ಕಾರ್ಕಳದಲ್ಲಿ ಅಕ್ರಮ ಸಕ್ರಮದಲ್ಲೂ ಭ್ರಷ್ಟಾಚಾರ ; ಉಳ್ಳವನಿಗೇ ಐದೆಕರೆ ಭೂಮಿ, ಶಾಸಕರು ಇದಕ್ಕೆಷ್ಟು ಪರ್ಸೆಂಟ್ ಪಡೆದಿದ್ದಾರೆ ಎಂದು ಮುತಾಲಿಕ್ ಪ್ರಶ್ನೆ 

15-03-23 11:03 pm       Udupi Correspondent   ಕರಾವಳಿ

ಕಾರ್ಕಳ ಶಾಸಕ ಸುನಿಲ್ ಕುಮಾರ್  ವಿರುದ್ಧ ತೊಡೆ ತಟ್ಟಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತೊಂದು ಅಕ್ರಮದ ದಾಖಲೆ ಬಿಚ್ಚಿಟ್ಟಿದ್ದಾರೆ.

ಉಡುಪಿ, ಮಾ.15 : ಕಾರ್ಕಳ ಶಾಸಕ ಸುನಿಲ್ ಕುಮಾರ್  ವಿರುದ್ಧ ತೊಡೆ ತಟ್ಟಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತೊಂದು ಅಕ್ರಮದ ದಾಖಲೆ ಬಿಚ್ಚಿಟ್ಟಿದ್ದಾರೆ. ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿ ಮೌಲ್ಯದ 4.75 ಎಕರೆ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿಸಿದ ಕುರಿತು ಆರೋಪ ಮಾಡಿದ್ದಾರೆ. 

ಹೆಬ್ರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಕಾರ್ಕಳದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಹಾಗೂ ಹಿಂದುತ್ವಕ್ಕೆ ಧಕ್ಕೆಯಾಗಿದೆ ಎಂದು ಮೂಲ ಬಿಜೆಪಿ ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಕಾರ್ಕಳದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ. ಬಿಜೆಪಿ ಕಾರ್ಯಕರ್ತರು ನನಗೆ ಇಡೀ ತಾಲೂಕಿನಲ್ಲಿ ಬೆಂಬಲ ನೀಡುತ್ತಾರೆಂಬ ವಿಶ್ವಾಸ ಇದೆ. ಸುನಿಲ್ ಕುಮಾರ್ ಎಸಗಿರುವ ಭ್ರಷ್ಟಾಚಾರಗಳನ್ನು ಒಂದೊಂದೇ ತೆರೆದಿಡಲಿದ್ದೇನೆ ಎಂದು ಹೇಳಿದರು. ಅಕ್ರಮ ಸಕ್ರಮ ನಿಯಮವನ್ನು ಉಲ್ಲಂಘಿಸಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕೋಟ್ಯಧಿಪತಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಜಾಗ ಮಂಜೂರು ಮಾಡಲಾಗಿದೆ. ಶಾಸಕರು ಇದಕ್ಕೆಷ್ಟು ಪರ್ಸೆಂಟೇಜ್ ಪಡೆದಿದ್ದಾರೆ ಎನ್ನೋದು ಬಹಿರಂಗ ಆಗಬೇಕೆಂದರು.  

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷರಾಗಿದ್ದ ಸಮಿತಿಯ ಮುಂದೆ ಅಕ್ರಮ- ಸಕ್ರಮ ವಿಲೇವಾರಿ ಬಗ್ಗೆ ಜನಸಾಮಾನ್ಯರಿಂದ ಸುಮಾರು 2000 ಅರ್ಜಿಗಳು ಬಂದಿದ್ದವು. ಆದರೆ ಅವೆಲ್ಲವನ್ನೂ ತಿರಸ್ಕರಿಸಿ ಸರಕಾರಿ ಪ್ರಥಮ ದರ್ಜೆ ಗುತ್ತಿಗೆದಾರ ಅನಂತಕೃಷ್ಣ ಶೆಟ್ಟಿ ಎಂಬವರಿಗೆ ಅಕ್ರಮವಾಗಿ ಸರ್ವೆ ನಂ 841-1 ರಲ್ಲಿ 4.7 ಎಕ್ರೆ ಜಾಗವನ್ನು ಮಂಜೂರು ಮಾಡಲಾಗಿದೆ. ಇದನ್ನು ಎಷ್ಟು ಕಮೀಷನ್ ಪಡೆದು ಮಂಜೂರು ಮಾಡಿದ್ದಾರೆ ಎಂದು ಸುನಿಲ್ ಕುಮಾರ್ ಉತ್ತರಿಸಬೇಕು. ಇದು ಜನಸಾಮಾನ್ಯರಿಗೆ ಮಾಡಿದ ದ್ರೋಹ ಎಂದರು.

Congress wants to privatise Escoms, says BJP minister | Deccan Herald

ಅಕ್ರಮ ಸಕ್ರಮ ಅರ್ಜಿ ಸಲ್ಲಿಸುವಾಗ ತಾನು ಪ್ರಥಮ ದರ್ಜೆ ಗುತ್ತಿಗೆದಾರನಾದರೂ ಅನಂತಕೃಷ್ಣ ಶೆಟ್ಟಿ ತಾನೊಬ್ಬ ಕೃಷಿಕ ಎಂದು ಸುಳ್ಳು ಹೇಳಿದ್ದ. ಅಲ್ಲದೆ, ಸ್ವತಃ ಒಬ್ಬ  ಕೋಟ್ಯಧಿಪತಿ ಆಗಿದ್ದರೂ, ಬಡವರ ಪಾಲಾಗಬೇಕಿದ್ದ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು. ಇವರ ಕೈಯಲ್ಲಿರುವ ಭೂಮಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಶಾಸಕ ಸುನಿಲ್ ಕುಮಾರ್ ವಿರುದ್ಧದ ಭೂಹಗರಣದ ದಾಖಲೆಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದೇವೆ‌. ಅಕ್ರಮ ಸಕ್ರಮ ಭೂಮಿ ಮಂಜೂರಾತಿ ಬಗ್ಗೆಯೂ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ. ಕ್ರಮ ಕೈಗೊಳ್ಳಲು ಮೀನಮೇಷ ಎಣಿಸಿದರೆ ಲೋಕಯುಕ್ತ ಕಚೇರಿ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 
 
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆ  ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಆಡ್ಯಾರ್, ನಾಯಕರಾದ ಹರೀಶ್ ಅಧಿಕಾರಿ, ಸುಧೀಂದ್ರ ಹೆಬ್ರಿ, ರಾಘವ್ ನಾಯಕ್ ಮುದ್ರಾಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Karkala Pramod Muthalik slams Minister Sunil kumar over percentage.