ಪ್ರೀತಿ, ಪ್ರೇಮದ ಹೆಸರಲ್ಲಿನ ಮತಾಂತರಕ್ಕೆ ಅಂಕುಶ ; ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು : ಸಿಎಂ ಯಡಿಯೂರಪ್ಪ

05-11-20 01:15 pm       Mangalore Correspondent   ಕರಾವಳಿ

ಹಣದ ಆಮಿಷ ಮತ್ತು ಪ್ರೀತಿ, ಪ್ರೇಮದ ಹೆಸರಲ್ಲಿ ನಡೆಯುವ ಮತಾಂತರಗಳಿಗೆ ಅಂತ್ಯ ಹಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ಮಂಗಳೂರು, ನವೆಂಬರ್ 05: ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮಕ್ಕೆ ಕಾನೂನು ತರಲಿದ್ದೇವೆ. ಹಣದ ಆಮಿಷ ಮತ್ತು ಪ್ರೀತಿ, ಪ್ರೇಮದ ಹೆಸರಲ್ಲಿ ನಡೆಯುವ ಮತಾಂತರಗಳಿಗೆ ಅಂತ್ಯ ಹಾಡಲಾಗುವುದು. ಈ ಬಗ್ಗೆ ಕಾನೂನು ತಜ್ಞರಿಂದ ವರದಿ ನೀಡಲು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. 

ಮಂಗಳೂರಿನ ರಮಣ ಪೈ ಸಭಾಂಗಣದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರ್. ಆರ್. ನಗರದಲ್ಲಿ 40 ಸಾವಿರ ಮತ್ತು ಶಿರಾದಲ್ಲಿ 25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲಲಿದೆ. ಅದೇ ರೀತಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಗಳಲ್ಲೂ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದ್ದು ಕಾಂಗ್ರೆಸ್ ದಯನೀಯ ಸೋಲು ಕಾಣಲಿದೆ.‌ ಈ ಬಾರಿಯ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಆಗಲಿದೆ. ಬಿಜೆಪಿ ಪಾಲಿಗೆ ಹೊಸ ಶಕ್ತಿ ನೀಡಲಿದೆ. ಪಕ್ಷಕ್ಕೆ ನೆಲೆ ಇಲ್ಲದ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪಕ್ಷಕ್ಕೆ ಬಲ ಬಂದಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 140 ರಿಂದ 150 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.‌ 

ಮಹಾನಗರ ಪಾಲಿಕೆಗಳಿಗೆ ತಲಾ 50 ಕೋಟಿ ಬಿಡುಗಡೆ 

ಕೋವಿಡ್ ಬಳಿಕ ರಾಜ್ಯದ ಹಣಕಾಸು ಪರಿಸ್ಥಿತಿ ಸುಧಾರಿಸುತ್ತಿದೆ. ಶಾಸಕರ ಕ್ಷೇತ್ರಗಳಿಗೆ ತಲಾ 50 ಲಕ್ಷ ಬಿಡುಗಡೆ ಮಾಡಿದ್ದೇನೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಅಭಿವೃದ್ಧಿಗಾಗಿ ಹತ್ತು ಪಾಲಿಕೆಗಳಿಗೆ ತಲಾ 50 ಕೋಟಿ ಬಿಡುಗಡೆ ಮಾಡುತ್ತೇನೆ. ಮಂಗಳೂರು, ಮೈಸೂರು, ಬೆಳಗಾವಿ, ವಿಜಯಪುರ, ಹುಬ್ಬಳ್ಳಿ ಹೀಗೆ ಹತ್ತು ಮಹಾನಗರ ಪಾಲಿಕೆಗಳಲ್ಲಿ ಮಹಾತ್ಮ ಗಾಂಧಿ ವಿಕಾಸ್ ಯೋಜನೆಯಡಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು.‌ ಮನಪಾ ವ್ಯಾಪ್ತಿಯಲ್ಲಿ 120 ಕೋಟಿ ವೆಚ್ಚ ಮಾಡಲು ಈ ಯೋಜನೆಯಡಿ ಅವಕಾಶ ಇದೆ ಎಂದು ಹೇಳಿದರು.‌ 

ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದು ಹಣ ಬಿಡುಗಡೆಗೆ ವರದಿ ಕೇಳಿದ್ದೇನೆ. ಆರು ತಿಂಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬದಲಾವಣೆ ಕಾಣಲಿದೆ ಎಂದು ಹೇಳಿದರು. 

ಕಾಂಗ್ರೆಸ್ ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ಕುಟುಂಬ ರಾಜಕಾರಣದಲ್ಲೇ ಜೋತು ಬಿದ್ದು ಅವನತಿಯ ದಾರಿ ಹಿಡಿದಿದೆ. ರಾಜೀವ ಗಾಂಧಿಯ ಮಾತನ್ನು ನಿಜಗೊಳಿಸಿದ್ದು ಇದೇ ಕಾಂಗ್ರೆಸಿಗರು. ಒಂದು ರೂಪಾಯಿ ಬಿಡುಗಡೆ ಮಾಡಿದರೆ ಹತ್ತು ಪೈಸೆಯಷ್ಟೇ ತಳ ಹಂತಕ್ಕೆ ಮುಟ್ಟುತ್ತದೆ ಎಂದಿದ್ದರು ರಾಜೀವ ಗಾಂಧಿ. ಈ ಮಾತನ್ನು ಹುಸಿಗೊಳಿಸಲು ಮೋದಿ ಬರಬೇಕಾಯಿತು. ಮೋದಿ ಕಾಲದಲ್ಲಿ ಡಿಜಿಟಲ್ ಆಗಿದ್ದರಿಂದ ಅನುದಾನ ನೇರ ಫಲಾನುಭವಿಗೆ ತಲುಪುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು. 

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಡಿ.ವಿ ಸದಾನಂದ ಗೌಡ, ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಅರವಿಂದ ಲಿಂಬಾವಳಿ ಉಪಸ್ಥಿತರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

Video: 

Rs 125 crore to be released for Mangalore City Corporation stated CM Yediyurappa in Mangalore. Chief Minister B S Yediyurappa inaugurated BJP’s special executive meeting here at TV Raman Pai Hall on Thursday, November 4.