B M Farooq, Tulu language Lipi: ತುಳು ಭಾಷೆಗೆ 2400 ವರ್ಷಗಳ ಇತಿಹಾಸ ಇದೆ, ತುಳು ಲಿಪಿಯಿಂದಲೇ ಮಲಯಾಳಂ ಲಿಪಿ ಮಾಡ್ಕೊಂಡಿದ್ದಾರೆ ; ವಿಧಾನ ಪರಿಷತ್ತಿನಲ್ಲಿ ಬಿ.ಎಂ.ಫಾರೂಕ್ ಪ್ರತಿಪಾದನೆ, ಅಧ್ಯಯನಕ್ಕಷ್ಟೇ ಸೀಮಿತಗೊಂಡ ಸಚಿವ ತಂಗಡಗಿ  

29-02-24 12:05 pm       Mangalore Correspondent   ಕರಾವಳಿ

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕೆಂದು ವಿಧಾನ ಪರಿಷತ್ತಿನಲ್ಲಿ ಮಂಗಳೂರು ಮೂಲದ ಬಿ.ಎಂ. ಫಾರೂಕ್ ಒತ್ತಾಯ ಮಾಡಿದ್ದಾರೆ.

ಮಂಗಳೂರು, ಫೆ.29: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕೆಂದು ವಿಧಾನ ಪರಿಷತ್ತಿನಲ್ಲಿ ಮಂಗಳೂರು ಮೂಲದ ಬಿ.ಎಂ. ಫಾರೂಕ್ ಒತ್ತಾಯ ಮಾಡಿದ್ದಾರೆ.

ತುಳು ಭಾಷೆಗೆ 2400 ವರ್ಷಗಳ ಇತಿಹಾಸ ಇದೆ. ಸ್ವತಂತ್ರ ಲಿಪಿ ಇದೆ. 500 ವರ್ಷಗಳ ಹಿಂದೆ ಉಡುಪಿ ಮಠದಲ್ಲಿ ತುಳು ಲಿಪಿಯಲ್ಲೇ ಬರೆದಿಟ್ಟ ತಾಳೆಗರಿಗಳ ದಾಖಲೆ ಇದೆ. ತುಳು ಲಿಪಿಯನ್ನೇ ಬಳಸ್ಕೊಂಡು ಮಲಯಾಳಂ ಲಿಪಿ ಮಾಡಿಕೊಂಡಿದ್ದಾರೆ. ಪಂಚ ದ್ರಾವಿಡ ಭಾಷೆಗಳ ಪೈಕಿ ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳಿಗೆ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿದೆ. ಅದೇ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ತುಳು ಭಾಷೆಗೆ ರಾಜ್ಯದಲ್ಲೇ ಮಾನ್ಯತೆ ಸಿಕ್ಕಿಲ್ಲ.

ಹಿಂದೆ ಭಾಷಾವಾರು ಪ್ರಾಂತ್ಯಗಳಾದಾಗ ಕೇರಳ, ತಮಿಳು, ತೆಲುಗರ ಆಂಧ್ರ ಪ್ರದೇಶ, ಕನ್ನಡಿಗರ ಕರ್ನಾಟಕ ಆಗಿತ್ತು. ತುಳುವರು ಇರುವ ಕರಾವಳಿಯ ಪ್ರದೇಶ ತುಳು ರಾಜ್ಯ ಆಗಬೇಕಿತ್ತು. ಅದರ ಒಂದು ಭಾಗ ಕಾಸರಗೋಡು ಕೇರಳಕ್ಕೆ ಸೇರಿಕೊಂಡರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಕರ್ನಾಟಕ ಸೇರಿದವು. ಹೀಗಾಗಿ ಸುಮಾರು 150 ಕಿಮೀ ಉದ್ದಗಲ ವ್ಯಾಪ್ತಿಯ ತುಳುವರ ರಾಜ್ಯ ಬೇಡಿಕೆಗೆ ಬಲ ಸಿಗಲಿಲ್ಲ. 1874ರಲ್ಲೇ ಜರ್ಮನ್ ಮಿಷನರಿ ಎ.ಸಿ. ಬರ್ನಾಲ್ ತನ್ನ ಪುಸ್ತಕದಲ್ಲಿ ತುಳು ಲಿಪಿಯ ವರ್ಣಮಾಲೆಯನ್ನು ಪ್ರಕಟಿಸಿರುವ ಇತಿಹಾಸ ಇದೆ. ಜನಪದ, ಸಾಹಿತ್ಯಗಳ ಸಮೃದ್ಧಿ ಇರುವ ತುಳು ಭಾಷೆಗೆ ಮಾನ್ಯತೆ ದೊರಕಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಫಾರೂಕ್ ವಿಧಾನ ಪರಿಷತ್ತಿನ ಗಮನ ಸೆಳೆದಿದ್ದಾರೆ.

