಗಾರರ ನಿರ್ಲಕ್ಷ್ಯದಿಂದಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜನಸಾಮಾನ್ಯರು ಸಿಡಿದು ನಿಂತಿದ್ದಾರೆ. ಇದರ ಪರಿಣಾಮ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಕಡೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಎದ್ದು ನಿಂತಿದೆ.

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗ್ಗಲಡ್ಕ- ಜಟ್ಟಿಪಳ್ಳ ರಸ್ತೆ ಡಾಮರೀಕರಣಕ್ಕಾಗಿ ಜನರು ಚುನಾವಣೆ ಹೊಸ್ತಿಲಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಅದಕ್ಕೂ ಹಿಂದೆ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವಾಗ, ಅದು ಕಾಂಗ್ರೆಸಿನವರ ಕೆಲಸ, ಪ್ರತಿಭಟನೆ ಮಾಡಲಿ ಎಂದು ಬಿಜೆಪಿ ನಾಯಕರು ಅಣಕಿಸುವ ಮಾತುಗಳನ್ನು ಆಡಿದ್ದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಬಿಜೆಪಿ ಕಾರ್ಯಕರ್ತರು ಜನಸಾಮಾನ್ಯರ ಜೊತೆ ಸೇರಿ ಕೇಸರಿ ಶಾಲನ್ನೇ ಹೆಗಲಿಗೇರಿಸಿಕೊಂಡು ಪ್ರತಿಭಟನಾ ಜಾಥಾ ನಡೆಸಿದ್ದಾರೆ. ನಗರ ಪಂಚಾಯತ್ ಕಟ್ಟಡದ ಮುಂದೆ ತಮ್ಮ ಅಹವಾಲು ಹೇಳಿ ಶಾಸಕರ ವಿರುದ್ಧವೇ ಆಕ್ರೋಶ ತೋರಿಸಿದ್ದಾರೆ.

ಸುಳ್ಯ ತಾಲೂಕಿನ ಅಡ್ತಲೆ, ಮರ್ಕಂಜ, ದುಗಲಡ್ಕ, ಕೊಡಿಯಾಲ ಹೀಗೆ ಹಲವಾರು ಕಡೆ ಚುನಾವಣೆ ಬಹಿಷ್ಕಾರದ ಬ್ಯಾನರ್ ಕಾಣಿಸಿಕೊಂಡಿದೆ. ಇದಲ್ಲದೆ, ಬಾಳುಗೋಡು, ಮಡಪ್ಪಾಡಿಯಲ್ಲೂ ಜನರು ತಮ್ಮ ಅಭಿವೃದ್ಧಿಗಾಗಿ ಆಡಳಿತದ ವಿರುದ್ಧ ಸಿಡಿದು ನಿಂತಿದ್ದಾರೆ. ಹೆಚ್ಚಿನ ಕಡೆ ರಸ್ತೆ, ನೀರು ಎನ್ನುವ ಮೂಲ ಸೌಕರ್ಯಕ್ಕಾಗಿಯೇ ಜನರ ಆಕ್ರೋಶ ಎದ್ದಿರುವುದು.

ಸುಳ್ಯದಲ್ಲಿ ನಗರ ಪಂಚಾಯತ್ ನಿಂದ ತೊಡಗಿ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿಯದ್ದೇ ಆಡಳಿತ ಇದೆ. ಆದರೆ, ಅಭಿವೃದ್ಧಿ, ಮೂಲಸೌಕರ್ಯಕ್ಕಾಗಿ ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಜನರು ಚುನಾವಣೆ ಬಹಿಷ್ಕಾರದ ಅಸ್ತ್ರ ಮುಂದಿಡುತ್ತಾರೆ. ಸುಳ್ಯದಲ್ಲಿ ಈ ರೀತಿಯ ಬ್ಯಾನರ್ ಕಾಣಿಸಿಕೊಳ್ಳುವುದು ಪ್ರತಿ ಚುನಾವಣೆ ಸಂದರ್ಭದಲ್ಲೂ ಮಾಮೂಲಿ ಅನ್ನುವಂತಾಗಿದೆ. ಈ ಬಾರಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಗುದ್ದಲಿ ಪೂಜೆ ನಡೆಸುತ್ತಿದ್ದಾರೆ. ಒಂದು ಕಿಮೀ ಉದ್ದಕ್ಕೆ ಡಾಮರೀಕರಣ ಅಥವಾ ಕಾಂಕ್ರೀಟ್ ಮಾಡಲು ಮುಂದಾಗುತ್ತಾರೆ. ಒಂದು ರಸ್ತೆಗಾಗಿ ಗ್ರಾಮಸ್ಥರ ಬವಣೆ 8-10 ಕಿಮೀ ಉದ್ದಕ್ಕೆ ಇರುತ್ತದೆ. ಅಲ್ಲಿನ ಅಷ್ಟೂ ಜನರು ಕಷ್ಟ ಅನುಭವಿಸುತ್ತಿದ್ದಾರೆ. ರಾಜಕಾರಣಿಗಳು ಯಾಕೆ ಜನರ ಕಣ್ಣಿಗೆ ಮಣ್ಣೆರಚಬೇಕು ಎಂದು ಅಲ್ಲಿನ ಕಾರ್ಯಕರ್ತರು ಪ್ರಶ್ನೆ ಮಾಡುತ್ತಾರೆ. ವಿಶೇಷ ಅಂದ್ರೆ, ಶಾಸಕರ ಹಿಂದೆ ಮುಂದೆ ಓಡಾಡುವ ಪುಢಾರಿಗಳು ತಮ್ಮ ಊರಿಗೆ, ತಮ್ಮ ಮನೆಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಅವರೇ ಆರೋಪ ಮಾಡುತ್ತಾರೆ.

