ಸಿದ್ದರಾಮಯ್ಯಗೆ ದೆಹಲಿ ಬಿಜೆಪಿ ನಾಯಕರ ಸಖ್ಯ, ಬಿಜೆಪಿ ಸೇರುವ ಗುಮಾನಿ ; ಪ್ರತಾಪಸಿಂಹ 

04-11-20 11:20 pm       Headline Karnataka News Network   ಕರಾವಳಿ

ಉಪ ಚುನಾವಣೆ ಫಲಿತಾಂಶ ಬಂದ ಕೂಡಲೇ ಸಿಎಂ ಬದಲಾವಣೆಯಯಾಗತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರು ಸಂಸದ ಪ್ರತಾಪಸಿಂಹ ಗರಂ ಆಗಿದ್ದಾರೆ. 

ಮಂಗಳೂರು, ನವೆಂಬರ್ 4: ಉಪ ಚುನಾವಣೆ ಫಲಿತಾಂಶ ಬಂದ ಕೂಡಲೇ ಸಿಎಂ ಬದಲಾವಣೆಯಯಾಗತ್ತೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರು ಸಂಸದ ಪ್ರತಾಪಸಿಂಹ ಗರಂ ಆಗಿದ್ದಾರೆ. 

ಬಿಜೆಪಿ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಪ್ರತಾಪಸಿಂಹ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. 

ಸಿದ್ದರಾಮಯ್ಯರಿಗೆ ದೆಹಲಿಯ ಬಿಜೆಪಿ ಮೂಲದ ಮಾಹಿತಿ ಬಂದಿದೆಯಂತೆ.. ದೆಹಲಿಯಿಂದ ಮಾಹಿತಿ ಬಂದಿರಬೇಕಿದ್ದರೆ ಇವರು ದೆಹಲಿ ಬಿಜೆಪಿ ನಾಯಕರ ಸ್ನೇಹ ಇಟ್ಟುಕೊಂಡಿರಬೇಕು. ಸಿದ್ದರಾಮಯ್ಯ ಬಿಜೆಪಿ ನಾಯಕರ ಸ್ನೇಹ ಇಟ್ಟುಕೊಂಡಿರುವುದು ಸ್ಪಷ್ಟವಾಗುತ್ತಿದೆ.‌ ಇದರಿಂದ ಮುಂದೆ ಸಿದ್ದರಾಮಯ್ಯನೇ ಬಿಜೆಪಿ ಸೇರಲಿದ್ದಾರೆಯೇ ಎಂಬ ಗುಮಾನಿ ಬರುತ್ತಿದೆ ಎಂದು ಕಟಕಿಯಾಡಿದ್ದಾರೆ. 

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಆದವರು ಸಿಎಂ ಆಗುವುದು ಸಾಮಾನ್ಯ ನಿಯಮ. ಎಸ್ಸೆಂ ಕೃಷ್ಣ ಕಾಲದಿಂದಲೂ ಇದೇ ನಿಯಮ ನಡೆದುಕೊಂಡು ಬಂದಿದೆ. ಪರಮೇಶ್ವರ್ ಕಾಲದಲ್ಲಿ ಅವರು ಕೊರಟಗೆರೆಯಲ್ಲಿ ಸೋತಿದ್ದರಿಂದ ಸಿಎಂ ಅವಕಾಶ ತಪ್ಪಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು.‌ ಈಗ ಡಿಕೆಶಿ ಅಧ್ಯಕ್ಷರಾಗಿದ್ದು ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಅವರೇ ಸಿಎಂ ಆಗ್ತಾರೆ. ಆದ್ರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ತರಾತುರಿಯಲ್ಲಿದ್ದಾರೆ. ಇದಕ್ಕಾಗಿ ದೆಹಲಿ ಮಟ್ಟದ ಬಿಜೆಪಿ ನಾಯಕರ ಸಖ್ಯ ಬೆಳೆಸಿಕೊಂಡಿದ್ದಿರಬೇಕು ಎಂದು ವ್ಯಂಗ್ಯದ ಮಾತಿನಿಂದ ಚುಚ್ಚಿದ್ದಾರೆ. 

ಲವ್ ಜಿಹಾದ್ ವಿರುದ್ಧ ಕಾನೂನು ಬರಬೇಕು 

ಒಂದು ದಶಕದಿಂದ ಲವ್ ಜಿಹಾದ್ ವಿಚಾರ ಕೇಳಿಬರುತ್ತಿದೆ. ಆದರೆ, ಪ್ರೀತಿ, ಪ್ರೇಮದ ಹೆಸರಲ್ಲಿ ಮುಸ್ಲಿಮರು ಮೋಸ ಮಾಡ್ತಾರೆ ಅಂದ್ರೆ ಯಾರು ಕೂಡ ನಂಬುತ್ತಿರಲಿಲ್ಲ.‌ ಈಗ ಕೋರ್ಟ್ ಸ್ವತಃ ಹೇಳಿದ್ದು ವಿವಾಹಕ್ಕಾಗಿ ಮತಾಂತರ ಅಗತ್ಯವಿಲ್ಲ ಎಂದು ಹೇಳುವ ಮೂಲಕ ದೇಶದಲ್ಲಿ ಲವ್ ಜಿಹಾದ್ ಇರುವುದನ್ನು ಹೇಳಿದೆ. ಯುಪಿಯಲ್ಲಿ ಮತಾಂತರ, ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಲು ಯೋಗಿ ಸರಕಾರ ಮುಂದಾಗಿದೆ. ಪ್ರೀತಿಸುವಾಗ ಇರದ ಧರ್ಮದ ಅಡ್ಡಿ ವಿವಾಹಕ್ಕೆ ಯಾಕೆ ಬರಬೇಕೆಂಬುದು ಪ್ರಶ್ನೆ. ಹೀಗಾಗಿ ಇದರ ಹಿಂದೆ ಧರ್ಮಾಂಧತೆ ಇರುವುದು ಸ್ಪಷ್ಟವಾಗಿದೆ. ಇದನ್ನು ಹತ್ತಿಕ್ಕಲು ದೇಶದ ಎಲ್ಲಾ ರಾಜ್ಯಗಳಲ್ಲಿ ಕಠಿಣ ಕಾನೂನು ಬರಬೇಕು ಎಂದು ಸಂಸದ ಪ್ರತಾಪಸಿಂಹ ಆಗ್ರಹಿಸಿದ್ದಾರೆ.

Mysore MP Prathap Simha Nayak lashed out at Congress leader Siddaramaiah in Mangalore over saying R R Nagar Elections will result in New CM to Karnataka.