Mangalore University, Harish Acharya, Election : ಚುನಾವಣಾ ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆ ; ಪರೀಕ್ಷೆ, ವಯೋ ನಿವೃತ್ತಿ, ಅನಾರೋಗ್ಯ ಪರಿಗಣಿಸುವಂತೆ ಹರೀಶ್ ಆಚಾರ್ಯ ಮನವಿ 

18-03-24 05:39 pm       Mangalore Correspondent   ಕರಾವಳಿ

ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವುದು ಪ್ರತಿ ನಾಗರಿಕನ ಆದ್ಯ ಕರ್ತವ್ಯವಾಗಿದೆ.

ಮಂಗಳೂರು, ಮಾ.18: ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವುದು ಪ್ರತಿ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಆದರೆ ಚುನಾವಣಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗವು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷಾ ಕಾರ್ಯ, ಶಿಕ್ಷಕರ ವಯೋನಿವೃತ್ತಿ, ಅನಾರೋಗ್ಯ ಇನ್ನಿತರ ಅಗತ್ಯ ಅಂಶಗಳನ್ನು ಆಧರಿಸಿಕೊಂಡು ನಿಯೋಜಿಸಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಎಸ್.ಆರ್ ಹರೀಶ್ ಆಚಾರ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 

ಶೈಕ್ಷಣಿಕ ವರ್ಷದ ಅಂತ್ಯದ ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು   ಪರೀಕ್ಷಾ ಕಾರ್ಯ ಹಾಗೂ ಅದರ ಮೌಲ್ಯಮಾಪನಾ ಕಾರ್ಯದ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಳ್ಳುವುದು ಅತ್ಯಂತ ಅವಶ್ಯಕವೂ ಆಗಿದೆ. ಆದರೆ ಶಿಕ್ಷಕರು ವಿಚಕ್ಷಣ ದಳ, ಗಡಿ ತಪಾಸಣೆ ಇನ್ನಿತರ ಚುನಾವಣಾ ಕಾರ್ಯಗಳನ್ನು ನಿರ್ವಹಿಸಬೇಕಾದ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದುದರಿಂದ ಶಿಕ್ಷಕರನ್ನು ನಿಯೋಜಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗವು ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಿ ನಿಯೋಜಿಸಬೇಕೆಂದು ಅವರು ಮನವಿ ಮಾಡಿದ್ದಾರೆ. 

ಯಾವುದೇ ಸಿಬ್ಬಂದಿಯನ್ನು ನಿವೃತ್ತಿಗೆ ಆರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ಸೇವಾವಧಿ ಇರುವವರನ್ನು ನಿಯೋಜಿಸಬಾರದೆಂದು ಚುನಾವಣಾ ಆಯೋಗದ ನಿಯಮವಿದೆ. ಆದರೆ ಅನೇಕ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹಾಗೆಯೇ ದೈಹಿಕ ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರನ್ನು ಹಾಗೂ ಗರ್ಭಿಣಿ ಮಹಿಳಾ ಶಿಕ್ಷಕರನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ಚುನಾವಣಾ ಕರ್ತವ್ಯಗಳಿಂದ ದೂರವಿಡಬೇಕೆಂದು ಒತ್ತಾಯಿಸಿ ಅವರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.

Mangalore Assignment of teachers for election duty; Harish Acharya appeals to consider examination, age retirement, illness.