Mangalore Gerosa School controversy, Vedavyas Kamath, Bharat Shetty: ಜೆರೋಸಾ ಶಾಲೆ ಘಟನೆ ; ಡಿಡಿಪಿಐ ಕಚೇರಿಯಲ್ಲಿ ಶಿಕ್ಷಕರು, ಪೋಷಕರು, ಹಿಂದು ಸಂಘಟನೆಗಳ ನಾಯಕರ ವಿಚಾರಣೆ, ಶಾಸಕರಿಬ್ಬರಿಗೆ ಮಧ್ಯಂತರ ಜಾಮೀನು   

20-02-24 05:37 pm       Mangalore Correspondent   ಕರಾವಳಿ

ಜೆರೋಸಾ ಶಾಲೆಯಲ್ಲಿ ಹಿಂದು ದೇವರ ಅವಹೇಳನ ಆರೋಪದ ಬಗ್ಗೆ ಐಎಎಸ್ ಅಧಿಕಾರಿ ಡಾ.ಆಕಾಶ್ ಶಂಕರ್ ತನಿಖೆ ನಡೆಸುತ್ತಿದ್ದು, ಜಿಪಂ ಆವರಣದ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಕರು, ಪೋಷಕರು, ಹಿಂದು ಸಂಘಟನೆಗಳ ಪ್ರಮುಖರನ್ನು ಕರೆದು ಮಾಹಿತಿ ಸಂಗ್ರಹಿಸಿದ್ದಾರೆ.

ಮಂಗಳೂರು, ಫೆ.20: ಜೆರೋಸಾ ಶಾಲೆಯಲ್ಲಿ ಹಿಂದು ದೇವರ ಅವಹೇಳನ ಆರೋಪದ ಬಗ್ಗೆ ಐಎಎಸ್ ಅಧಿಕಾರಿ ಡಾ.ಆಕಾಶ್ ಶಂಕರ್ ತನಿಖೆ ನಡೆಸುತ್ತಿದ್ದು, ಜಿಪಂ ಆವರಣದ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಕರು, ಪೋಷಕರು, ಹಿಂದು ಸಂಘಟನೆಗಳ ಪ್ರಮುಖರನ್ನು ಕರೆದು ಮಾಹಿತಿ ಸಂಗ್ರಹಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಜೆರೋಸಾ ಶಾಲೆಯ ಶಿಕ್ಷಕರು ಬಂದು ತನಿಖಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ವೇಳೆಗೆ ವಿಶ್ವ ಹಿಂದು ಪರಿಷತ್ ಮುಖಂಡರು ಬಂದು ದೂರು, ದುಮ್ಮಾನಗಳನ್ನು ಹೇಳಿದ್ದಾರೆ. ಮಧ್ಯಾಹ್ನ 12ರಿಂದ 2 ಗಂಟೆ ವರೆಗೆ ಹಿಂದು ಸಂಘಟನೆಗಳ ನಾಯಕರಿಗೆ ದೂರು ಹೇಳಿಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ ಪುರುಷೋತ್ತಮ್, ತನಿಖಾಧಿಕಾರಿ ಮುಂದೆ ಮಾಹಿತಿ ನೀಡಿದ್ದೇವೆ, ನಿಮಗೆ ಹೇಗೆ ಗೊತ್ತಾಯ್ತು ಅಂತ ಪ್ರಶ್ನೆ ಮಾಡಿದ್ರು. ಪೋಷಕರು ಕರೆ ಮಾಡಿ ವಿಷಯ ತಿಳಿಸಿದ್ದನ್ನು ಹೇಳಿದೆ. ನ್ಯಾಯ ಸಿಗುವ ಭರವಸೆ ಇದೆ ಎಂದರು.

ಮಾಧ್ಯಮಕ್ಕೆ ಹೇಳಿಕೆ ನೀಡಿದ ಪೋಷಕಿಯೊಬ್ಬರಿಗೆ ಜೀವ ಬೆದರಿಕೆ ಕರೆ ಮತ್ತು ಆಕೆಯನ್ನು ಹೋಲಿ ಏಂಜಲ್ ಶಿಕ್ಷಣ ಸಂಸ್ಥೆಯ ಶಿಕ್ಷಕ ಹುದ್ದೆಯಿಂದ ತೆಗೆದು ಹಾಕಿದ ಬಗ್ಗೆ ಕೇಳಿದ ಪ್ರಶ್ನೆಗೆ, ಶಿಕ್ಷಣ ಸಂಸ್ಥೆಯ ಈ ನಡೆಯನ್ನು ಖಂಡಿಸುತ್ತೇವೆ. ಮಕ್ಕಳಿಗಾದ ನೋವನ್ನು ಮಾಧ್ಯಮಕ್ಕೆ ಹೇಳಿದ್ದಾರೆ. ಅವರು ಹಿಂದು ಸಮಾಜದ ಪರವಾಗಿ ಕೆಲಸ ಮಾಡಿದ್ದಾರೆ. ಅವರಿಗಾದ ನೋವನ್ನು ಹಾಗೇ ಬಿಡುವುದಿಲ್ಲ. ಬೇರೆ ಶಾಲೆಯಲ್ಲಿ ಅವರಿಗೆ ಉದ್ಯೋಗ ತೆಗೆಸಿಕೊಡುತ್ತೇವೆ. ಜೀವ ಬೆದರಿಕೆ ಘಟನೆಯನ್ನು ಖಂಡಿಸುತ್ತೇನೆ ಎಂದು ಪುರುಷೋತ್ತಮ್ ಹೇಳಿದರು.

ಇವರ ಜೊತೆಗೆ ಅದೇ ಶಾಲೆಯಲ್ಲಿ ಕಲಿತಿದ್ದ ಈಗ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬರು ಬಂದಿದ್ದು, ತನಿಖಾಧಿಕಾರಿ ಮುಂದೆ ಮಾಹಿತಿ ನೀಡಿದ್ದಾರೆ. ಲಿಖಿತವಾಗಿಯೂ ದೂರು ನೀಡಿದ್ದೇನೆ. ಆ ಶಿಕ್ಷಕಿ ಇದು ಮೊದಲು ಹೇಳಿದ್ದಲ್ಲ. ನಾವು ಕಲಿಯುತ್ತಿದ್ದಾಗ ಸೋಶಿಯಲ್ ಸ್ಟಡೀಸ್ ಕಲಿಸುತ್ತಿದ್ದರು. ಆಗಲೂ ಹಿಂದು ದೇವರುಗಳನ್ನು ನಿಂದಿಸುತ್ತಿದ್ದರು. ಅದನ್ನು ಅಧಿಕಾರಿಗೆ ತಿಳಿಸಿದ್ದೇನೆ ಎಂದರು. ಸಂಜೆಯ ವೇಳೆಗೆ ಪೋಷಕರನ್ನು ಡಿಡಿಪಿಐ ಕಚೇರಿಗೆ ಕರೆದು ಅಧಿಕಾರಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಶಾಸಕರಿಗೆ ಮಧ್ಯಂತರ ಜಾಮೀನು

ಇದೇ ವೇಳೆ, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಗೆ ಸಂಬಂಧಪಟ್ಟಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಲಭಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ವಿನಾಯ್ತಿ ಕೋರಿ ಶಾಸಕರಿಬ್ಬರು ಕೋರ್ಟ್ ಕದ ತಟ್ಟಿದ್ದರು.

Mangalore Gerosa School controversy, both MLA Vedavyas Kamath and Bharat Shetty gets bail, IAS officer investigates parents and VHP members who made remarks of wrong teaching about Hindu God's to students.