Mangalore Vinayak Baliga murder: ಮುಸ್ಲಿಂ ಎಂದು ತೋರಿಸಿ ವಿನಾಯಕ ಬಾಳಿಗಾ ಕೊಲೆ, ಆರೋಪಿಗಳಿಗೆ ಶಿಕ್ಷೆ ಖಚಿತ ; ಎಂಟನೇ ವರ್ಷದ ಸ್ಮರಣೆಯಲ್ಲಿ ಪ್ರತಿಭಟನಾ ಧರಣಿ

21-03-24 10:13 pm       Mangalore Correspondent   ಕರಾವಳಿ

ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಮುಸ್ಲಿಂ ಎಂದು ತೋರಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಕೊಲೆ ಮಾಡಿಸಲಾಗಿತ್ತು. ಬೆಳಗ್ಗೆ ಪ್ರತಿ ದಿನ ವೆಂಕಟರಮಣ ದೇವಸ್ಥಾನಕ್ಕೆ ತೆರಳುತ್ತಿದ್ದ ಬಾಳಿಗಾರನ್ನು ಮುಸ್ಲಿಂ ವ್ಯಕ್ತಿ ಈ ಮನೆಗೆ ಬರುತ್ತಿದ್ದಾನೆಂದು ತೋರಿಸಿ ಕೊಲೆ ಮಾಡಿಸಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಬಜಿಲಕೇರಿ ಹೇಳಿದ್ದಾರೆ.

ಮಂಗಳೂರು, ಮಾ.21: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಮುಸ್ಲಿಂ ಎಂದು ತೋರಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಕೊಲೆ ಮಾಡಿಸಲಾಗಿತ್ತು. ಬೆಳಗ್ಗೆ ಪ್ರತಿ ದಿನ ವೆಂಕಟರಮಣ ದೇವಸ್ಥಾನಕ್ಕೆ ತೆರಳುತ್ತಿದ್ದ ಬಾಳಿಗಾರನ್ನು ಮುಸ್ಲಿಂ ವ್ಯಕ್ತಿ ಈ ಮನೆಗೆ ಬರುತ್ತಿದ್ದಾನೆಂದು ತೋರಿಸಿ ಕೊಲೆ ಮಾಡಿಸಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಬಜಿಲಕೇರಿ ಹೇಳಿದ್ದಾರೆ.

ವಿನಾಯಕ ಬಾಳಿಗಾ ಕೊಲೆಯಾಗಿ ಮಾರ್ಚ್ 21ಕ್ಕೆ ಎಂಟು ವರ್ಷ ಸಂದಿದ್ದು, ವೆಂಕಟರಮಣ ದೇವಸ್ಥಾನದಿಂದ ಕೊಡಿಯಾಲ್ ಬೈಲಿನ ಮನೆಯ ವರೆಗೆ ಸಮಾನ ಮನಸ್ಕರು ಸೇರಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆಯಲ್ಲಿ ಪ್ರತಿ ವರ್ಷದಂತೆ ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಬಾಳಿಗಾ ಮನೆಯವರು ಪಾಲ್ಗೊಂಡಿದ್ದರು. ಪ್ರತಿಭಟನೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವೇಳೆ ಸುನಿಲ್ ಬಜಿಲಕೇರಿ ಈ ಮಾತುಗಳನ್ನು ಹೇಳಿದ್ದಾರೆ. ಚಂದ್ರಶೇಖರ್ ಅವರಂತಹ ದಕ್ಷ ಕಮಿಷನರ್ ಇದ್ದುದರಿಂದ ಪ್ರಕರಣದಲ್ಲಿ ನೈಜ ಆರೋಪಿಗಳು ಬಂಧನವಾಗಿದ್ದರು. ಈಗ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯಾಗುವುದು ಖಚಿತ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಮುನೀರ್ ಕಾಟಿಪಳ್ಳ, ಪ್ರಕರಣವನ್ನು ಮಂಗಳೂರಿನ ಕೋರ್ಟಿನಲ್ಲಿ ವಿಚಾರಣೆ ನಡೆಸಿದರೆ ನ್ಯಾಯ ಸಿಗಲಾರದು ಎಂದು ಮನೆಯವರು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಮನವಿಯಂತೆ ಹೈಕೋರ್ಟ್ ಬೆಂಗಳೂರಿನ ಕೋರ್ಟಿಗೆ ಸ್ಥಳಾಂತರ ಮಾಡಿದೆ. ನಾವು ಈ ಕುಟುಂಬದ ಜೊತೆಗೆ ಅಂದಿನಿಂದಲೂ ಇದ್ದೇವೆ. ನ್ಯಾಯ ಸಿಗುವ ವರೆಗೂ ಇರುತ್ತೇವೆ ಎಂದರು.

ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಹಿರಿಯ ವಿಚಾರವಾದಿ ನರೇಂದ್ರ ನಾಯಕ್, ವಿನಾಯಕ ಬಾಳಿಗಾ ಒಬ್ಬ ಬಿಜೆಪಿ ಕಾರ್ಯಕರ್ತರಾಗಿದ್ದವರು. ದೇವಸ್ಥಾನದ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕಾಗಿ ಕೊಲೆ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತ ಕೊಲೆಯಾದರೂ ಅಂದಿನ ಸಂಸದ ಈ ಮನೆಗೆ ಭೇಟಿ ಕೊಟ್ಟಿರಲಿಲ್ಲ. ಅವರೀಗ ಮಾಜಿಯಾಗುತ್ತಿದ್ದಾರೆ, ಮುಂದೆ ಸಂಸದರಾಗುವವರಿಗೂ ಪ್ರಶ್ನೆ ಮಾಡುತ್ತೇನೆ. ನಿಷ್ಠಾವಂತ ಕಾರ್ಯಕರ್ತನ ಮನೆಗೆ ಬರುತ್ತೀರಾ ಎಂದು ಕೇಳುತ್ತೇನೆ. ಹಾಗೆಯೇ ಕಾಂಗ್ರೆಸಿನವರಿಗೂ ಕೇಳುತ್ತೇನೆ. ಅಂದು ಕಾಂಗ್ರೆಸ್ ಶಾಸಕ ಲೋಬೊ ಇದ್ದರು. ಮನೆಗೆ ಬಂದರೂ ಮೌನವಾಗಿಯೇ ಇದ್ದರು. ಈಗಲೂ ಮೌನದಲ್ಲೇ ಇದ್ದಾರೆ ಎಂದು ಹೇಳಿದರು.

ಎಂಜಿ ಹೆಗಡೆ, ದೇವದಾಸ್, ಮುನೀರ್ ಕಾಟಿಪಳ್ಳ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ವಿನಾಯಕ ಬಾಳಿಗಾ ಸೋದರಿಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ, ಮಾಜಿ ಉಪ ಮೇಯರ್ ಮಹಮ್ಮದ್ ಕುಂಜತ್ ಬೈಲ್, ಮಾಜಿ ಕಾರ್ಪೊರೇಟರ್ ಪ್ರಕಾಶ್ ಸಾಲ್ಯಾನ್, ಅಪ್ಪಿ, ದಯಾನಂದ ಶೆಟ್ಟಿ, ಮಂಜುಳಾ ನಾಯಕ್, ಬಿಕೆ ಇಮ್ತಿಯಾಜ್, ರಘು ಎಕ್ಕಾರ್, ಸಂತೋಷ್ ಬಜಾಲ್ ಮತ್ತಿತರರಿದ್ದರು.

The Deshapremi Sanghatanegala Okkutta took out a procession from Sri Venkataramana Temple on the car street to RTI activist Late Vinayak Baliga's residence at Kalakunj on Thursday, March 21 to mark his eighth death anniversary.