Sdpi, Mangalore, Gyanvapi Mosque: ದೇಶದಲ್ಲಿ ಸಂಘರ್ಷಕ್ಕೆ ತಯಾರಾಗಿ, ಹುತಾತ್ಮರಾಗಿ ; 20 ಕೋಟಿ ಮುಸ್ಲಿಮರು ಹೊರಬಂದ್ರೆ ತಡೆಯಲು ಸಾಧ್ಯವೇ..? ಜ್ಞಾನವಾಪಿ ಮಸೀದಿ ಹೆಸರಲ್ಲಿ ಬಹಿರಂಗ ಸಂಘರ್ಷಕ್ಕೆ ಎಸ್ಡಿಪಿಐ ಕರೆ ! 

09-02-24 10:37 pm       Mangalore Correspondent   ಕರಾವಳಿ

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಪೂಜಾಸ್ಥಳ ಕಾಯ್ದೆಯಡಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದಿದ್ದರೆ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದಾಗಿ ನಾವು ಭಾರತದ ಕಾನೂನನ್ನು ನಂಬುವ ಸ್ಥಿತಿಯಲ್ಲಿಲ್ಲ.

ಮಂಗಳೂರು, ಫೆ.9: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಪೂಜಾಸ್ಥಳ ಕಾಯ್ದೆಯಡಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದಿದ್ದರೆ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕೊಟ್ಟಿದ್ದಾರೆ. ಇದರಿಂದಾಗಿ ನಾವು ಭಾರತದ ಕಾನೂನನ್ನು ನಂಬುವ ಸ್ಥಿತಿಯಲ್ಲಿಲ್ಲ. ಹಾಗಾಗಿ ನಾವು ನಮ್ಮ ಹಕ್ಕುಗಳಿಗಾಗಿ ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಬೇಕಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. 

ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಕೋರ್ಟ್ ಪೂಜೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಆಯೋಜಿಸಿದ ಎಸ್ಡಿಪಿಐ ಪಕ್ಷದ ಪ್ರತಿಭಟನಾ ಸಭೆಯಲ್ಲಿ ಮಜೀದ್ ಅಬ್ಬರದ ಭಾಷಣ ಮಾಡಿದ್ದಾರೆ. ಜ್ಞಾನವಾಪಿ ವಿವಾದ ಬಗ್ಗೆ ಹೈಕೋರ್ಟ್ ನಲ್ಲಿ ಕೇಸು ಇರುವಾಗಲೇ ಕೆಳಗಿನ ಕೋರ್ಟ್ ಪೂಜೆಗೆ ಅವಕಾಶ ಕೊಟ್ಟಿದ್ದೇ ತಪ್ಪು. ಪೂಜಾ ಸ್ಥಳ ಕಾಯಿದೆಯಡಿ ಹೈಕೋರ್ಟ್ ಯಥಾಸ್ಥಿತಿ ಆದೇಶ ನೀಡಿದ್ರೆ ಆ ಕಾನೂನಿಗೆ ಕೆಳಗಿನ ಕೋರ್ಟ್ ಮೂರು ಕಾಸಿನ ಬೆಲೆ ಕೊಡ್ತಾ ಇಲ್ಲ. ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ. ಈ ದೇಶದಲ್ಲಿ ಕಾನೂನು ಇದ್ಯಾ? ಕಾನೂನು ಸತ್ತು ಹೋಗಿದೆ. ಯಾವ ಬೆಲೆ ತೆತ್ತಾದರೂ ನಮ್ಮಲ್ಲಿನ ಮಸೀದಿ, ಚರ್ಚ್ ಗಳನ್ನು ಉಳಿಸಿಕೊಳ್ಳಬೇಕು. ನಾವು ಐದು ಕೋಟಿ ಕ್ರಿಸ್ತಿಯನ್ನರು, 20 ಕೋಟಿ ಮುಸ್ಲಿಮರು, 30 ಕೋಟಿ ದಲಿತರು ಬೀದಿಗಿಳಿದು ಸಂಘರ್ಷಕ್ಕಿಳಿದರೆ, ಇವರಿಂದ ತಡೆಯಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.‌

