Mangalore, Ullal municiapl town office: ತೊಕ್ಕೊಟ್ಟು ಮಾರುಕಟ್ಟೆ ಹರಾಜಿನಲ್ಲಿ ಅಕ್ರಮ, ಹಳೆ ವ್ಯಾಪಾರಿಗಳಿಗೆ 16 ಮಳಿಗೆ ಮೀಸಲು ; 7 ಮಳಿಗೆಗಳ ಹರಾಜು!  ಕೌನ್ಸಿಲರ್ ಗಳನ್ನ ನಗರಸಭೆಯಿಂದ ಹೊರದಬ್ಬಿದ ಪೊಲೀಸರು 

03-02-24 05:03 pm       Udupi Correspondent   ಕರಾವಳಿ

ಉಳ್ಳಾಲ ನಗರಸಭೆಯ ನಗರೋತ್ಥಾನ -3 ರಡಿ ತೊಕ್ಕೊಟ್ಟು ಒಳಪೇಟೆಯಲ್ಲಿ ನವೀಕರಣಗೊಂಡ ವಾಣಿಜ್ಯ ಮಾರುಕಟ್ಟೆಯ ಸಾರ್ವಜನಿಕ ಬಹಿರಂಗ ಏಲಂ ಪ್ರಕ್ರಿಯೆ ಶನಿವಾರ ನಗರಸಭೆಯಲ್ಲಿ ನಡೆದಿದೆ.

ಉಳ್ಳಾಲ, ಫೆ.3: ಉಳ್ಳಾಲ ನಗರಸಭೆಯ ನಗರೋತ್ಥಾನ -3 ರಡಿ ತೊಕ್ಕೊಟ್ಟು ಒಳಪೇಟೆಯಲ್ಲಿ ನವೀಕರಣಗೊಂಡ ವಾಣಿಜ್ಯ ಮಾರುಕಟ್ಟೆಯ ಸಾರ್ವಜನಿಕ ಬಹಿರಂಗ ಏಲಂ ಪ್ರಕ್ರಿಯೆ ಶನಿವಾರ ನಗರಸಭೆಯಲ್ಲಿ ನಡೆದಿದೆ. ಹರಾಜು ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬಿಜೆಪಿ, ಎಸ್ಡಿಪಿಐ, ಜೆಡಿಎಸ್ ನಗರ ಸದಸ್ಯರು ಹರಾಜನ್ನ ತಡೆದಿದ್ದು ವೀಕ್ಷಕರಾಗಿದ್ದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಸೂಚನೆಯಂತೆ ಪೊಲೀಸರು ನಗರ ಸದಸ್ಯರನ್ನ ಸಭೆಯಿಂದ ಹೊರದಬ್ಬಿದ್ದು, ಆಕ್ರೋಶಿತ ಕೌನ್ಸಿಲರ್ಗಳು ಉಳ್ಳಾಲ ನಗರಸಭೆ ಪೌರಾಯುಕ್ತೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 

ಶನಿವಾರ ಬೆಳಗ್ಗೆ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಿಜೆಪಿ ನಗರಸದಸ್ಯೆ ಗೀತಾ ಭಾಯಿ ಅವರು ನನ್ನ ಕ್ಷೇತ್ರ ವ್ಯಾಪ್ತಿಯ ಮಾರುಕಟ್ಟೆಯ ದಿಢೀರ್ ಹರಾಜು ಪ್ರಕ್ರಿಯೆ ಬಗ್ಗೆ ನಿನ್ನೆ ಸಂಜೆ ವಿಚಾರ ತಿಳಿದಿದೆ. ಈ ಹರಾಜಿನಲ್ಲಿ ಪಾರದರ್ಶಕತೆ ಇಲ್ಲ. ಹಣ ನೀಡಿದವರಿಗೆ 16 ಅಂಗಡಿಗಳನ್ನ ಮೀಸಲಿರಿಸಿದ್ದು ಹರಾಜನ್ನ ತಡೆಯುವಂತೆ ಸಹಾಯಕ ಆಯುಕ್ತರಲ್ಲಿ ಆಗ್ರಹಿಸಿದರು. ಸಭೆಯಲ್ಲಿದ್ದ ಜೆಡಿಎಸ್,ಎಸ್ಡಿಪಿಐ ನಗರಸದಸ್ಯರೂ ಹರಾಜನ್ನ ತಡೆಯುವಂತೆ ಒತ್ತಾಯಿಸಿದರು. ಹರಾಜು ಪ್ರಕ್ರಿಯೆ ಮುಂದುವರಿದಾಗ ನಗರಸದಸ್ಯರು ನಗರಸಭೆಗೆ ಧಿಕ್ಕಾರ ಕೂಗಿದ್ದಾರೆ‌. ಈ ವೇಳೆ  ಸಹಾಯಕ ಆಯುಕ್ತರು ಧಿಕ್ಕಾರ ಕೂಗಿದ ಕೌನ್ಸಿಲರ್ಗಳನ್ನ ಪೊಲೀಸ್ ಬಲ ಪ್ರಯೋಗಿಸಿ ಸಭೆಯಿಂದ ಹೊರದಬ್ಬಿದ್ದಾರೆ.

