Mangalore Gerosa School controversy, IAS Akash Shankar news: ಜೆರೋಸಾ ಶಾಲೆ ಘಟನೆ ಬಗ್ಗೆ ಇಡೀ ದಿನ ತನಿಖೆ ; ಮಕ್ಕಳನ್ನು ಕರೆತಂದು ಹೇಳಿಕೆ ನೀಡಿದ ಪೋಷಕರು, ಶಾಲೆಯಲ್ಲೂ ವಿಚಾರಣೆ, ವರದಿಗೆ ತರಾತುರಿ ಇಲ್ಲ ಎಂದ ತನಿಖಾಧಿಕಾರಿ

20-02-24 10:42 pm       Mangalore Correspondent   ಕರಾವಳಿ

ಜೆರೋಸಾ ಶಾಲೆಯ ಘಟನೆ ಸಂಬಂಧಿಸಿ ಮಂಗಳವಾರ ಇಡೀ ದಿನ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಜಿಪಂ ಕಚೇರಿ ಆವರಣದಲ್ಲಿರುವ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ವಿಚಾರಣೆ ನಡೆದಿದೆ.

ಮಂಗಳೂರು, ಫೆ.20: ಜೆರೋಸಾ ಶಾಲೆಯ ಘಟನೆ ಸಂಬಂಧಿಸಿ ಮಂಗಳವಾರ ಇಡೀ ದಿನ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಜಿಪಂ ಕಚೇರಿ ಆವರಣದಲ್ಲಿರುವ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ವಿಚಾರಣೆ ನಡೆದಿದೆ.

ಸಂಜೆ 3 ಗಂಟೆಯಿಂದ ಪೋಷಕರು ತಮ್ಮೊಂದಿಗೆ ಮಕ್ಕಳನ್ನು ಕರೆತಂದು ಅಧಿಕಾರಿ ಮುಂದೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಒಬ್ಬೊಬ್ಬರಾಗಿಯೇ ಪೋಷಕರು ಅಧಿಕಾರಿಗಳಿಗೆ ಮೌಖಿಕವಾಗಿ ಮಾಹಿತಿಗಳನ್ನು ನೀಡಿದ್ದಾರೆ. ಎಲ್ಲರ ಹೇಳಿಕೆಯನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ, ಅಧಿಕಾರಿಗಳು ವರದಿ ಮಾಡಿಕೊಂಡಿದ್ದಾರೆ. ಏಳು ಮತ್ತು ಆರನೇ ತರಗತಿಯ ಸುಮಾರು 30ರಷ್ಟು ಪೋಷಕರು ಆಗಮಿಸಿದ್ದರು. ಕೆಲವೊಬ್ಬರು ತಮ್ಮ ಮಕ್ಕಳನ್ನೂ ಜೊತೆಗೆ ಕರೆತಂದಿದ್ದಾರೆ.

ಪೋಷಕಿ ಜ್ಯೋತಿ ಮಾತನಾಡಿ, ವಿವಾದ ಇಷ್ಟೊಂದು ಜಟಿಲವಾಗಲು ಸಿಸ್ಟರ್ ಪ್ರಭಾ ಅವರೇ ಕಾರಣ. ಮಕ್ಕಳು, ಪೋಷಕರು ಆರೋಪ ಮಾಡುತ್ತಿದ್ದರೂ, ಅವರು ಮುಂದೆ ಬಂದು ಮಾತನಾಡುತ್ತಿಲ್ಲ. ನಮ್ಮನ್ನು ಕರೆದಾದರೂ ಮಾತನಾಡಬಹುದಿತ್ತು. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ್ದಾರೆ. ನಮ್ಮ ಎದುರು ಬಂದು ಶಾಲೆಯಲ್ಲೇ ಮಾತಾಡಬಹುದಿತ್ತಲ್ಲ. ಈ ವಿಚಾರ ಇಷ್ಟು ದೊಡ್ಡದು ಆಗುತ್ತಿರಲಿಲ್ಲ. ಈಗ ನಾವು ನಮ್ಮ ಕೆಲಸ ಬಿಟ್ಟು ಅಲೆದಾಡುವ ಸ್ಥಿತಿಯಾಗಿದೆ. ಆದರೆ ಅಂತಹ ಮನಸ್ಥಿತಿಯವರು ಯಾವ ಶಾಲೆಯಲ್ಲೂ ಶಿಕ್ಷಕಿಯಾಗಿ ಮುಂದುವರಿಯಬಾರದು ಎಂದರು.

