Mangalore Circuit House, of Bejai, George Fernandes, Mayor: ಸರ್ಕಿಟ್ ಹೌಸ್ - ಬಿಜೈ ರಸ್ತೆಗೆ ಮಾಜಿ ರಕ್ಷಣಾ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಹೆಸರು ; ರಾಜ್ಯ ಸರ್ಕಾರದಿಂದ ಒಪ್ಪಿಗೆ, ಲೋಕಸಭೆ ಚುನಾವಣೆ ಬಳಿಕ ನಾಮಕರಣ 

12-03-24 08:40 pm       Mangalore Correspondent   ಕರಾವಳಿ

ನಗರದ ಸರ್ಕಿಟ್ ಹೌಸ್ - ಬಿಜೈ ರಸ್ತೆಗೆ ಮಾಜಿ ರಕ್ಷಣಾ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಮಂಗಳೂರು, ಮಾ.12: ನಗರದ ಸರ್ಕಿಟ್ ಹೌಸ್ - ಬಿಜೈ ರಸ್ತೆಗೆ ಮಾಜಿ ರಕ್ಷಣಾ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಲೋಕಸಭಾ ಚುನಾವಣೆ ಬಳಿಕ ಈ ರಸ್ತೆಯ ಹೆಸರು ಅಧಿಕೃತ ನಾಮಫಲಕದೊಂದಿಗೆ ಹಾಕಲಾಗುವುದು ಎಂದು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಬಿಜೈ ಪರಿಸರದಲ್ಲಿ ಹುಟ್ಟಿದ ಜಾರ್ಜ್ ಫೆರ್ನಾಂಡಿಸ್ ಒಂಬತ್ತು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಕಾರ್ಮಿಕ ನಾಯಕರಾಗಿದ್ದಾರೆ. ಕೊಂಕಣ್ ರೈಲ್ವೆ ಹರಿಕಾರರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗೆ ದೇಶದ ಪ್ರಧಾನಿ ಮೋದಿ ಪದ್ಮವಿಭೂಷಣ ನೀಡಿದ್ದಾರೆ. ಮಂಗಳೂರು ಮನಪಾ ಸಾಮಾನ್ಯ ಸಭೆಯಲ್ಲಿ ಜಯಾನಂದ್ ಅಂಚನ್ ಅವರ ಅವಧಿಯಲ್ಲಿ ಈ ಬಗ್ಗೆ ಮನವಿ ಮಾಡಲಾಗಿತ್ತು. ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್ ಮೋರಾಸ್ ಅವರು ಕೂಡ ರಸ್ತೆಗೆ ಮರು ನಾಮಕರಣ ಮಾಡುವಂತೆ ಮನವಿ ಮಾಡಿದ್ದರು. ರಸ್ತೆ ಮರು ನಾಮಕರಣದ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಧನ್ಯವಾದಗಳು ಎಂದು ಹೇಳಿದರು. 

ಮಂಗಳೂರಿನ ನಾರಾಯಣ ಗುರು ವೃತ್ತ ನಿರ್ವಹಣೆಯನ್ನು ಮೂಡಾದಿಂದ ಮಾಡಲಾಗುತ್ತಿದೆ. ಈ ವೃತ್ತದ ನಿರ್ವಹಣೆಯನ್ನು ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿ ಕೇಳಿದ್ದು ಈ ಬಗ್ಗೆ ಪರೀಶಿಲನೆ ನಡೆಸ್ತೇವೆ ಎಂದರು.

ನೀರಿನ ಕೊರತೆ ವಿಚಾರ ಪ್ರಸ್ತಾಪಿಸಿದ ಮೇಯರ್, ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ಇಲ್ಲ. ಬೇಸಿಗೆಗೂ ನೀರಿನ‌ ಸಮಸ್ಯೆ ಆಗುವುದಿಲ್ಲ. ಈಗಾಗಲೇ ಜಿಲ್ಲಾಧಿಕಾರಿ ಕೈಗಾರಿಕೆಗಳಿಗೆ ನೀರಿನ‌ ಮಿತ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ನೀರನ್ನು ಮಿತ ಬಳಕೆ ಮಾಡಬೇಕು ಎಂದು ಹೇಳಿದರು.

Mayor Sudheer Shetty Kannur announced on March 12 that the road stretch from Circuit House to Bejai Circle will be renamed after the late Padma Bhushan recipient, George Fernandes.