NIA shivamogga, mangalore ISIS case, graffiti case: ಶಿವಮೊಗ್ಗ ಬಾಂಬ್ ಟ್ರಯಲ್, ಗೋಡೆ ಬರಹ ಪ್ರಕರಣ ; ಅರಾಫತ್ ಆಲಿ, ಅಬ್ದುಲ್ ಮತೀನ್, ಮುಸಾವಿರ್ ದುಷ್ಪ್ರೇರಣೆ, ಎನ್ಐಎ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ

08-03-24 08:41 pm       Mangalore Correspondent   ಕರಾವಳಿ

ಶಿವಮೊಗ್ಗ ಬಾಂಬ್ ಟ್ರಯಲ್ ಮತ್ತು ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಮತ್ತೊಂದು ಬಾರಿ ಹೆಚ್ಚುವರಿ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮಂಗಳೂರು, ಮಾ.8: ಶಿವಮೊಗ್ಗ ಬಾಂಬ್ ಟ್ರಯಲ್ ಮತ್ತು ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಮತ್ತೊಂದು ಬಾರಿ ಹೆಚ್ಚುವರಿ ಚಾರ್ಜ್ ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಮಂಗಳೂರಿನ ಎರಡು ಕಡೆ ಗೋಡೆ ಬರಹ ಬರೆಯಲು ಮೊಹಮ್ಮದ್ ಶಾರೀಕ್ ಮತ್ತು ಮಾಝ್ ಮುನೀರ್ ಗೆ ಪ್ರೇರಣೆ ನೀಡಿದ್ದ ಅರಾಫತ್ ಆಲಿ ಮತ್ತು ಇತರ ಇಬ್ಬರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಶಿವಮೊಗ್ಗ ಮೂಲದ ಅರಾಫತ್ ಆಲಿ ವಿದೇಶದಲ್ಲಿದ್ದುಕೊಂಡೇ ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆಯುವಂತೆ ಪ್ರೇರಣೆ ನೀಡಿದ್ದ. ಅದರಂತೆ, 2020ರ ಜನವರಿ ತಿಂಗಳಲ್ಲಿ ಮಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಮಾಜ್ ಮುನೀರ್ ಮತ್ತು ಸೇಲ್ಸ್ ಮ್ಯಾನ್ ಆಗಿದ್ದ ಮೊಹಮ್ಮದ್ ಶಾರೀಕ್ ಕದ್ರಿ ಮತ್ತು ಕೋರ್ಟ್ ಆವರಣದಲ್ಲಿರುವ ಹಳೆ ಕಟ್ಟಡದ ಗೋಡೆಯಲ್ಲಿ ಮನುವಾದಿಗಳೇ, ಸಂಘಿಗಳೇ ಬಾಲ ಬಿಚ್ಚಿದರೆ ಮಂಗಳೂರಿಗೆ ಲಷ್ಕರ್ ಗಳನ್ನು ಕರೆಯುತ್ತೇವೆ ಎಂದು ಎಚ್ಚರಿಕೆ ನೀಡುವ ರೀತಿ ಬರಹ ಬರೆದಿದ್ದರು.

 

ಕದ್ರಿ ಬಟ್ಟಗುಡ್ಡೆಯ ಅಪಾರ್ಟ್ಮೆಂಟ್ ಅವರಣದ ಬಿಳಿ ಗೋಡೆಯಲ್ಲಿ ದಪ್ಪಕ್ಷರದಲ್ಲಿ ಬರಹ ಬರೆದಿದ್ದು ದೊಡ್ಡ ಸಂಚಲನ ಎಬ್ಬಿಸಿತ್ತು. ಕೊರೊನಾ ಲಾಕ್ಡೌನ್ ಇರುವಾಗಲೇ ಈ ರೀತಿಯ ಬರಹ ಬರೆದು ಪೊಲೀಸರ ಕೈಗೆ ಸಿಗದೆ ಮಾಜ್ ಮತ್ತು ಶಾರೀಕ್ ಅಡಗಿಕೊಂಡಿದ್ದರು. ಅವರನ್ನು ಪತ್ತೆ ಹಚ್ಚುವುದು ಪೊಲೀಸರಿಗೂ ಸವಾಲಾಗಿತ್ತು. ಎರಡು ವಾರಗಳ ಬಳಿಕ ಪೊಲೀಸರು ಬಂಧನ ಮಾಡಿದ್ದರು. ಆ ಸಂದರ್ಭದಲ್ಲಿ ಅಬ್ದುಲ್ ಮತೀನ್ ಮತ್ತು ಅರಾಫತ್ ಆಲಿಯ ದುಷ್ಪ್ರೇರಣೆ ಎಂಬ ವಿಚಾರ ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ತಿಳಿದುಬಂದಿದ್ದರೂ, ಅವರು ವಿದೇಶದಲ್ಲಿದ್ದರಿಂದ ತನಿಖೆ ಅರ್ಧಕ್ಕೆ ನಿಂತಿತ್ತು. 2023ರ ಸೆಪ್ಟಂಬರ್ ತಿಂಗಳಲ್ಲಿ ಅರಾಫತ್ ಆಲಿ ಕೆನ್ಯಾ ದೇಶದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ಇಂಟರ್ ಪೋಲ್ ಸೂಚನೆಯಂತೆ ಎನ್ಐಎ ಬಂಧನ ಮಾಡಿತ್ತು.

