Puttur Arun Kumar Puthila, Joins BJP; ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿದ್ದ ಅರುಣ್ ಪುತ್ತಿಲ ಕೊನೆಗೂ ಬಿಜೆಪಿ ಸೇರ್ಪಡೆ, ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಮರಳಿ ಗೂಡಿಗೆ, ನಳಿನ್ ಮರೆಗೆ ಸರಿದ ಬೆನ್ನಲ್ಲೇ ಕೈಹಿಡಿದ ಪುತ್ತಿಲ ಪರಿವಾರ !

14-03-24 10:27 pm       Mangaluru Correspondent   ಕರಾವಳಿ

ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗಿ ಕಾಡಿದ್ದ ಅರುಣ್ ಪುತ್ತಿಲ ಕೊನೆಗೂ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಮ್ಮುಖದಲ್ಲಿ ಅರುಣ್ ಪುತ್ತಿಲ ಮತ್ತು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಬಿಜೆಪಿ ಸೇರಿದ್ದಾರೆ.

ಮಂಗಳೂರು, ಮಾ.14: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅರುಣ್ ಪುತ್ತಿಲ ಬಿಜೆಪಿ ಸೇರಿರುವುದು ಮಹತ್ವದ ಅಂಶ. ಲೋಕಸಭೆ ಟಿಕೆಟ್ ನಳಿನ್ ಕುಮಾರ್ ಕೈತಪ್ಪಿದ ಬೆನ್ನಲ್ಲೇ ಬಿಜೆಪಿ ಸೇರುವ ಮೂಲಕ ಕಾರ್ಯಕರ್ತರಿಗೆ ನೇರ ಸಂದೇಶ ನೀಡಿದ್ದಾರೆ. ಇತ್ತೀಚೆಗಷ್ಟೇ ಪುತ್ತಿಲ ಪರಿವಾರದ ಮುಖಂಡರು ಸುದ್ದಿಗೋಷ್ಟಿ ಕರೆದು ಲೋಕಸಭೆಗೆ ಅರುಣ್ ಪುತ್ತಿಲ ಬಂಡಾಯ ಸ್ಪರ್ಧಿಸುವುದು ಖಚಿತ ಎಂದಿದ್ದರು. ಆದರೆ, ಇದೀಗ ಲೋಕಸಭೆ ಟಿಕೆಟ್ ಯುವ ನಾಯಕ ಬೃಜೇಶ್ ಚೌಟಗೆ ಘೋಷಣೆಯಾದ ಬೆನ್ನಲ್ಲೇ ಅರುಣ್ ಪುತ್ತಿಲ ಬಿಜೆಪಿ ಸೇರಿದ್ದು, ತಮ್ಮದು ಬಂಡಾಯ ಇಲ್ಲ ಎನ್ನುವುದನ್ನು ಸಾರಿದ್ದಾರೆ. ಆಮೂಲಕ ತಮ್ಮ ವಿರೋಧ ಇದ್ದುದು ನಳಿನ್ ಕುಮಾರ್ ಕುರಿತು ಹೊರತು, ಪಕ್ಷದ ವಿಚಾರಕ್ಕಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲರಿಗೆ ಟಿಕೆಟ್ ನೀಡದೆ ರೇಸಿನಲ್ಲೇ ಇಲ್ಲದ ಸುಳ್ಯದ ಮಹಿಳೆಯೊಬ್ಬರಿಗೆ ಸ್ಥಾನ ನೀಡಲಾಗಿತ್ತು. ಆಗ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ನಿರ್ಧಾರ ಅದೆಂದು ಸಿಟ್ಟಿಗೆದ್ದಿದ್ದ ಅರುಣ್ ಪುತ್ತಿಲ ಬಂಡಾಯ ಸಾರಿದ್ದರು. ತನ್ನ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರನ್ನೇ ಜೊತೆಗೂಡಿಸಿ ಬಂಡಾಯ ಸ್ಪರ್ಧಿಸಿದ್ದಲ್ಲದೆ, ಪುತ್ತೂರಿನಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಈ ಫಲಿತಾಂಶ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಊರಲ್ಲೇ ನಡೆದಿದ್ದು ರಾಜ್ಯ ಮತ್ತು ರಾಷ್ಟ್ರದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಇದೇ ಕಾರಣಕ್ಕೆ ಆನಂತರ ಅರುಣ್ ಪುತ್ತಿಲರನ್ನು ಪಕ್ಷಕ್ಕೆ ಸೇರಿಸಲು ನಳಿನ್ ಕುಮಾರ್ ಆದಿಯಾಗಿ ಬಹಳಷ್ಟು ಮಂದಿ ಪ್ರಯತ್ನ ನಡೆಸಿದ್ದರು. ಪ್ರತಿ ಬಾರಿ ಮಾತುಕತೆಯಾದಾಗಲೂ ಒಂದಿಲ್ಲೊಂದು ಕಾರಣಕ್ಕೆ ಪ್ರಯತ್ನ ಕೈಗೂಡಿರಲಿಲ್ಲ.

ಒಂದು ತಿಂಗಳ ಹಿಂದೆ ಬಿಜೆಪಿಗೆ ಷರತ್ತನ್ನು ಒಡ್ಡಿದ್ದ ಅರುಣ್ ಪುತ್ತಿಲ ಮತ್ತು ಬೆಂಬಲಿಗರು ಪುತ್ತೂರು ಮಂಡಲಾಧ್ಯಕ್ಷ ಸ್ಥಾನದ ಬೇಡಿಕೆ ಇರಿಸಿದ್ದರು. ನಿಶ್ಚಿತ ಹುದ್ದೆ ನೀಡಿದರೆ ಮಾತ್ರ ಬಿಜೆಪಿ ಸೇರುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅದಕ್ಕೆ ಬಿಜೆಪಿ ನಾಯಕರು ಬೇಷರತ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಹೇಳಿದ್ದರಲ್ಲದೆ, ರಾಷ್ಟ್ರೀಯ ಪಕ್ಷಕ್ಕೆ ಷರತ್ತು ಮುಂದಿಡುವುದು ಸರಿಯಲ್ಲ ಎಂದಿದ್ದರು. ಇದೀಗ ಬೇಷರತ್ ಪಕ್ಷ ಸೇರ್ಪಡೆಯಾಗಿದ್ದು, ಪುತ್ತೂರು ಮಂಡಲಾಧ್ಯಕ್ಷ ಜೊತೆಗೆ ಈ ಬಾರಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಪ್ರಬಲ ಭಾಷಣಕಾರ ಪುತ್ತಿಲರನ್ನು ಪ್ರಮುಖವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ರಾಜ್ಯ ಕಾರ್ಯದರ್ಶಿ ಸುನಿಲ್ ಕುಮಾರ್, ಪುತ್ತೂರಿನ ಪಕ್ಷದ ಪ್ರಮುಖರಾದ ಜಗನ್ನಿವಾಸ ರಾವ್, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ಇದ್ದರು.

Puttur Arun Kumar Puthila, who had left the BJP and stood independent, has now rejoined the BJP party for the upcoming Loksabha elections. The BJP said that the door is open for Sangh Parivar activist Arun Kumar Puthila to join the party without imposing any conditions. As a rebel (independent) candidate in the last Assembly elections from Puttur, Mr. Puthila came in second, relegating the BJP to third.