ಆಕ್ರೋಶಿತ ನಗರ ಸದಸ್ಯರು ನಗರಸಭೆ ಕಚೇರಿ ಗೇಟಿನ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದು ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ಆಳ್ವ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ನಗರ ಸದಸ್ಯರಾದ ರಮೀಝ್ ಮಾತನಾಡಿ 2023 ರ ಜನವರಿ 10 ರಂದು ಮಾರುಕಟ್ಟೆಯನ್ನ ಹರಾಜು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಹರಾಜಲ್ಲಿ ಭಾಗವಹಿಸಲು ಅನೇಕ ಮಂದಿ ತಲಾ 500 ರೂ. ಕಟ್ಟಿದ್ದರು. ಅಂದಿನ ಹರಾಜು ತಡೆದದ್ದು ಏಕೆ?ಜನರು ಕಟ್ಟಿದ ಹಣ ಎಲ್ಲಿ ಹೋಯಿತು, ಈಗ ದಿಢೀರನೆ ಹರಾಜು ನಡೆಸಿದ ಉದ್ದೇಶ ಏನು? ಚುನಾಯಿತ ಪ್ರತಿನಿಧಿಗಳನ್ನ ಹೊರಹಾಕಿ ಹರಾಜು ನಡೆಸಿದ ಅಧಿಕಾರಿಯನ್ನ ನಾವು ಸುಮ್ನೆ ಬಿಡಲ್ಲ ಎಂದು ಎಚ್ಚರಿಸಿದರು.

ನಗರ ಸದಸ್ಯೆ ಖಮರುನ್ನೀಸಾ ಮಾತನಾಡಿ ಇದು ಅಧಿಕಾರಿಗಳ ಲಾಭಕ್ಕೋಸ್ಕರ ಮಾಡಿದ ಹರಾಜು. ಇಲ್ಲಿನ ಪೌರಾಯುಕ್ತೆ ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಕೌನ್ಸಿಲರ್ಗಳನ್ನ ವಿಶ್ವಾಸಕ್ಕೆ ತೆಗೆಯದೆ ಯಾವುದೇ ಸಭೆ ಮಾಡದೆ ನಿನ್ನೆ ಸಂಜೆ ಏಕಾಏಕಿ ಹರಾಜಿನ ಸಂದೇಶವನ್ನ ವಾಟ್ಸಪ್ಪಲ್ಲಿ ಕಳುಹಿಸಿದ್ದಾರೆ ಎಂದರು.
ನಗರಸದಸ್ಯರ ವಿರೋಧ, ಪ್ರತಿಭಟನೆಯ ನಡುವಲ್ಲೂ ಹರಾಜು ಪ್ರಕ್ರಿಯೆ ನಡೆದಿದೆ.
ನಗರಸಭೆಯ ಮಾಜಿ ಉಪಾಧ್ಯಕ್ಷರೊಬ್ಬರು ಲಕ್ಷಾಂತರ ರೂಪಾಯಿಗಳನ್ನ ಪಡೆದು ಮಾರುಕಟ್ಟೆಯ ಮಳಿಗೆಗಳನ್ನ ಇಷ್ಟ ಮಿತ್ರರಿಗೆ ಮಾರಿರುವ ಆರೋಪಗಳಿವೆ. ಇದೀಗ ನಗರಸಭೆಯಲ್ಲಿ ಮೀಸಲಾತಿಯ ಕಾನೂನಿನ‌ ತೊಡಕಿನಿಂದ ಜನರ ಆಡಳಿತ ಇಲ್ಲದೆ ಎಲ್ಲವೂ ಪ್ರಭಾರ ಪೌರಾಯುಕ್ತೆಯ ಹುಕುಮಿನಂತೆ ನಡೆಯುತ್ತಿದೆ.

Mangalore Thokottu Market sale, Fight erupts at municiapl town office during meeting.