ಮತ್ತೊಬ್ಬ ಶಿಕ್ಷಕಿ ಮಾತನಾಡಿ, ಶಾಲೆಯಲ್ಲಿ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈಗ ಎಕ್ಸಾಂ ಹತ್ತಿರ ಬರುತ್ತಿದ್ದು, ರಿವಿಶನ್ ಮಾಡೋದಿಲ್ಲ. ನೀವಾಗಿಯೇ ಓದಿಕೊಳ್ಳಿ ಎನ್ನುತ್ತಿದ್ದಾರೆ. ತರಗತಿಯಲ್ಲಿ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುವುದೆಲ್ಲ ಆಗುತ್ತಿದೆಯಂತೆ. ಒಂದು ಶಾಲೆಯೊಳಗೆ ಇಷ್ಟೆಲ್ಲ ತೊಂದರೆಯಾದರೆ ಹೇಗೆ ಇರೋದು ಎಂದು ಪ್ರಶ್ನೆ ಮಾಡಿದ್ದಾರೆ. ಆರನೇ ತರಗತಿಯಲ್ಲೂ ಅದೇ ಶಿಕ್ಷಕಿ ಹಿಂದು ದೇವರ ಬಗ್ಗೆ ಅವಹೇಳಕಾರಿ ಮಾತನಾಡಿದ್ದಾರೆಂದು ಪೋಷಕರೊಬ್ಬರು ಹೇಳಿದ್ದು, ಅಧಿಕಾರಿಗೆ ತನ್ನ ಮಗುವಿನ ಸಹಿತ ಮಾಹಿತಿ ನೀಡಿದ್ದಾರೆ.

ವರದಿಗೆ ತರಾತುರಿ ಇಲ್ಲ

ವಿಚಾರಣೆ ಬಳಿಕ ಅಧಿಕಾರಿ ಆಕಾಶ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಎರಡು ದಿನದಲ್ಲಿ ತನಿಖೆ ಮುಗಿಯಬಹುದಿತ್ತು ಎಂದುಕೊಂಡಿದ್ದೆ. ಇನ್ನೂ ಕೆಲವೊಂದಷ್ಟು ಮಾಹಿತಿಗಳ ಅಗತ್ಯ ಇದೆ. ಅದನ್ನು ಮಾಡುತ್ತೇನೆ. ಬೆಳಗ್ಗೆ ಶಾಲೆಗೆ ಹೋಗಿ ಮಕ್ಕಳನ್ನು ಮಾತನಾಡಿಸಿದ್ದೇನೆ. ಶಿಕ್ಷಕರನ್ನೂ ಮಾತಾಡಿಸಿದ್ದೇನೆ ಎಂದರು. ಯಾವಾಗ ವರದಿಯನ್ನು ಕೊಡುತ್ತೀರಿ ಎಂದಿದ್ದಕ್ಕೆ, ತರಾತುರಿಯಲ್ಲಿ ವರದಿ ಕೊಟ್ಟು ನ್ಯಾಯ ನಿರಾಕರಣೆ ಆಗುವಂತೆ ಆಗಬಾರದು. ನನಗೇನೂ ತರಾತುರಿ ಇಲ್ಲ. ಎಲ್ಲರ ಮಾಹಿತಿ ಪಡೆದು ವರದಿ ತಯಾರಿಸುತ್ತೇನೆ ಎಂದು ಹೇಳಿದರು.

Mangalore Gerosa School controversy, IAS Akash Shankar  enquiries parents, visits school, files report. Also many of the VHP Leaders have been enquired.