Mangalore, Netravati suicide: ಸೋಮೇಶ್ವರದ ಯುವಕ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆ ; ಆತ್ಮಹತ್ಯೆ ಶಂಕೆ, ಪತ್ನಿಯಿಂದ ವಿಚ್ಛೇದನ, ಬದುಕು ಕಸಿದ ಕುಡಿತದ ಚಟ ! 

22-02-24 10:46 pm       Mangalore Correspondent   ಕರಾವಳಿ

​​​​​​ಫೆ.19ರಂದು ಮನೆಯಿಂದ ನಾಪತ್ತೆಯಾಗಿದ್ದ ಸೋಮೇಶ್ವರದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಉಳ್ಳಾಲ, ಫೆ.22: ಫೆ.19ರಂದು ಮನೆಯಿಂದ ನಾಪತ್ತೆಯಾಗಿದ್ದ ಸೋಮೇಶ್ವರದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡಾ ಬಡಾವಣೆ ನಿವಾಸಿ ಗೌತಮ್ ಎಂ.(30) ಮೃತ ಯುವಕ. ಫೈನಾನ್ಸ್ ಸೀಸರ್ ಆಗಿದ್ದ ಗೌತಮ್  ಕಳೆದ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಟೆ, ಕಲಶಾಭಿಶೇಕದ ಹೊರೆ ಕಾಣಿಕೆಯಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದ. ರಾತ್ರಿ ವೇಳೆ ಮನೆ ಮಂದಿಯಲ್ಲಿ ಕಿರಿಕ್ ಮಾಡಿದ್ದ ಗೌತಮ್ ಮನೆ ಬಿಟ್ಟು ತೆರಳಿದ್ದನಂತೆ. ಗೌತಮ್ ಮತ್ತೆ ಮರಳದ ಹಿನ್ನಲೆಯಲ್ಲಿ ಮಾರನೇ ದಿವಸ ಮನೆ ಮಂದಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಮಂಗಳವಾರ ಸಂಜೆ ವೇಳೆ ನೇತ್ರಾವತಿ ನದಿಯಲ್ಲಿ ಶವ ಪತ್ತೆಯಾಗಿದ್ದು ಪಾಂಡೇಶ್ವರ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇಂದು ಮನೆ ಮಂದಿ ಮೃತದೇಹ ಗುರುತಿಸಿದ್ದು ಅವರ ಸಮಕ್ಷಮದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಗೌತಮ್ ವಿವಾಹಿತನಾಗಿದ್ದು ವರ್ಷಗಳ ಹಿಂದೆಯೇ ಪತ್ನಿಯಿಂದ ವಿಚ್ಛೇದಿತನಾಗಿದ್ದ. ಕುಡಿತದ ಚಟ ಮೈಗೂಡಿಸಿದ್ದ ಗೌತಮ್ ಕ್ಷುಲ್ಲಕ ಕಾರಣಗಳಿಗೆ ಮನೆ ಮಂದಿಯಲ್ಲಿ ಕಿರಿಕ್ ಮಾಡುತ್ತಲೇ ಇದ್ದನಂತೆ. ಮೃತ ಗೌತಮ್ ತಂದೆ, ತಾಯಿ, ಇಬ್ಬರು ಸಹೋದರರನ್ನ ಅಗಲಿದ್ದಾನೆ.

Mangalore Body of Someshwara youth in Netravati, suicide suspected.