'ಕನ್ನಡ ಭಾಷಾ ಸಂಸ್ಕೃತಿ ಅಳಿಸುವ ಪ್ರಯತ್ನ ಸಲ್ಲದು'

02-11-20 11:01 am       Mangalore Correspondent   ಕರಾವಳಿ

ಆಂಗ್ಲ ಭಾಷೆಯನ್ನು ಕನ್ನಡದೊಂದಿಗೆ ಮಿಶ್ರಣಗೊಳಿಸಿ ಸಂಸ್ಕೃತಿ ನಾಶಗೊಳಿಸಲಾಗುತ್ತಿದೆ. ಇದನ್ನು ಸರಿಪಡಿಸಲು ಪ್ರಯತ್ನಿಸಿದರೂ ಆ ಪ್ರಯತ್ನಗಳು ಸಂಪೂರ್ಣಗೊಳ್ಳಲಿಲ್ಲ ಎಂದು ಕೆ. ಮಹಾಬಲ ಶೆಟ್ಟಿ ಅಭಿಪ್ರಾಯಪಟ್ಟರು.

ಉಳ್ಳಾಲ, ನವೆಂಬರ್ 02: ನಾವು ಯಾವುದೇ ಭಾಷಾ ವಿರೋಧಿಗಳಲ್ಲ. ಎಲ್ಲ ಭಾಷೆಗಳನ್ನು ಗೌರವಿಸುವವರು. ಆದರೆ ಕನ್ನಡ ಸಂಸ್ಕೃತಿಯನ್ನು ಅಳಿಸುವ ಪ್ರಯತ್ನ ಸಹಿಸಲು ಅಸಾಧ್ಯ ಎಂದು ಮಂಗಳೂರು ಹರಿಕಥಾ ಪರಿಷತ್ ನ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಅಭಿಪ್ರಾಯಪಟ್ಟರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ವತಿಯಿಂದ ತೊಕ್ಕೊಟ್ಟಿನ ಖಾಸಗಿ ಸಭಾಂಗಣದಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವದಂತಹ ಉತ್ಸವಗಳನ್ನು ಬಹಳ ಉತ್ಸಾಹದಿಂದ ಆಚರಿಸುವಂತಾಗಬೇಕು. ಕರ್ನಾಟಕದ ಅವಿಭಾಜ್ಯ ಅಂಗ ಕಾಸರಗೋಡು. ಅದು ಪುನಶ್ಚೇತನಗೊಂಡು ನಮ್ಮೊಂದಿಗೆ ಸೇರುವ ಅವಶ್ಯಕತೆ ಇದೆ. ಆಂಗ್ಲ ಭಾಷೆಯನ್ನು ಕನ್ನಡದೊಂದಿಗೆ ಮಿಶ್ರಣಗೊಳಿಸಿ ಸಂಸ್ಕೃತಿ ನಾಶಗೊಳಿಸಲಾಗುತ್ತಿದೆ. ಸಂಬಂಧ ಪಟ್ಟ ಇಲಾಖೆಗಳು ಇದನ್ನು ಸರಿಪಡಿಸಲು ಪ್ರಯತ್ನಿಸಿದರೂ ಆ ಪ್ರಯತ್ನಗಳು ಸಂಪೂರ್ಣಗೊಳ್ಳಲಿಲ್ಲ. ಕನ್ನಡದ ಉದ್ದಾರ, ಸಾಹಿತ್ಯ , ಸಂಸ್ಕೃತಿ ಅನುಷ್ಠಾನಕ್ಕಾಗಿ ದುಡಿಯುವ ಹೊಣೆಗಾರಿಕೆ ಮಂದಿನ ಯುವಪೀಳಿಗೆಯದ್ದು ಎಂದರು.

ನಿವೃತ್ತ ಶಿಕ್ಷಕರಾದ ವಾಸುದೇವರಾವ್ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕರಾದ ರತ್ನಾವತಿ ಜೆ ಬೈಕಾಡಿ, ನಿವೃತ್ತ ಅಂಗನವಾಡಿ ಶಿಕ್ಷಕಿ ಶಶಿಕಲಾ ಗಟ್ಟಿ, ನಿವೃತ್ತ ಪ್ರಾಚಾರ್ಯರಾದ ಲಲಿತಾ ಕೆ ಆಚಾರ್ ಅವರನ್ನು ಸನ್ಮಾನಿಸಲಾಯಿತು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಮಾಜಿ ಶಾಸಕ ಕೆ ಜಯರಾಮ ಶೆಟ್ಟಿ, ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಹೈದರ್ ಪರ್ತಿಪ್ಪಾಡಿ, ಕೋಶಾಧಿಕಾರಿ ಆನಂದ ಕೆ ಅಸೈಗೋಳಿ, ದ.ಕ. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಕೆ.ಎಂ.ಕೆ ಮಂಜನಾಡಿ, ಅಬ್ದುಲ್ ಅಜೀಜ್ ಹಕ್ ಮೊದಲಾದವರು ಇದ್ದರು.

Need to take efforts to save Kannada culture and language stated Harikata Parishath President  Mahabala Shetty on the occasion of kannada rajyotsava 2020 function held at Ullal.