ಫಾರೂಕ್ ಪ್ರಶ್ನೆಗೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ನಾವು ತುಳು ಭಾಷೆಯನ್ನು ಎರಡನೇ ಭಾಷೆಯಾಗಿ ಸ್ವೀಕರಿಸುವ ವಿಚಾರದಲ್ಲಿ ಎಲ್ಲ ಇಲಾಖೆಗಳ ಮಾಹಿತಿ ಕೇಳಿ ವರದಿ ಪಡೆದಿದ್ದೇವೆ. ಬೇರೆ ರಾಜ್ಯಗಳಲ್ಲಿ ಹೇಗೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಬಿಹಾರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ರಾಜ್ಯಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದೇವೆ, ಅವರಿಂದ ಉತ್ತರ ಸಿಕ್ಕಿಲ್ಲ. ಹೀಗಾಗಿ ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ವರದಿ ತರಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಅಷ್ಟೇ !

ತುಳುವನ್ನು ದ್ವಿತೀಯ ಭಾಷೆಯಾಗಿ ಸ್ವೀಕರಿಸಲು ಬೇರೆ ರಾಜ್ಯಗಳಲ್ಲಿ ಯಾವ ರೀತಿ ಮಾಡಿದ್ದಾರೆಂದು ತಿಳಿಯಲು ಅಧಿಕಾರಿಗಳ ತಂಡ ಹೋಗಬೇಕಿಲ್ಲ. ಯಾವುದೇ ಸ್ಥಳೀಯ ಭಾಷೆಯನ್ನು ಆಯಾ ರಾಜ್ಯ ಸರಕಾರಗಳು ದ್ವಿತೀಯ ಭಾಷೆಯಾಗಿ ಸ್ವೀಕರಿಸಲು ಅದರದ್ದೇ ಆದ ಮಾನದಂಡಗಳಿರುತ್ತವೆ. ಅದಕ್ಕೆಂದೇ ಸಂವಿಧಾನದಲ್ಲಿ ನಿಯಮಗಳಿರುತ್ತವೆ. ಅದನ್ನು ಅನುಸರಿಸಿ ಅಧಿಕಾರಿಗಳು ತಜ್ಞರ ಅಭಿಪ್ರಾಯ ಪಡೆದು ಸರಕಾರಕ್ಕೆ ವರದಿ ಕೊಡಬಹುದು. ವಿಧಾನಸಭೆಯಲ್ಲಿ ಸಂಬಂಧಪಟ್ಟ ಸಚಿವರು ಅದನ್ನು ಮಂಡಿಸಿ ಸರ್ಕಾರದ ಮೂಲಕ ಆದೇಶ ಹೊರಡಿಸಬಹುದು. ಹಿಂದಿನ ಬಿಜೆಪಿ ಸರಕಾರ ತನ್ನ ಅವಧಿಯ ಕೊನೆಯಲ್ಲಿ ತರಾತುರಿಯಲ್ಲಿ ಡಾ.ಮೋಹನ ಆಳ್ವರ ವರದಿಯನ್ನು ಪಡೆದು ಅಧಿವೇಶನದಲ್ಲಿ ಮಂಡಿಸುತ್ತೇವೆಂದು ಹೇಳಿತ್ತೇ ವಿನಾ ಬಳಿಕ ಸೀಟಿನಡಿಯಲ್ಲಿ ಇರಿಸಿ ತಣ್ಣಗಾಗಿಸಿತ್ತು. ಕರಾವಳಿಯ ಬಿಜೆಪಿ ಶಾಸಕರೂ ತುಟಿ ಬಿಚ್ಚಲಿಲ್ಲ. ಒಂದು ಬಾರಿಯೂ ತುಳು ಭಾಷೆ ಬಗ್ಗೆ ಮಾತಾಡಿಲ್ಲ. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರಂಭದಿಂದಲೂ ಶಾಸಕ ಅಶೋಕ್ ರೈ ಸೇರಿ ಕೆಲವರು ಪ್ರಸ್ತಾಪ ಮಾಡಿದ್ದಾರೆ. ಇತ್ತೀಚೆಗೆ ಮಂಗಳೂರಿಗೆ ಬಂದ ಸಿದ್ದರಾಮಯ್ಯ ಅವರಿಗೂ ಮಾಜಿ ಶಾಸಕ ಮೊಯ್ದೀನ್ ಬಾವ, ತುಳು ಭಾಷೆ ಬಗ್ಗೆ ತುರ್ತು ಗಮನಿಸುವಂತೆ ಪತ್ರ ನೀಡಿದ್ದಾರೆ. ಇದೆಲ್ಲ ಆಗಿದ್ದರೂ ರಾಜ್ಯ ಸರಕಾರ ಮೀನ ಮೇಷದ ಮಾತನ್ನಾಡುತ್ತಲೇ ಇದೆ. ಮಾಡಬೇಕೆಂಬ ತುಡಿತ, ಇಚ್ಛಾಶಕ್ತಿ ಇದ್ದರೆ ಯಾವುದನ್ನೂ ಮಾಡಬಹುದು.

B M Farooq talks about Tulu language at Assembly. Says Malayalam language was formed with the help of Tulu Lipi.