Puttur, Ashok Rai, Mangalore: ಎಂಟು ವರ್ಷಗಳಿಂದ ಮಂಗಳೂರು- ಬೆಂಗಳೂರು ಹೆದ್ದಾರಿ ಕಾಮಗಾರಿ ; ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಗರಂ, ಹಾರಿಕೆಯ ಉತ್ತರ ನೀಡಿದ ಬೊಮ್ಮಾಯಿ

22-02-24 09:17 pm       Mangalore Correspondent   ಕರಾವಳಿ

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ.

ಮಂಗಳೂರು, ಫೆ.22: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಎಂಟು ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಜನಸಾಮಾನ್ಯರು, ವಾಹನ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಇಲ್ಲವೇ ಎಂದು ರಾಜ್ಯ ಸರ್ಕಾರದ ಬಳಿ ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೇಂದ್ರ ಸರಕಾರದ ಕೆಲಸ ಆಗಿರುವುದರಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಲು ಮುಂದಾಗಿದ್ದಾರೆ. ಬಹಳಷ್ಟು ಕಡೆ ರಾಷ್ಟ್ರೀಯ ಹೆದ್ದಾರಿ ಆಗಿದೆ, ನಮ್ಮ ಗದಗದಲ್ಲಿ ಸೂಪರ್ ರಸ್ತೆ ಆಗಿದೆ ಎಂದು ಹೇಳಲು ಹೊರಟಾಗ, ಅಲ್ಲಿ ಆಗದೇ ಇರುವುದನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರ ಕೊಡಿ ಎಂದು ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದರು.

ಹೆದ್ದಾರಿ ಕೆಲಸ ಆಗಿಲ್ಲಾಂದ್ರೆ, ಅಲ್ಲಿ ಭೂಸ್ವಾಧೀನ ಆಗಿರಲಿಕ್ಕಿಲ್ಲ. ಅದು ಮಾಡೋದು ರಾಜ್ಯ ಸರ್ಕಾರ. ಎಸ್ಎಲ್ ಓಗಳನ್ನು ನೇಮಕ ಮಾಡಿದ್ರೆ ಕೆಲಸ ಆಗುತ್ತೆ ಎಂದು ಬೊಮ್ಮಾಯಿ ಹೇಳಿದಾಗ, ಐದು ವರ್ಷಗಳ ಹಿಂದೆಯೇ ಭೂಸ್ವಾಧೀನ ಎಲ್ಲ ಮುಗಿದಿದೆ, ಕೆಲಸ ಮಾತ್ರ ಬಾಕಿ ಇದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರಿಗೂ ರಸ್ತೆಯ ದುಸ್ಥಿತಿ ಗೊತ್ತಿದೆ. ಅರೆಬರೆ ಕಾಮಗಾರಿಯಷ್ಟೇ ಆಗಿದೆ, ಅದನ್ನು ನೋಡಿದ್ರೆ ಇನ್ನೂ ನಾಲ್ಕೈದು ವರ್ಷ ಅಲ್ಲಿ ಕೆಲಸ ಆಗಲಿಕ್ಕಿಲ್ಲ ಅನ್ಸತ್ತೆ. ಯಾಕೆ ಕೆಲಸ ವೇಗ ಪಡೀತಾ ಇಲ್ಲ ಎನ್ನೋದು ನಮ್ಮ ಪ್ರಶ್ನೆ ಎಂದರು.

ಅಲ್ಲಿ ಯಾವುದೋ ಕಾರಣಕ್ಕೆ ಕೆಲಸ ಬಾಕಿ ಇರಬಹುದು. ಇತರ ಎಲ್ಲ ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸ ವೇಗವಾಗಿಯೇ ಆಗ್ತಾ ಇದೆ. ಕೇಂದ್ರ ಸರಕಾರ ಸಾವಿರಾರು ಕೋಟಿ ಅನುದಾನ ಕೊಟ್ಟಿದೆ, ರೈಲ್ವೇಗಾಗಿಯೇ ರಾಜ್ಯಕ್ಕೆ ಏಳು ಸಾವಿರ ಕೋಟಿ ಕೊಟ್ಟಿದೆ ಎಂದು ಹೇಳಿದರು. ಬೇರೆಲ್ಲ ಕಡೆ ಆಗಿರಬಹುದು, ನಮ್ಮ ಮಂಗಳೂರು- ಬೆಂಗಳೂರಿನ ರಸ್ತೆಯಲ್ಲಿ ಮಂಗಳೂರಿನ ಬಂಟ್ವಾಳದಿಂದ ಹಿಡಿದು ಶಿರಾಡಿ ಘಾಟ್ ವರೆಗಷ್ಟೇ ಕೆಲಸ ಆಮೆಗತಿಯಲ್ಲಿರೋದು. ಅದನ್ನು ಶೀಘ್ರದಲ್ಲೇ ಮಾಡಿಸಬೇಕು ಎಂದು ಅಶೋಕ್ ರೈ ಆಗ್ರಹಿಸಿದರು.

ಬಿಸಿ ರೋಡ್ ನಿಂದ ಗುಂಡ್ಯದ ವರೆಗಿನ ರಾಷ್ಟ್ರೀಯ ಹೆದ್ದಾರಿ ಕೆಲಸ ಆಗ್ತಿದ್ದು, ಕುಂಟುತ್ತಾ ಸಾಗಿರುವುದರಿಂದ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಲ್ಲಡ್ಕದಲ್ಲಿ ಮೂರು ಕಿಮೀ ಉದ್ದಕ್ಕೆ ಫ್ಲೈ ಓವರ್ ಮಾಡಿದ್ದು, ಅದರ ಕಾಮಗಾರಿಯೇ ಬಾಕಿಯಾಗಿದೆ. ಅನಗತ್ಯ ಎನಿಸುವಷ್ಟು ಉದ್ದಕ್ಕೆ ಈ ಫ್ಲೈಓವರ್ ಕೆಲಸ ಆಗುತ್ತಿದ್ದು, ಅಂದಾಜು 700 ಕೋಟಿ ಖರ್ಚು ಮಾಡುತ್ತಿದ್ದಾರೆ. ಇದರಿಂದಾಗಿ ಸೇತುವೆ ಕಾಮಗಾರಿ ಭಾರೀ ನಿಧಾನ ಗತಿಯಲ್ಲಿ ಸಾಗುತ್ತಿದೆ.

Puttur Mla Ashok Rai turns angry talking about Mangalore Bangalore highway in Assembly saying how public are facing huge problem travelling in sucha a bad road.