ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ ; ಈಶ್ವರಪ್ಪ ಲೇವಡಿ

06-11-20 10:18 am       Udupi Correspondent   ಕರಾವಳಿ

'ಸಿದ್ದರಾಮಯ್ಯನಿಗೆ ಹುಚ್ಚು' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಉಡುಪಿ, ನವೆಂಬರ್ 06 : 'ಸಿದ್ದರಾಮಯ್ಯನಿಗೆ ಹುಚ್ಚು' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಗುರುವಾರ ಸಂಜೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದ ಅವರನ್ನು ಮಾಧ್ಯಮದ ಮಂದಿ ಮಾತಿಗೆಳೆದರು.‌ ಸಿದ್ದರಾಮಯ್ಯ, ಸಿಎಂ ಬದಲಾವಣೆ ಆಗುತ್ತೆ ಎಂದಿದ್ದಾರಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ಮುಖ್ಯಮಂತ್ರಿ ಸ್ಥಾನ ಹೋದ ನಂತರ ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ.

ರಾಜ್ಯದಲ್ಲಿ ಯಾಕೆ ಮುಖ್ಯಮಂತ್ರಿ ಬದಲಾವಣೆ ಆಗಬೇಕು, ಸಿದ್ದರಾಮಯ್ಯನಿಗೆ ಇಂತಹ ಸುದ್ದಿಗಳೇನು ಆಕಾಶದಿಂದ ಉದುರಿ ಬಿತ್ತಾ? ಮೋದಿ, ನಡ್ಡಾ, ಅಮಿತ್‌ ಶಾ ಅವರೇನಾದರೂ ಫೋನ್‌ ಮಾಡಿ ಹೇಳಿದ್ರಾ..? ನಾನು ದೇವಸ್ಥಾನದಲ್ಲಿ ಇದೀನಿ. ಇಲ್ಲದಿದ್ದರೆ ಸಿದ್ದರಾಮಯನಿಗೆ ಇನ್ನೂ ಕೆಟ್ಟಪದ ಬಳಸ್ತಿದ್ದೆ. ಸಿದ್ದರಾಮಯ್ಯ ಇಂತಹ ಸುದ್ದಿಗಳನ್ನು ಹರಡುವುದನ್ನು ಬಿಟ್ಟು ಜನರ ಮಧ್ಯೆ ಹೋಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. 

'ವಿನಯ ಕುಲಕರ್ಣಿ ಬಂಧನ ಬಿಜೆಪಿಯ ರಾಜಕೀಯ ಪ್ರೇರಿತ ಕೃತ್ಯ' ಎಂಬ ಸಿದ್ಧರಾಮಯ್ಯ ಮಾತಿಗೆ ತಿರುಗೇಟು ನೀಡಿದ ಈಶ್ವರಪ್ಪ, ಕೊಲೆ ಪ್ರಕರಣವನ್ನು ತನಿಖೆ ಮಾಡಬಾರದಾ? ಹಾಗಿದ್ದರೆ ಕಾಂಗ್ರೆಸ್‌ ಪಕ್ಷ ಕೊಲೆಗಳಿಗೆ ಬೆಂಬಲ ಕೊಡುತ್ತಾ.. ಹಾಗಂತ ಸಿದ್ದರಾಮಯ್ಯ ಒಪ್ಪಿಕೊಂಡು ಬಿಡಲಿ, ನಮ್ಮ ಪಕ್ಷದ ಅನೇಕರನ್ನು ಕಾಂಗ್ರೆಸ್‌ ಸರ್ಕಾರ ಜೈಲಿಗೆ ಕಳಿಸಿದ್ದು ಕೂಡ ರಾಜಕೀಯ ಪ್ರೇರಿತ ಕೃತ್ಯವೇ?  ಬಾಯಿಗೆ ಬಂದಂತೆ ಮಾತನಾಡುವುದು ವಿರೋಧ ಪಕ್ಷದ ನಾಯಕನಿಗೆ ಶೋಭೆ ತರುವುದಿಲ್ಲ, ತಪ್ಪಿತಸ್ಥ ಅಲ್ಲದಿದ್ದರೆ ವಿನಯ ಕುಲಕರ್ಣಿ ಬಿಡುಗಡೆಯಾಗಿ ಹೊರಗೆ ಬರಲಿ ಎಂದರು. ಅಲ್ಲದೆ, ಕಾಂಗ್ರೆಸ್‌ ನಾಯಕರ ಸರ್ಕಾರದ ಪ್ರತಿ ನಡೆಯನ್ನು ವಿರೋಧಿಸುವ ಧೋರಣೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.

Udupi Eshwarappa calls Siddaramaiah mad person. Eshwarappa lashed out during his visit to Udupi temple.