ಈ ಬಾರಿ ಅಂಗಾರ ಬದಲಾಗುವರೇ ?

ಈ ಬಾರಿ ಚುನಾವಣೆಗೆ ಮೊದಲೇ ಶಾಸಕ ಅಂಗಾರ ಬಗ್ಗೆ ಜನರಲ್ಲಿ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಅಂಗಾರ ಬದಲು ಹೊಸ ಮುಖ ಹುಡುಕಾಟ ನಡೆದಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ, ಶಾಸಕರ ಜೊತೆಗೆ ತಿರುಗಾಡುವ ಪ್ರಮುಖ ನಾಯಕರು ಅಂಗಾರ ಅವರನ್ನು ಬದಲಿಸಲು ಒಪ್ಪುತ್ತಿಲ್ಲ. ಅಂಗಾರ ಹೇಗೂ ಹೆಚ್ಚು ತಿಳಿದುಕೊಂಡಿಲ್ಲ. ಶಿಕ್ಷಣವೂ ಇಲ್ಲ. ಹೀಗಾಗಿ ಇವರೇ ಶಾಸಕರಾಗಿದ್ದರೆ, ತಮ್ಮ ಕೆಲಸ ಸರಾಗ ಆಗುತ್ತದೆ ಎನ್ನುವ ಭಾವನೆ ಇಲ್ಲಿನ ಪುಢಾರಿಗಳಲ್ಲಿದೆ. ಶಿಕ್ಷಿತನೊಬ್ಬ ಶಾಸಕನಾಗಿ ಬಂದರೆ, ಇವರ ಆಟಕ್ಕೆಲ್ಲ ಕುಣಿಯಲ್ಲ ಎನ್ನುವ ಅಳುಕೂ ಇವರಲ್ಲಿದೆ. ಹೀಗಾಗಿ ಸುಳ್ಯದ ಬಿಜೆಪಿ ಪುಢಾರಿಗಳಿಗೆ ಅಂಗಾರ ಇದ್ದರೇ ಒಳ್ಳೆದು ಎಂಬ ಅಭಿಪ್ರಾಯ ಇದೆಯಂತೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಡ್ಲಾಜೆ, ನಗ್ರಿ, ಅಲಂಕಾರು ಗ್ರಾಮದ ಶರವೂರಿನಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಕಾಣಿಸಿಕೊಂಡಿದೆ. ನಮ್ಮೂರಿನ ರಸ್ತೆ ಸರಿಪಡಿಸದಿದ್ದರೆ ಈ ಬಾರಿ ಚುನಾವಣೆ ಬಹಿಷ್ಕರಿಸುವುದಾಗಿ ಅಲ್ಲಿನ ಜನ ಬೆದರಿಕೆ ಹಾಕಿದ್ದಾರೆ. ಸವಣೂರು, ನೆಲ್ಯಾಡಿ ಭಾಗದಲ್ಲಿಯೂ ಜನರು ತಮ್ಮ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದ್ದಕ್ಕಾಗಿ ಆಕ್ರೋಶದಲ್ಲಿದ್ದಾರೆ. ಇದೇ ವೇಳೆ, ಚುನಾವಣಾ ಬಹಿಷ್ಕಾರ ಬ್ಯಾನರ್ ಹಾಕಿರುವ ಸ್ಥಳಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತೆರಳಿ ಜನರನ್ನು ಮನವೊಲಿಸಲು ಮುಂದಾಗಿದ್ದಾರೆ.

Sullia Banners boycotting polls by kesari member's against BJP MLA.