Mangalore Kadaba Nia Raid, Biju Abraham: ಕಡಬದಲ್ಲಿ ಎನ್ಐಎ ದಾಳಿ ; ಕೇರಳ ಮೂಲದ ಬಿಜು ಅಬ್ರಹಾಂ ಬಂಧಿಸಿದ ಅಧಿಕಾರಿಗಳು

05-03-24 07:30 pm       Mangalore Correspondent   ಕರಾವಳಿ

ಕಡಬ ತಾಲೂಕಿನ ನಿಂತಿಕಲ್ಲು ಬಳಿಯ ಎಣ್ಮೂರಿಗೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಕೇರಳ ಮೂಲದ ಬಿಜು ಅಬ್ರಾಹಂ ಎಂಬಾತನನ್ನು ಬಂಧಿಸಿದ್ದಾರೆ.

ಮಂಗಳೂರು, ಮಾ.5: ಕಡಬ ತಾಲೂಕಿನ ನಿಂತಿಕಲ್ಲು ಬಳಿಯ ಎಣ್ಮೂರಿಗೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಕೇರಳ ಮೂಲದ ಬಿಜು ಅಬ್ರಾಹಂ ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ದಾಳಿ ನಡೆಸಿದ್ದ ಅಧಿಕಾರಿಗಳು ವಿಚಾರಣೆ ಬಳಿಕ ಸಂಜೆಯ ವೇಳೆಗೆ ವಶಕ್ಕೆ ಪಡೆದಿದ್ದು ಬೆಂಗಳೂರಿಗೆ ಕರೆದೊಯ್ದಿರುವ ಮಾಹಿತಿಯಿದೆ.

ಆರೋಪಿ ಬಿಜು ಅಬ್ರಾಹಂ, ಎಣ್ಮೂರಿನಲ್ಲಿ ಚಿದಾನಂದ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ. ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಸಂಬಂಧಿಸಿ ಕಳೆದ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಿಜುವನ್ನು ಬಂಧಿಸಲಾಗಿದೆ. ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಆರೋಪಿಗಳಿಗೆ ಬಿಜು ಅಬ್ರಾಹಂ ಆಶ್ರಯ ನೀಡಿದ್ದ ಎಂಬ ಆರೋಪದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬಿಜು ಮನೆಯಲ್ಲಿ ಏಕಾಏಕಿ ದಾಳಿ ನಡೆಸಿ ಶೋಧ ನಡೆಸಿರುವ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.

ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿರುವಾಗಲೇ ಎನ್ಐಎ ಅಧಿಕಾರಿಗಳು ಏಕಕಾಲದಲ್ಲಿ ಏಳು ರಾಜ್ಯಗಳ 17 ಕಡೆಗಳಲ್ಲಿ ದಾಳಿ ನಡೆಸಿದ್ದರು. ಅದರಲ್ಲಿ ಕಡಬದ ಈ ದಾಳಿಯೂ ಒಂದಾಗಿದ್ದು, ಬೆಂಗಳೂರಿನ ಸ್ಫೋಟ ಘಟನೆಗೆ ಸಂಬಂಧ ಇದೆಯೇ ಎನ್ನುವ ಬಗ್ಗೆ ತಿಳಿದುಬಂದಿಲ್ಲ. ಬೆಂಗಳೂರಿನ ಜೈಲಿನಲ್ಲಿರುವ ಲಷ್ಕರ್ ಉಗ್ರರಿಂದ ಪ್ರೇರಿತಗೊಂಡು ವಿಧ್ವಂಸಕ ದಾಳಿಗೆ ಐವರು ಆರೋಪಿಗಳು ಸಂಚು ಹೂಡಿದ್ದರು ಎನ್ನುವ ಕೇಂದ್ರೀಯ ಏಜನ್ಸಿಗಳ ಮಾಹಿತಿ ಆಧರಿಸಿ ಬೆಂಗಳೂರು ಪೊಲೀಸರು ಕಳೆದ ಜುಲೈ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆನಂತರ, ಪ್ರಕರಣ ಎನ್ಐಎಗೆ ಹಸ್ತಾಂತರ ಆಗಿತ್ತು.

Mangalore Kadaba Nia Raid, Biju Abraham arrested by NIA officers, taken to Bangalore. He has been arrested over giving shelter to terrorist to conduct terror activities in state of Karnataka.