Mangalore Gerosa School Controversy, BJP, Sister Prabha: ಜೆರೋಸಾ ಶಿಕ್ಷಕಿಯದ್ದು ಮತಾಂತರ ಉದ್ದೇಶ, ಕ್ರಮ ಜರುಗಿಸದಿದ್ದರೆ ಇಡೀ ರಾಜ್ಯದಲ್ಲಿ ಪ್ರತಿಭಟನೆ ; ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಆರೋಪ   

19-02-24 09:38 pm       Mangalore Correspondent   ಕರಾವಳಿ

ಶಾಲೆಗಳ ಮೂಲಕ ಮನೆಗಳನ್ನು ಸಂಪರ್ಕಿಸಿ ಶಿಕ್ಷಕರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ರಾಮನ ಬಗ್ಗೆ ಅವಹೇಳನ ಮಾಡಿರುವ ಶಿಕ್ಷಕಿ ಮತಾಂತರದ ಉದ್ದೇಶ ಹೊಂದಿದ್ದಾರೆ.

ಮಂಗಳೂರು, ಫೆ.19: ಶಾಲೆಗಳ ಮೂಲಕ ಮನೆಗಳನ್ನು ಸಂಪರ್ಕಿಸಿ ಶಿಕ್ಷಕರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ರಾಮನ ಬಗ್ಗೆ ಅವಹೇಳನ ಮಾಡಿರುವ ಶಿಕ್ಷಕಿ ಮತಾಂತರದ ಉದ್ದೇಶ ಹೊಂದಿದ್ದಾರೆ. ಆಕೆಯ ವಿರುದ್ಧ ಪೊಲೀಸರು ಕೂಡಲೇ ಎಫ್ಐಆರ್ ದಾಖಲು ಮಾಡಬೇಕು ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಆರೋಪಿಸಿದ್ದಾರೆ.

ಜಿರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಿಸಿದ ಕ್ರಮ ಖಂಡಿಸಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ವತಿಯಿಂದ ನಗರ ಕ್ಲಾಕ್ ಟವರ್ ನಲ್ಲಿ ಪ್ರತಿಭಟನೆ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ್, ಕಾಂಗ್ರೆಸ್ ಸರಕಾರ ದಂಗಲ್ ಎಬ್ಬಿಸಲು ನೋಡುತ್ತಿದೆ. ಇದು ಜಾತಿ, ಧರ್ಮದ ದಂಗಲ್ ಅಲ್ಲ. ಕಾಂಗ್ರೆಸ್ ದಂಗಲ್ ಆಗಿದ್ದು, ಪೊಲೀಸರು ಸರಕಾರದ ಪರ ನಿಂತರೆ ಮುಂದೆ ಕಂಗಾಲು ಆಗಬೇಕಾಗುತ್ತದೆ. ಯಾಕಂದ್ರೆ, ಶಿಕ್ಷಕಿ ವಿರುದ್ಧ ಕ್ರಮ ಜರುಗಿಸದಿದ್ದರೆ ನಾವು ಈ ಪ್ರತಿಭಟನೆಯನ್ನು ಇಡೀ ರಾಜ್ಯಕ್ಕೆ ಹಬ್ಬಿಸುತ್ತೇವೆ ಎಂದರು.

ಹಿಂದುಗಳು ಯಾವತ್ತೂ ಇತರ ಧರ್ಮೀಯರನ್ನು ಅವಹೇಳನ ಮಾಡಲ್ಲ. ಇವರು ಆ ರೀತಿ ಮಾಡಲು ಮುಂದಾದರೆ ನಾವು ಸುಮ್ಮನೆ ಇರೋದಿಲ್ಲ. ಶಾಸಕರ ಮೇಲೆ ಎಫ್ಐಆರ್ ದಾಖಲಿಸಿರುವುದು ಮಂಗಳೂರಿನ ಮತದಾರರ ಮೇಲೆ ಕ್ರಮ ಜರುಗಿಸಿದಂತೆ. ಜನರಿಂದ ಆಯ್ಕೆಯಾದ ವ್ಯಕ್ತಿ ಪೋಷಕರ ಕರೆಗೆ ಓಗೊಟ್ಟು ಅವರ ಪರವಾಗಿ ನಿಂತಿದ್ದಕ್ಕೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹ ಮಾಡಿದರು. ಪ್ರತಿಭಟನೆಯಲ್ಲಿ ರವಿಶಂಕರ ಮಿಜಾರ್, ವಿಜಯಕುಮಾರ್ ಶೆಟ್ಟಿ, ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ರಾಜಗೋಪಾಲ್ ರೈ ಮತ್ತಿತರರಿದ್ದರು.

ಪ್ರತಿಭಟನೆ ಕೊನೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಹೊಯ್ದಾಟ ನಡೆಯಿತು. ಕಾರ್ಯಕರ್ತರು ಧಿಕ್ಕಾರ ಮತ್ತು ಜೈಶ್ರೀರಾಮ್ ಘೋಷಣೆ ಕೂಗಿದರೆ, ರಸ್ತೆಗೆ ಬರದಂತೆ ಪೊಲೀಸರು ತಡೆದು ನಿಲ್ಲಿಸಿದರು. ಇದರಿಂದ ಒಂದಷ್ಟು ಹೊತ್ತು ವಾಗ್ವಾದ, ಮಾತಿನ ಚಕಮಕಿ ನಡೆಯಿತು.

Mangalore Gerosa School Controversy, BJP Holds protest demanding action against sister Prabha.