ತುಳು ರಾಜ್ಯಕ್ಕಾಗಿ ಬೇಡಿಕೆ ಇಟ್ಟಿದ್ದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್ ನಿಧನ

09-11-20 11:04 am       Mangalore Correspondent   ಕರಾವಳಿ

ಮೂಡುಬಿದ್ರೆ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್(82) ನಿಧನರಾಗಿದ್ದಾರೆ.

ಮಂಗಳೂರು, ನವೆಂಬರ್ 09 : ವಯೋಸಹಜ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದ್ರೆ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೆಮಾರ್(82) ನಿಧನರಾಗಿದ್ದಾರೆ.

ಮೂಲ್ಕಿ - ಮೂಡುಬಿದ್ರೆ ಕ್ಷೇತ್ರದಲ್ಲಿ 1967ರಿಂದ 1971ರ ಅವಧಿಗೆ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ರತನ್ ಕುಮಾರ್ ಕಟ್ಟೆಮಾರ್, ಮೂಡುಬಿದ್ರೆಯ ಎರಡನೇ ಶಾಸಕರೆನಿಸಿದ್ದರು. ಆಬಳಿಕ 1971ರಲ್ಲಿ ಸುರತ್ಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ರತನ್ ಕುಮಾರ್ ಪರಾಜಿತರಾಗಿದ್ದರು. ಜನಪ್ರತಿನಿಧಿಯಾಗಿ ದೇವರಾಜ ಅರಸು ಜಾರಿಗೆ ತಂದಿದ್ದ ಭೂ ಮಸೂದೆಯ ವಿರುದ್ಧ ದನಿಯೆತ್ತಿದ್ದ ಅವರು, ಪ್ರತ್ಯೇಕ ತುಳು ರಾಜ್ಯಕ್ಕಾಗಿ ಬೇಡಿಕೆ ಇಟ್ಟು ಗಮನ ಸೆಳೆದಿದ್ದರು. ಶಾಸಕರಾಗಿ ಪ್ರತ್ಯೇಕ ತುಳು ರಾಜ್ಯಕ್ಕಾಗಿ ಬೇಡಿಕೆ ಇಟ್ಟಿದ್ದು ಅದೇ ಮೊದಲು ಮತ್ತು ಅದೇ ಕೊನೆ. ಬೈಕ್‍, ಕಾರುಗಳಿಲ್ಲದ ಎಪ್ಪತ್ತರ ದಶಕದಲ್ಲಿ ರತನ್ ಕುಮಾರ್ ತಮ್ಮ ಜಾವಾ ಬೈಕ್‍ನಲ್ಲಿಯೇ ಬೆಂಗಳೂರು, ಮದ್ರಾಸ್, ತಿರುಪತಿ, ಕೊಚ್ಚಿ ಹೀಗೆ ದೂರದ ರಾಜ್ಯಗಳಿಗೂ ಸುತ್ತಾಡಿ ಗಮನ ಸೆಳೆದಿದ್ದರು.

1968ರಲ್ಲಿ ಮೈಸೂರಿನಲ್ಲಿ ಆನೆಗಳನ್ನು ಸೆರೆಹಿಡಿಯುವ ಖೆಡ್ಡಾದ ಕಾರ್ಯಾಚರಣೆ ವೀಕ್ಷಿಸಲು ತೆರಳಿದ್ದ ಸಂದರ್ಭದಲ್ಲಿ ಫೈರಿಂಗ್ ಆಗಿದ್ದು ಅವರ ಎಡಕಣ್ಣಿಗೆ ಗಂಭೀರ ಹಾನಿಯಾಗಿತ್ತು. ಭೂಸೇನೆಯ ಸ್ಥಾಪಕ ಕಾರ್ಯದರ್ಶಿ, ರೈತ ಪರ ಭೂಮಾಲೀಕರ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಅವರು ಜಯಪ್ರಕಾಶ್ ನಾರಾಯಣರ ಚಳವಳಿಯಲ್ಲಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದ್ದರು. 

1986ರ ಬಳಿಕ ಅಧ್ಯಾತ್ಮಿಕ ನೆಲೆಯಲ್ಲಿ ತೊಡಗಿಕೊಂಡು ಮಂಗಳೂರಿನ ತಮ್ಮ ನಿವಾಸದಲ್ಲಿ ದೇವಿ ಧರ್ಮಧೂತರೆಸಿಕೊಂಡು ಕಾರ್ಯ ನಿರತರಾಗಿದ್ದರು. ಮಾಜಿ ಶಾಸಕ ಕಟ್ಟೆಮಾರ್ ಅವರ ನಿಧನಕ್ಕೆ ಮೂಡುಬಿದಿರೆ ಜೈನಮಠದ ಭಟ್ಟಾರಕ ಶ್ರೀಗಳವರು ಸಂತಾಪ ವ್ಯಕ್ತಪಡಿದ್ದಾರೆ.

Moodbidri fomer Karnataka Minister Ratan Kumar Kattemar passes away at 82. He served as MLA from 1967 to 1972.