ಸುಳ್ಯದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಭಿನ್ನಮತ ಸ್ಫೋಟ ; ಸುಳ್ಯ, ಕಡಬದಲ್ಲಿ ಕಾರ್ಯಕರ್ತರ ಸಭೆ, ನಂದಕುಮಾರ್ ಗೆ ಟಿಕೆಟ್ ನೀಡದಿದ್ದರೆ ತಟಸ್ಥ, ಬೆಂಗಳೂರಿಗೆ ನಿಯೋಗ  

26-03-23 10:04 pm       Mangalore Correspondent   ಕರಾವಳಿ

ಸುಳ್ಯ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಗಣಿ ಕೃಷ್ಣಪ್ಪ ಅವರನ್ನು ಘೋಷಿಸಿದ ಬೆನ್ನಲ್ಲೇ ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ.

ಸುಳ್ಯ, ಮಾ.26 : ಸುಳ್ಯ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಗಣಿ ಕೃಷ್ಣಪ್ಪ ಅವರನ್ನು ಘೋಷಿಸಿದ ಬೆನ್ನಲ್ಲೇ ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ. ಸುಳ್ಯ ಮತ್ತು ಕಡಬ ಬ್ಲಾಕ್ ಮಟ್ಟದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿ, ಕಾಂಗ್ರೆಸ್ ನಾಯಕರ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಯದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಡಿಕೇರಿ ಮೂಲದ ಎಚ್.ಎಂ. ನಂದಕುಮಾರ್ ಪರವಾಗಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ತುರ್ತು ಸಭೆ ನಡೆಸಿದ್ದು, ಏಕಾಏಕಿ ಜಿಗಣಿ ಕೃಷ್ಣಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು, ಬ್ಲಾಕ್ ಮಟ್ಟದ ಪ್ರಮುಖರು ಭಾನುವಾರ ಬೆಳಗ್ಗೆ ಸೇರಿದ್ದು ನಂದಕುಮಾರ್ ಅವರಿಗೇ ಟಿಕೆಟ್ ಕೊಡಬೇಕೆಂದು ಆಗ್ರಹ ಮಾಡಿದ್ದಾರೆ. ಇದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಒತ್ತಾಯಿಸಲು ನಿರ್ಧರಿಸಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ನಾಯಕರು, ನಾಲ್ಕು ವರ್ಷಗಳಿಂದ ನಂದಕುಮಾರ್ ಸುಳ್ಯದಲ್ಲಿ ಕಾರ್ಯಕರ್ತರ ಜೊತೆಗಿದ್ದಾರೆ. ಅವರಿಗೇ ಟಿಕೆಟ್ ಸಿಗುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ ಕೊನೆಕ್ಷಣದಲ್ಲಿ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ನಾವು ಬೇಕಾದರೆ ನಂದಕುಮಾರ್ ಅವರನ್ನು ಪಕ್ಷೇತರ ನಿಲ್ಲಿಸಿ ಗೆಲ್ಲಿಸುತ್ತೇವೆ. ಹಾಗಾಗಿ ನಂದಕುಮಾರ್ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಬೆಂಗಳೂರಿಗೆ ನಿಯೋಗ ತೆರಳಲು ನಿರ್ಣಯಕ್ಕೆ ಬಂದಿದ್ದಾರೆ.

ಭಾನುವಾರ ಸಂಜೆ ಕಡಬ ಬ್ಲಾಕ್ ಮಟ್ಟದ ಮುಖಂಡರು, ಕಾರ್ಯಕರ್ತರು ಸಭೆ ನಡೆಸಿದ್ದು, ಈ ಬಾರಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಬೇಕಿದ್ದರೆ ನಂದಕುಮಾರ್ ಅವರಿಗೇ ಟಿಕೆಟ್ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಎರಡೂ ಸಭೆಯಲ್ಲಿ ಸುಳ್ಯ ವಿಧಾನಸಭೆ ಕ್ಷೇತ್ರ ಸಮಿತಿ ಮುಖಂಡರು ಭಾಗವಹಿಸಿಲ್ಲವಾದರೂ, ಇತರೆಲ್ಲ ಪ್ರಮುಖರು ಸೇರಿದ್ದರು. ಎರಡೂ ಕಡೆ ನೂರಾರು ಕಾರ್ಯಕರ್ತರು ಸೇರಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನಂದಕುಮಾರ್ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆಗೆ ಸಂಪರ್ಕದಲ್ಲಿದ್ದು ವರ್ಚಸ್ಸು ಹೊಂದಿದ್ದಾರೆ. ಏಕಾಏಕಿ ಹೊರಗಿನ ವ್ಯಕ್ತಿಯನ್ನು ಕಣಕ್ಕಿಳಿಸಿದರೆ ನಾವು ಕೆಲಸ ಮಾಡುವುದಿಲ್ಲ ಎಂದು ಕೆಲವೊಬ್ಬರು ಅಭಿಪ್ರಾಯ ಹೇಳಿದ್ದಾರೆ.

ನಾವು ಸಭೆ ನಡೆಸಿರುವುದು ಪಕ್ಷದ ಗೆಲ್ಲುವ ಅಭ್ಯರ್ಥಿ ನಂದ ಕುಮಾರ್ ಪರವಾಗಿ ಹೊರತು ಪಕ್ಷ ವಿರೋಧಿಯಾಗಿ ಸಭೆ ನಡೆಸಿಲ್ಲ. 35 ವರ್ಷಗಳಿಂದ ಕಾಂಗ್ರೆಸ್ ಶಾಸಕರಿಲ್ಲದೆ, ಕಾರ್ಯಕರ್ತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ನಂದಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಈ ಬಾರಿ ಕಾಂಗ್ರೆಸ್ ಗೆಲ್ಲುವ ಅವಕಾಶ ಇದೆ ಎಂದು ಭವಾನಿಶಂಕರ್ ಕಲ್ಮಡ್ಕ ಹೇಳಿದ್ದಾರೆ. ಸಭೆಯಲ್ಲಿ ಹಿಂದು, ಮುಸ್ಲಿ, ಕ್ರಿಸ್ತಿಯನ್ ಮುಖಂಡರು ಭಾಗವಹಿಸಿದ್ದರು. ಬ್ಲಾಕ್ ಸಮಿತಿಯಾಗಲೀ, ಜಿಲ್ಲಾ ಮಟ್ಟದ ನಾಯಕರಾಗಲೀ ನಮ್ಮ ಅಭಿಪ್ರಾಯ ಕೇಳದೆ ಏಕಾಏಕಿ ಟಿಕೆಟ್ ಘೋಷಣೆ ಮಾಡಿದ್ದಾರೆ, ನಂದಕುಮಾರ್ ಗೆ ಟಿಕೆಟ್ ನೀಡದೇ ಇದ್ದರೆ ನಾವು ತಟಸ್ಥರಾಗುತ್ತೇವೆ ಎಂಬುದು ಹೆಚ್ಚಿನವರ ಅಭಿಪ್ರಾಯ ಆಗಿತ್ತು. ಸೋಮವಾರ ಸುಳ್ಯದಿಂದ ಬೆಂಗಳೂರಿಗೆ ತೆರಳಲು ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕರ್ತರು ಬೆಂಗಳೂರಿನಲ್ಲಿ ಮುಖಂಡರ ಮುಂದೆ ಹಕ್ಕೊತ್ತಾಯ ಮಾಡಲು ಮುಂದಾಗಿದ್ದಾರೆ.

Sullia Congress ticket for Krishnappa creates division, members of Nandakumar arrange immediate meeting.