ಪ್ರಜಾತಂತ್ರ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಮೇಲೆ ಇದ್ದಿದ್ದನ್ನ ಹಾಗೇ ಉಳಿಸಿಕೊಳ್ಳಬೇಕೆಂದು ನಿರ್ಣಯ ಸ್ವೀಕರಿಸಲಾಗಿದೆ. ಆದರೆ ಈಗ ಅವನ್ನೆಲ್ಲ ಗಾಳಿಗೆ ತೂರಲಾಗಿದೆ. ಕಾಂಗ್ರೆಸಿನಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಸಾಧ್ಯವಿಲ್ಲ. ನಮ್ಮ ಪೂಜಾ ಸ್ಥಳಗಳನ್ನು ಕಾಂಗ್ರೆಸಿನ ಸಿದ್ದರಾಮಯ್ಯ, ರಾಹುಲ್, ಸೋನಿಯಾ, ಖರ್ಗೆ ಉಳಿಸ್ತಾರೆ ಅಂತ ಯಾರೂ ಕಾಯಬೇಡಿ. ಹೋರಾಟಕ್ಕೆ ತಯಾರಾಗಿ, ನಾವು ಯಾವತ್ತಾದರೂ ಒಂದು ದಿನ ಸಾಯುತ್ತೇವೆ. ನಮ್ಮ ಹಕ್ಕುಗಳಿಗಾಗಿ ನಾವು ಸಂಘರ್ಷಕ್ಕೆ ಇಳಿಯಬೇಕು ಮತ್ತು ಹುತಾತ್ಮರಾಗಲು ತಯಾರಾಗಬೇಕು, ಜೈಲಿಗೆ ಹೋಗುವುದಕ್ಕೂ ರೆಡಿಯಾಗಬೇಕು ಎಂದು ಬಹಿರಂಗ ಸಂಘರ್ಷಕ್ಕೆ ಕರೆ ನೀಡಿದ್ದಾರೆ.

ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗೀಪೇಟೆ ಮಾತನಾಡಿ ದೇಶದ ನ್ಯಾಯಾಲಯಗಳು ಸಂವಿಧಾನದ ಪರವಾಗಿ ತೀರ್ಪು ನೀಡದಿದ್ದರೆ ಪ್ರಶ್ನಿಸಬೇಕು. ದ‌.ಕ ಜಿಲ್ಲೆಯಲ್ಲಿ ಸಂಘ ಪರಿವಾರವನ್ನ ಎದುರಿಸೋ ಜನಸಮೂಹ ಇದೆ ಎನ್ನುವುದನ್ನು ಮರೆಯಬೇಡಿ. ನಾವು ಚುನಾವಣೆಯಲ್ಲಿ ಸೋತಿರಬಹುದು, ಆದರೆ ನಾವು ಸತ್ತಿಲ್ಲ. ಮೋಹನ್ ಭಾಗವತ್ ಯಾರು ನಮ್ಮ ರಾಷ್ಟ್ರಪತಿಯಾ? ನಮ್ಮ ಜೀವ ಹೋದರೂ ಪರವಾಗಿಲ್ಲ, ಹಕ್ಕಿಗಾಗಿ ನಾವು ಹೋರಾಟ ಮಾಡಬೇಕು. ಯಾವ ಕ್ಷಣದಲ್ಲಾದರೂ ನಮ್ಮ ಬಂಧನವಾಗಬಹುದು. ಅದಕ್ಕೆ ರೆಡಿ ಆಗಿದ್ದೇವೆ ಎಂದರು.‌

ಇಡಿ, ಎನ್ಐಎ ಮೂಲಕ ನೀವು ಭಯ ಪಡಿಸಿದರೆ ನಾವು ಭಯಪಡಲ್ಲ. ನಾವು ಕೇವಲ ಮಸೀದಿಗಳನ್ನ ಕಳೆದುಕೊಳ್ತಿಲ್ಲ‌. ನಮ್ಮ ಅಸ್ತಿತ್ವ ಕಳೆದುಕೊಳ್ತಿದೇವೆ. ಈ ದೇಶದ ಮಣ್ಣಿನಲ್ಲಿ ನಮಗೆ ಹಕ್ಕಿದೆ, ನಮ್ಮ ಪೂರ್ವಿಕರ ಅಸ್ತಿತ್ವ ಇದೆ. ನಿಮ್ಮ ಮನೆಗೆ ನುಸುಳಿದ್ರೆ ನೀವು ಸುಮ್ಮನೆ ಇರ್ತೀರಾ? ಅದೇ ರೀತಿ ನಮ್ಮ ಧಾರ್ಮಿಕ ಚಿಹ್ನೆಗಳಾದ ಮಸೀದಿಗಳಿಗೆ ನುಸುಳಿದಾಗಲೂ ಪ್ರತಿರೋಧ ಇದ್ದೇ ಇರಲಿದೆ ಎಂದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.

Sdpi open challenge in Mangalore sparks row on Gyanvapi Mosque. Says get ready for open fight in country. BJP government is targeting mosques under the guise of temple reconstruction, alleging “divisive political maneuvers and the enactment of detrimental laws eroding cultural and religious heritage.”