Dr KT Gurumurthy, Cashew Farming Mela, Ullal: ಗೇರು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳ ಶಮನ ; ಗೇರು ಕೃಷಿ ಮೇಳದಲ್ಲಿ ಡಾ.ಕೆ.ಟಿ ಗುರುಮೂರ್ತಿ ಅಭಿಮತ 

06-03-24 08:38 pm       Mangalore Correspondent   ಕರಾವಳಿ

ಗೇರು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಶಮನವಾಗುವುದಲ್ಲದೆ, ಪರಿಣಾಮಕಾರಿ ರೋಗ ನಿರೋಧಕವೂ ಆಗಿದೆ ಎಂದು ಅಧ್ಯಯನದಲ್ಲಿ ಧೃಡಪಟ್ಟಿದೆ.

ಉಳ್ಳಾಲ, ಮಾ.6: ಗೇರು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಶಮನವಾಗುವುದಲ್ಲದೆ, ಪರಿಣಾಮಕಾರಿ ರೋಗ ನಿರೋಧಕವೂ ಆಗಿದೆ ಎಂದು ಅಧ್ಯಯನದಲ್ಲಿ ಧೃಡಪಟ್ಟಿದೆ. ಗೇರು ಬೆಳೆಯಿಂದ ದೇಶದ ಆರ್ಥಿಕತೆ ಗಣನೀಯ ಮಟ್ಟದಲ್ಲಿ ಹೆಚ್ಚಿದೆ ಎಂದು ಶಿವಮೊಗ್ಗದ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ ಅಭಿಪ್ರಾಯ ಪಟ್ಟರು.

ಅವರು ಶಿವಮೊಗ್ಗದ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ,ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತೊಕ್ಕೊಟ್ಟಿನ ಕಾಪಿಕಾಡ್ ನಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ 2024 ಕಾರ್ಯಕ್ರಮದಲ್ಲಿ ಮಾತನಾಡಿದರು. ಗೇರು ಬೆಳೆಗೆ ಉತ್ತೇಜನ ರಾಜ್ಯ ಮಟ್ಟದಲ್ಲಿ ಸಿಗುತ್ತಿದೆ. ರಾಜ್ಯದಲ್ಲಿ ಬಹಳಷ್ಟು ಮಂದಿ ಗೇರು ಕೃಷಿಕರು ಇದ್ದು ಉತ್ಪಾದನೆ ಕೂಡ ಜಾಸ್ತಿ ಇದೆ. ವಿದೇಶಿ ವಿನಿಮಯಕ್ಕೆ ಗೇರು ಅತೀ ಮುಖ್ಯವಾದರೂ ಮಾರುಕಟ್ಟೆ ಸಮಸ್ಯೆ ಇದೆ. ಇದು ಪರಿಹಾರ ಆಗಬೇಕು ಎಂದು ಹೇಳಿದರು.

ಕೃಷಿ ಇಲಾಖೆ ದ.ಕ. ಜಿಲ್ಲಾ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ ಮಾತನಾಡಿ ಗೇರು ಕೃಷಿಯನ್ನು ಅನಿವಾರ್ಯವಾಗಿ ಬಯಸಬೇಕು. ಆಸಕ್ತಿ ಇಟ್ಟುಕೊಂಡು ಗೇರು ಕೃಷಿಗೆ ಒತ್ತು ನೀಡಿದರೆ ಕೃಷಿ ಅಭಿವೃದ್ಧಿ ಸಾಧ್ಯ. ಕೃಷಿಕರು ಕೇವಲ ಒಂದೇ ಕೃಷಿಗೆ ಒತ್ತು ಕೊಡುವುದು ಜಾಸ್ತಿ. ಇದರ ಬದಲು ಸಾವಯವ ಕೃಷಿಗೆ ಸಮಾನವಾಗಿ ಒತ್ತು ನೀಡಿದರೆ ಮಾತ್ರ ವಿವಿಧ ಬೆಳೆಗಳನ್ನು ಬೆಳೆಸಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರಗತಿ ಪರ ಕೃಷಿಕರಾದ ದಯಾನಂದ ಭಟ್ ಮೂಡುಬಿದಿರೆ, ಪ್ರೇಮಾ ಹೆಗಡೆ, ನಿರಂಜನ್ ಸೇಮಿತ, ನವೀನ್ ಚಂದ್ರ ಜಾತುಬಾಯಿ ಸುಳ್ಯ, ವಿಲ್ಮಾ ಪ್ರಿಯಾ ಅಲ್ಬುಕರ್ಕ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಕೆ.ಶಿ.ನಾ.ಕೃ.ತೋ.ವಿ.ವಿ. ಇರುವಕ್ಕಿಯ ಸಂಶೋಧನಾ ನಿರ್ದೇಶಕ  ಡಾ.ದುಷ್ಯಂತ್ ಕುಮಾರ್ ಉದ್ಘಾಟಿಸಿದರು. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ತಾಂತ್ರಿಕ ಕೈಪಿಡಿ ಬಿಡುಗಡೆ ಮಾಡಿದರು. ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಹೆಚ್.ಎನ್.ಆಂಜನೇಯಪ್ಪ, ಬ್ರಹ್ಮಾವರ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಧನಂಜಯ ಬಿ., ಪ್ರವೀಣ್ ಎಸ್ ಕುಂಪಲ, ಡಾ.ರಮೇಶ್ ಟಿ.ಜೆ. ಮೊದಲಾವರು ಉಪಸ್ಥಿತರಿದ್ದರು.

A study has confirmed that consuming cashew nuts not only cures heart-related diseases but also provides effective immunity. Dr. K.T. Gurumurthy, Extension Director, Keladi Shivappa Nayaka University of Agricultural and Horticultural Sciences, Iruvakki, Shivamogga, opined that the country's economy has increased considerably due to cashew cultivation.