ಬ್ಯಾಂಕ್ ಆಯ್ತು , ವಿಮಾನ ನಿಲ್ದಾಣ ಆಯ್ತು,, ಇನ್ನು ಏನಿದೆ ಬಿಜೆಪಿಯವರೇ ? ಈ ಜಿಲ್ಲೆಗೆ ನಿಮ್ಮ ಕೊಡುಗೆ ಏನು ? ಕಾಂಗ್ರೆಸ್ ಪ್ರತಿಭಟನೆ

09-11-20 02:14 pm       Mangalore Correspondent   ಕರಾವಳಿ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಖಾಸಗೀಕರಣಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನ ಖಂಡಿಸಿ ಕೆಂಜಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು‌. 

ಮಂಗಳೂರು, ನವೆಂಬರ್ 09 :ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನ ಖಾಸಗೀಕರಣಗೊಳಿಸಿ ಅದಾನಿ ಕಂಪೆನಿಗೆ ಗುತ್ತಿಗೆ ವಹಿಸಿರುವ ಕೇಂದ್ರ ಸರಕಾರದ ಕ್ರಮವನ್ನ ಖಂಡಿಸಿ ಬಜ್ಪೆ ಬಳಿಯ ಕೆಂಜಾರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು‌. 

ವಿಮಾನ ನಿಲ್ದಾಣ ಪ್ರವೇಶ ದ್ವಾರವಿರುವ ನಗರದ ಕೆಂಜಾರು ಬಳಿ ಸೇರಿದ ಸುಮಾರು 50 ಕ್ಕೂ ಅಧಿಕ ಕಾರ್ಯಕರ್ತರು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತಪಡಿಸಿದರು‌. ಈ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮಂಗಳೂರಿಗೆ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಕೇಂದ್ರಕ್ಕೆ ಒತ್ತಡ ಹೇರಿದ್ದರು. ಅದರ ಫಲವಾಗಿ ಇಂದಿನ ವಿಸ್ತೃತ ವಿಮಾನ ನಿಲ್ದಾಣ ರೆಡಿಯಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದು ವಿಮಾನ ನಿಲ್ದಾಣವನ್ನೇ ಅದಾನಿಗೆ ಕೊಟ್ಟಿದ್ದಾರೆ‌‌. ಬಿಜೆಪಿ ಅಧಿಕಾರದಲ್ಲಿ ಈ ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. 

ಮಾಜಿ ಶಾಸಕ ಜೆ.ಆರ್ ಲೋಬೊ ಮಾತನಾಡಿ, ಎನ್ ಎಂಪಿಟಿ ಅನುಷ್ಠಾನಕ್ಕೆ ತಂದಿದ್ದು ಯು.ಎಸ್.ಮಲ್ಯರು. ಅದರ ಅಭಿವೃದ್ಧಿಗಾಗಿ ಶ್ರಮಿಸಿದ್ದು ವೀರಪ್ಪ ಮೊಯ್ಲಿ. ಈಗ ವಿಮಾನ ನಿಲ್ದಾಣ ಖಾಸಗಿಯವರಿಗೆ ಕೊಟ್ಟಿದ್ದಾರೆ. ಇನ್ನು ಎನ್ಎಂಪಿಟಿ ಬಂದರನ್ನೂ ಖಾಸಗಿಗೆ ಕೊಡಲ್ಲ ಎನ್ನುವ ಗ್ಯಾರಂಟಿಯಿಲ್ಲ.. ಈ ಜಿಲ್ಲೆಯ ಬ್ಯಾಂಕ್ ಗಳನ್ನೆಲ್ಲ ಇನ್ನಿಲ್ಲವಾಗಿಸಿದ್ದಾರೆ. ಹಾಗಾದರೆ ಬಿಜೆಪಿಯಿಂದ ಈ ಜಿಲ್ಲೆಗೆ ಸಿಕ್ಕಿದ ಕೊಡುಗೆ ಏನು? ಬಿಜೆಪಿಯವರೇ ಇಲ್ಲಿನದ್ದೆಲ್ಲ ಖಾಸಗಿಗೆ ಕೊಟ್ಟು ಮುಗಿಸಿದ್ದು ಬಿಟ್ಟರೆ ಸಾಧಿಸಿದ್ದು ಏನು ಎಂದು ಕೇಳಿದ್ದಾರೆ. 

ಅಲ್ಲದೆ, ವಿಮಾನ ನಿಲ್ದಾಣಕ್ಕೆ ತುಳುನಾಡಿನ ಆರಾಧನಾ ಪುರುಷರಾದ ಕೋಟಿ ಚೆನ್ನಯ್ಯ ಇಲ್ಲವೇ ಮಂಗಳೂರು ಅಭಿವೃದ್ಧಿಯ ರೂವಾರಿ ಶ್ರೀನಿವಾಸ್ ಮಲ್ಯ ಅವರ ಹೆಸರಿಡುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಐವನ್ ಡಿಸೋಜಾ, ಮಿಥುನ್‌ ರೈ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತು ಒದಗಿಸಲಾಗಿತ್ತು.

Video: 

Congress Leaders and Members protests at khanjar, near Mangalore Airport, against privatisation issue and takes over of Mangalore International Airport by Adani Group for commercial operations.