ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ವಸ್ತುನಿಷ್ಠ ವರದಿಗಳಿಂದಷ್ಟೇ ಮಾಧ್ಯಮದ ನಂಬಿಕೆ ಉಳಿವು 

25-11-20 10:19 am       Mangaluru Correspondant   ಕರಾವಳಿ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮಂಗಳೂರು, ನ.24: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರದಂದು ನಡೆಯಿತು. ನೀರ ನಡುವೆ, ಅಬ್ಬಕ್ಕ ಕ್ವೀನ್ ಕ್ರೂಸ್‌ನಲ್ಲಿ ವಿನೂತನವಾಗಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. 
 
ಕಾರ್ಯಕ್ರಮವನ್ನು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಪತ್ರಕರ್ತರು ವಸ್ತುನಿಷ್ಠ ವರದಿಗಳನ್ನು ಮಾಡಬೇಕು. ಕಟ್ ಆಂಡ್ ಪೇಸ್ಟ್ ಜರ್ನಲಿಸಂ ಸರಿಯಲ್ಲ. ತನಿಖಾ ಪತ್ರಿಕೋದ್ಯಮ, ವಸ್ತುನಿಷ್ಠ ವರದಿಯಿಂದ ಪತ್ರಿಕೆ, ಮಾಧ್ಯಮಗಳ ಮೇಲಿನ ಜನರ ನಂಬಿಕೆ ಉಳಿಯುತ್ತದೆ.  ಸವಾಲಿನ ದಿನಗಳಲ್ಲೂ ಜನರು ಮಾಧ್ಯಮವನ್ನು ನಂಬುವಂತಾಗಲು ವಸ್ತುನಿಷ್ಠ ವರದಿಗಳು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮಂಗಳೂರಿನ ನದಿ ಮಧ್ಯದ ನಡುಗಡ್ಡೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಪತ್ರಕರ್ತರು ಎಂದರೆ ಸತ್ಯವನ್ನು ಸಮಾಜಕ್ಕೆ ತೋರಿಸುವವರು. ಸಮಾಜದಲ್ಲಿ ಆಗುವ ತಪ್ಪುಗಳನ್ನು ಸರಿಪಡಿಸುವಂತಹವರು ಪತ್ರಕರ್ತರು. ಕೆಲವೊಂದು  ಗೊತ್ತಿಲ್ಲದೆ ತಪ್ಪುಗಳಾದ ಸಂದರ್ಭದಲ್ಲಿ ಎಚ್ಚರಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಹೇಳಿದರು. ಮಂಗಳೂರಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಯೋಜನೆಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ರಿಚರ್ಡ್ ಲಸ್ರಾದೋ, ಜನಾರ್ಧನ ಎಸ್. ಪುರಿಯ, ಆರ್.ಎನ್. ಪೂವಣಿ ಉಜಿರೆ, ರಾಜಾ ಬಂಟ್ವಾಳ್, ಹಮೀದ್ ವಿಟ್ಲ, ಜಯಪ್ರಕಾಶ್ ಕುಕ್ಕೇಟಿ, ಯು.ಎಲ್. ಉದಯಕುಮಾರ್ ಮತ್ತು ವಿ4 ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ ಅವರನ್ನು ಜಿಲ್ಲಾಧಿಕಾರಿ, ಶಾಸಕರು ಸಹಿತ ಅತಿಥಿಗಳು ಸನ್ಮಾನಿಸಿದರು. 

ಸನ್ಮಾನ ಕಾರ್ಯಕ್ರಮದ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ. ಚಂದ್ರ ಪೂಜಾರಿ ಅವರಿಂದ ಅಭಿವ್ಯಕ್ತಿ -ತತ್ವ ಮತ್ತು ಆಚರಣೆ ಎನ್ನುವ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್, ಸಮಿತಿಯು ಬೆಳೆದುಬಂದ ಹಾದಿಯ ಬಗ್ಗೆ ವಿವರಿಸಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ರಾಜ್ಯ ಅಧ್ಯಕ್ಷ ಬಿ. ನಾರಾಯಣ, ಕೆಜೆಯು ಬೆಂಗಳೂರು ಘಟಕದ ಗೌರವಾಧ್ಯಕ್ಷ ಕೆ.ವಿ. ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ್, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಉಪಾಧ್ಯಕ್ಷ ಈ.ಟಿ.ಕೇರ್ ರಾಜು, ಕೆಜೆಯು ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಯಕುಮಾರ್ ಕೆ., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿಯ ಕೋಶಾಧಿಕಾರಿ ಜ್ಯೋತಿಪ್ರಕಾಶ್ ಪುಣಚ, ಜೊತೆ ಕಾರ್ಯದರ್ಶಿ ಈಶ್ವರ ವಾರಣಾಸಿ, ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ, ಗೌತಮ್ ಶೆಟ್ಟಿ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕೆಜೆಯು ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರ್ವಹಿಸಿದರು. ಕೆನ್ಯೂಟ್ ಪಿಂಟೋ ಸನ್ಮಾನಿತರ ಪರಿಚಯ ಮಾಡಿದರು,  ಜ್ಯೋತಿ ಪ್ರಕಾಶ್ ಪುಣಚ ವಂದಿಸಿದರು.

Karnataka Journalist Union Celebrated the Press Day at Rani Abbakka Boathouse here on Tuesday 24, November 2020. Mangalore Dc Dr Rajendra and MLA Vedavyas Kamath were the guests of honour.