Ivan Dsouz, Mangalore Gerosa School: ಜೆರೋಸಾ ಶಾಲೆ ಘಟನೆ ಹಿನ್ನೆಲೆ ; ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅನರ್ಹಗೊಳಿಸಲು ಸ್ಪೀಕರ್ ಗೆ ಐವಾನ್ ಡಿಸೋಜ ದೂರು

16-02-24 08:34 pm       Mangalore Correspondent   ಕರಾವಳಿ

ಜೆರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬೆಂಗಳೂರು, ಫೆ.16: ಜೆರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಜೆರೋಸಾ ಶಾಲೆಯ ಮುಂದೆ ಅಕ್ರಮವಾಗಿ ತನ್ನ ಬೆಂಬಲಿಗರನ್ನು ಮತ್ತು ಪೋಷಕರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದು ಆಮೂಲಕ ಕೋಮು ಸಾಮರಸ್ಯ ಕದಡುವ ಯತ್ನ ಮಾಡಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿ ಯಾವುದೇ ಅನಪೇಕ್ಷಿತ ಘಟನೆಯಾದರೂ ಅದರ ಬಗ್ಗೆ ಕೂಲಂಕಷ ತನಿಖೆ ಮಾಡಿಸುವುದು ಶಾಸಕನ ಕರ್ತವ್ಯ. ಅದು ಬಿಟ್ಟು ಶಾಲೆಯ ಶಿಕ್ಷಕಿ ಬಗ್ಗೆ ಆರೋಪ ಬಂದ ಕೂಡಲೇ ಶಾಲೆಯ ಹೊರಗಡೆ ನಿಂತು ಪ್ರತಿಭಟನೆ ನಡೆಸಿ, ಮಕ್ಕಳನ್ನು ಅದೇ ಶಾಲೆಯ ವಿರುದ್ಧ ಎತ್ತಿಕಟ್ಟಿದ್ದಾರೆ.

ಆರೋಪದ ಬಗ್ಗೆ ಶಾಲೆಯ ಪಿಟಿಎ ಅಥವಾ ಮುಖ್ಯ ಶಿಕ್ಷಕಿಗೆ ಪೋಷಕರು ಲಿಖಿತ ದೂರನ್ನು ನೀಡಿಲ್ಲ. ಆಡಿಯೋ ವೈರಲ್ ಆಗಿದ್ದನ್ನೇ ಮುಂದಿಟ್ಟು ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಪ್ರತಿಭಟನೆ ನಡೆಸಿರುವುದು ಜನಪ್ರತಿನಿಧಿಯಾಗಿ ಮೂಲ ಉದ್ದೇಶವನ್ನು ಉಲ್ಲಂಘಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆಂದು ಹೇಳಿ, ಇಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಭರತ್ ಶೆಟ್ಟಿ ಕ್ರಿಸ್ತಿಯನ್ ಶಾಲೆಗಳನ್ನು ಬಹಿಷ್ಕರಿಸುವಂತೆ ಹೇಳಿ ಹಿಂದುಗಳನ್ನು ಪ್ರಚೋದಿಸಿದ್ದಾರೆ. ಹೀಗಾಗಿ ಅವರಿಬ್ಬರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೂರಿನ ಜೊತೆಗೆ ಆಡಿಯೋ, ವಿಡಿಯೋ ಕ್ಲಿಪ್ಪಿಂಗ್, ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರತಿ, ಮಹಿಳೆಯೊಬ್ಬರ ಆಡಿಯೋ ವೈರಲ್ ಬಗ್ಗೆ ನೀಡಿರುವ ದೂರಿನ ಪ್ರತಿಯನ್ನು ನೀಡಿದ್ದಾರೆ. ಜೆಪ್ಪಿನಮೊಗರು ನಿವಾಸಿ ಭಾಸ್ಕರ್ ರಾವ್ ಹೆಸರಿನಲ್ಲಿ ದೂರನ್ನು ಬರೆಯಲಾಗಿದ್ದು ಐವಾನ್ ಡಿಸೋಜ ನೇತೃತ್ವದಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

Congress leader Ivan Dsouza requests speaker Ut Khader to take action against Mla Vedavyas and Bharath over gerosa school matter.