ಮಂಗಳೂರಿನಲ್ಲಿ ಮೆಗಾ ಫುಡ್ ಪಾರ್ಕ್ ; ನೂರು ಕೋಟಿ ಯೋಜನೆ - ರಾಜ್ಯೋತ್ಸವದಲ್ಲಿ ಸಚಿವ ಕೋಟ ಹೇಳಿಕೆ 

01-11-20 12:57 pm       Mangaluru Correspondant   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಮೆಗಾ ಫುಡ್ ಪಾರ್ಕ್ ನಿರ್ಮಿಸಲಾಗುವುದು ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರು, ನವೆಂಬರ್ 1: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಮೆಗಾ ಫುಡ್ ಪಾರ್ಕ್ ನಿರ್ಮಿಸಲಾಗುವುದು ಎಂದು ರಾಜ್ಯದ ಮೀನುಗಾರಿಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ನೆಹರೂ ಮೈದಾನದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವರು ಧ್ವಜಾರೋಹಣ ಸಂದೇಶ ನೀಡುತ್ತಾ ಈ ಮಾತು ಹೇಳಿದ್ದಾರೆ. ವನ್ಯ ಜೀವಿಗಳಿಂದ ಸಂಭವಿಸುವ ಹಾನಿ ಪ್ರಕರಣಗಳಿಗೆ ನೀಡಲಾಗುತ್ತಿದ್ದ 5 ಲಕ್ಷ ರೂ. ಪರಿಹಾರ ಹಣವನ್ನು 7.50 ಲಕ್ಷ ರೂ.ಗೆ ಪರಿಷ್ಕರಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ಕೋವಿಡ್ ಸಂದರ್ಭ 7 ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಜಿಲ್ಲೆಯ 8 ಮೆಡಿಕಲ್ ಕಾಲೇಜು ಸೇರಿದಂತೆ 9 ಪ್ರಯೋಗಾಲಯಗಳು  ಕೋವಿಡ್ ಪರೀಕ್ಷಾ ಸೌಲಭ್ಯ ಹೊಂದಿದೆ ಎಂದವರು ಹೇಳಿದರು. 

ಕನ್ನಡದ ಕಲಿಕೆಗಾಗಿ ಆಸಕ್ತರಿಗೆ ಇ- ಕನ್ನಡ ಕಲಿಕಾ ಅಕಾಡೆಮಿಯನ್ನು ಸ್ಥಾಪಿಸಿ ಪ್ರತ್ಯೇಕ ಅಂತರ್ಜಾಲ ವೆಬ್ ಸೈಟ್ ಸಿದ್ಧಪಡಿಸಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನೂತನ ಕೈಗಾರಿಕಾ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು 5ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಹಾಗೂ ಇಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಇಪ್ಪತ್ತೇಳು ಮಂದಿಗೆ ವೈಯಕ್ತಿಕ ಹಾಗೂ ಹನ್ನೊಂದು ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸದ ನಳಿನ್  ಕುಮಾರ್ ಕಟೀಲ್ , ಶಾಸಕರಾದ ಭರತ್ ರಾಜ್ ಶೆಟ್ಟಿ , ವೇದವ್ಯಾಸ್ ಕಾಮತ್ , ಮೇಯರ್ ದಿವಾಕರ್ ಪಾಂಡೇಶ್ವರ, ಜಿಲ್ಲಾ ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು , ತುಳು ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲಸಾರ್, ಪ್ರದೀಪಕುಮಾರ್ ಕಲ್ಕೂರ , ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ , ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ , ಐಜಿಪಿ ದೇವಜ್ಯೋತಿ ರೇ, ಮನಪಾ ಕಮಿಷನರ್ ಅಕ್ಷಯ್ ಶ್ರೀಧರ್ ಉಪಸ್ಥಿತರಿದ್ದರು.

100 crores Mega food park to be initiated in Mangalore States Minister Kota Srinivas Poojary at the Kannada Rajyotsava ceremony. The formation of Karnataka state, or Kannada Rajyotsava was celebrated with a simple ceremony by the district administration at Nehru Maidan here on Friday, November 1, 2020.