ಅರಾಫತ್ ಆಲಿ ಬಂಧನದ ಬಳಿಕ ಅಬ್ದುಲ್ ಮತೀನ್ ಮತ್ತು ಮುಸಾವಿರ್ ಹುಸೇನ್ ಸಾಹೇಬ್, ಲಷ್ಕರ್ ಪರ ಬರಹ ಬರೆಸಲು ಸೂಚನೆ ನೀಡಿದ್ದರು ಅನ್ನುವ ಅಂಶ ತಿಳಿದುಬಂದಿತ್ತು. ಇದರಂತೆ. ಆ ಇಬ್ಬರನ್ನೂ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿದ್ದು ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಇದಲ್ಲದೆ, ಅರಾಫತ್ ಆಲಿ ಗೋಡೆ ಬರಹ ಬರೆಯುವುದಕ್ಕಾಗಿ ಮಾಜ್ ಮತ್ತು ಶಾರೀಕ್ ಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ನೆರವು ನೀಡಿದ್ದ. ಅಲ್ಲದೆ, ಶಿವಮೊಗ್ಗ ಮತ್ತು ಮಂಗಳೂರು ಕೇಂದ್ರೀಕರಿಸಿ ಐಸಿಸ್ ನೆಟ್ವರ್ಕ್ ಬೆಳೆಸುವಂತೆಯೂ ಹಣಕಾಸು ಒದಗಿಸಿದ್ದ.

ಅರಾಫತ್, ಅಬ್ದುಲ್ ಮತೀನ್ ಮತ್ತು ಮುಸಾವಿರ್ ಹುಸೇನ್ ವಿದೇಶದಲ್ಲಿದ್ದು ಕರ್ನಾಟಕದಲ್ಲಿ ಐಸಿಸ್ ನೆಟ್ವರ್ಕ್ ಬೆಳೆಸಲು ಸಹಕಾರ ನೀಡುತ್ತಿದ್ದರು ಎಂಬುದಾಗಿಯೂ ಎನ್ಐಎ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಅಬ್ದುಲ್ ಮತೀನ್ ಮತ್ತು ಮುಸಾವೀರ್ ವಿದೇಶದಲ್ಲೇ ತಲೆಮರೆಸಿಕೊಂಡಿದ್ದು, ಸದ್ಯ ಎಲ್ಲಿದ್ದಾರೆ ಎನ್ನುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಗೋಡೆ ಬರಹ ಮತ್ತು ಶಿವಮೊಗ್ಗದ ಬಾಂಬ್ ಟ್ರಯಲ್ ಪ್ರಕರಣದಲ್ಲಿ ಎನ್ಐಎ ಈ ಹಿಂದೆ ಎರಡು ಬಾರಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೀಗ ಮತ್ತೆ ಹೆಚ್ಚುವರಿಯಾಗಿ ಒಂದಷ್ಟು ಆರೋಪಗಳನ್ನು ಹೊರಿಸಿ ಚಾರ್ಜ್ ಶೀಟ್ ಮಾಡಲಾಗಿದೆ.

NIA files chargesheet against another accused in Shivamogga and mangalore ISIS conspiracy case. The National Investigation Agency (NIA) has filed a chargesheet against one more accused in the Shivamogga ISIS conspiracy case, related to writing of graffiti in Mangaluru in support of proscribed terrorist organisations, including ISIS and Lashkar