NIA, Coast gaurd, Mangalore, cafe blast: ಬೆಂಗಳೂರು ಕೆಫೆ ಬಾಂಬರ್ ಸಮುದ್ರ ಮಾರ್ಗದಲ್ಲಿ ವಿದೇಶಕ್ಕೆ ಹಾರಲು ಯತ್ನ ; ಕರಾವಳಿ ಭಾಗದಲ್ಲಿ ಹೈ ಎಲರ್ಟ್, ಕರಾವಳಿ ಪಡೆಯಿಂದ ತಪಾಸಣೆ

09-03-24 12:33 pm       Mangalore Correspondent   ಕರಾವಳಿ

ಬೆಂಗಳೂರು ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಕರಾವಳಿಯಿಂದ ಸಮುದ್ರ ಮಾರ್ಗದಲ್ಲಿ ಪರಾರಿಯಾಗುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತೀರ ಪ್ರದೇಶದಲ್ಲಿ ಹೈ ಎಲರ್ಟ್ ಮಾಡಿದ್ದಾರೆ. 

ಮಂಗಳೂರು, ಮಾ.9: ಬೆಂಗಳೂರು ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಕರಾವಳಿಯಿಂದ ಸಮುದ್ರ ಮಾರ್ಗದಲ್ಲಿ ಪರಾರಿಯಾಗುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತೀರ ಪ್ರದೇಶದಲ್ಲಿ ಹೈ ಎಲರ್ಟ್ ಮಾಡಿದ್ದಾರೆ. 

ಬಾಂಬರ್ ಟ್ರಾಕ್ ಮಾಡಿ ಬೆನ್ನು ಬಿದ್ದಿರುವ ರಾಜ್ಯ ಪೊಲೀಸ್‌ ಅಧಿಕಾರಿಗಳು ಹಾಗು ಎನ್ಐಎ ಅಧಿಕಾರಿಗಳು ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಬಳ್ಳಾರಿಯಿಂದ ಶಿವಮೊಗ್ಗದ ಮೂಲಕ ಭಟ್ಕಳಕ್ಕೆ ಬಂದಿದ್ದಾನೆ ಎಂಬ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.‌ ಮೊಬೈಲ್ ಬಳಸದೆ, ವೇಷ ಬದಲಿಸುತ್ತಿರುವ ಆರೋಪಿ ಕರಾವಳಿಯಿಂದ ಸಮುದ್ರ ಮಾರ್ಗದಲ್ಲಿ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿರಬಹುದು ಎನ್ನುವ ಶಂಕೆ ಇದೆ. 

ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳುವ ಬೋಟ್ ನಲ್ಲಿ ಆರೋಪಿ ಪರಾರಿಯಾಗಲು ಯತ್ನಿಸುತ್ತಿರುವ ಮಾಹಿತಿ ಆಧರಿಸಿ ರಾಜ್ಯದ ಮೂರು ಜಿಲ್ಲೆಗಳ ವ್ಯಾಪ್ತಿಯ 320 ಕಿಮೀ ಉದ್ದದ ಕಡಲ ತೀರದಲ್ಲಿ ಹೈ ಅಲರ್ಟ್ ಮಾಡಲಾಗಿದೆ. ‌ರಾಜ್ಯ ಕರಾವಳಿ ಕಾವಲು ಪಡೆ ಪೊಲೀಸರು ಸಮುದ್ರದಲ್ಲಿ ಗಸ್ತು ನಡೆಸುತ್ತಿದ್ದು ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಲು ಮೀನುಗಾರರಿಗೆ ಸೂಚಿಸಿದ್ದಾರೆ.‌ ಅಲ್ಲದೆ, ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ ಗಳಲ್ಲಿ ಕರಾವಳಿ ಕಾವಲು ಪಡೆ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. 

ಸಮುದ್ರದಲ್ಲಿ ಯಾವುದೇ ಸಂಶಯಾಸ್ಪದ ನಡೆ ಕಂಡುಬಂದರೆ ಅಥವಾ ಬೋಟ್ ಗಳಲ್ಲಿ ಅಪರಿಚಿತ ವ್ಯಕ್ತಿಗಳು ಪತ್ತೆಯಾದರೆ ಮಾಹಿತಿ ನೀಡುವಂತೆ ಕರಾವಳಿ ಪಡೆಯವರು ಸೂಚನೆ ನೀಡಿದ್ದಾರೆ. ಭಟ್ಕಳದಲ್ಲಿ ಹಿಂದೆ ಗೋಲ್ಡ್ ಸ್ಮಗ್ಲಿಂಗ್ ಇನ್ನಿತರ ಕಳ್ಳಸಾಗಾಟಕ್ಕೆ ರಹದಾರಿ ಇದೆ. ಅಲ್ಲಿಂದ ನೇರವಾಗಿ ಪಾಕಿಸ್ತಾನ ಸಂಪರ್ಕದ ದಾರಿಯೂ ಆಳ ಸಮುದ್ರದ ಮೂಲಕ ಇದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಬಾಂಬರ್ ಆರೋಪಿ ಭಟ್ಕಳದ ನಂಟು ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸಿರಬಹುದು ಎಂಬ ಶಂಕೆಯಲ್ಲಿ ಪೊಲೀಸರಿದ್ದಾರೆ.

Bangalore cafe blast, bomber to have travelled by boat, high alert in karvali regions, coast gaurd surveillance.