Mangalore BJP news, Congress; ಎಸ್ಸಿ ಎಸ್ಟಿ ಜನರ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ದುಡ್ಡು ಗ್ಯಾರಂಟಿಗೆ ವಿನಿಯೋಗ ; ಎಸ್ಸಿ ಮೋರ್ಚಾ ಮುಖಂಡ ಶಿವಶಂಕರ್ ಆಕ್ಷೇಪ 

25-03-24 07:51 pm       Mangaluru Correspondent   ಕರಾವಳಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗಾಗಿ ಇರಿಸಿದ್ದ 11.5 ಸಾವಿರ ಕೋಟಿ ದುಡ್ಡನ್ನು ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭಾಗ್ಯಗಳಿಗೆ ವಿನಿಯೋಗ ಮಾಡುತ್ತಿರುವುದು ವಿಪರ್ಯಾಸದ ಸಂಗತಿ....

ಮಂಗಳೂರು, ಮಾ.25: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಅಭಿವೃದ್ಧಿಗಾಗಿ ಇರಿಸಿದ್ದ 11.5 ಸಾವಿರ ಕೋಟಿ ದುಡ್ಡನ್ನು ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭಾಗ್ಯಗಳಿಗೆ ವಿನಿಯೋಗ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಎಸ್ಸಿ, ಎಸ್ಟಿ ಜನರ, ಕಾಲನಿ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಇವರು ಗ್ಯಾರಂಟಿಗೆ ಹಂಚಿದ್ದು ತಪ್ಪು ನಡೆಯಾಗಿದೆ ಎಂದು ಎಸ್ಸಿ ಮೋರ್ಚಾ ರಾಜ್ಯ ವಕ್ತಾರ ಡಾ.ಶಿವಶಂಕರ್ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿ ಮತ್ತು ಕಾಂಗ್ರೆಸಿಗೆ ಏನು ವ್ಯತ್ಯಾಸ ಅಂದರೆ ನಮಗೆ ಈ ಬಾರಿಯ ಲೋಕಸಭೆ ಅಭ್ಯರ್ಥಿಗಳನ್ನು ನೋಡಿದರೆ ತಿಳಿಯುತ್ತದೆ. ಬಿಜೆಪಿಯಿಂದ ಬಡ, ಸಜ್ಜನ ವ್ಯಕ್ತಿಗಳಿಗೆ ಟಿಕೆಟ್ ಕೊಟ್ಟಿದ್ದರೆ ಕಾಂಗ್ರೆಸ್ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಕೊಟ್ಟಿದೆ. ಗ್ರಾಪಂನಿಂದ ಹಿಡಿದು ತಾಪಂ ಸದಸ್ಯ, ಎರಡು ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ, ವಿಧಾನ ಪರಿಷತ್ ಸದಸ್ಯರಾಗಿ ವಿಪಕ್ಷ ನಾಯಕನಾಗಿರುವ ಸಾಮಾನ್ಯ ವ್ಯಕ್ತಿಯೊಬ್ಬರಿಗೂ ಸಂಸತ್ ಟಿಕೆಟ್ ಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇಶದ ಗಡಿ ಕಾಯುತ್ತಿದ್ದ ಸಾಮಾನ್ಯ ಯೋಧನಿಗೆ ಟಿಕೆಟ್ ಕೊಡುವ ಮೂಲಕ ಜನಸೇವೆಗೆ ಅವಕಾಶ ನೀಡಿದೆ. 

ಆದರೆ ಕಾಂಗ್ರೆಸಿನಲ್ಲಿ ಮಂತ್ರಿಗಳನ್ನು ನಿಲ್ಲಿಸಿದರೂ ಗೆಲ್ಲುವುದಿಲ್ಲ ಎಂದು ತಿಳಿದಿದ್ದರೂ ಮಂತ್ರಿಗಳು ತಮ್ಮ ಮಕ್ಕಳನ್ನು ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಲು ಈ ಲೋಕಸಭೆ ಚುನಾವಣೆಯನ್ನು ಬಳಸಿದ್ದಾರೆ. ಯಾವುದೇ ಸಾಮಾನ್ಯ ಕಾರ್ಯಕರ್ತರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ‌ ಎಂದು ಹೇಳಿದರು. 

ಮೋದಿಯವರು ಪ್ರಧಾನಿಯಾದ ಬಳಿಕ ಭಾರತಕ್ಕೆ ಸಿಗುತ್ತಿರುವ ಮರ್ಯಾದೆ ಹೆಚ್ಚಿದೆ. ಮೋದಿ ಜಗತ್ತಿನಲ್ಲಿ ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಪ್ರಧಾನಿ, ಅಧ್ಯಕ್ಷರು ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ. ಲಕ್ಷಾಂತರ ಜನ ಸೇರಿ ಸ್ವಾಗತಿಸುವ ಸ್ಥಿತಿ ಮೋದಿಯ ಕಾರಣಕ್ಕೆ ಆಗಿದೆ. ಚಿನ್ನ ಪಡೆದು ಸಾಲ ತರುವಂತಹ ಸ್ಥಿತಿಯಿದ್ದ ದೇಶ ಬೇರೆಯವರಿಗೆ ಸಾಲ ಕೊಡುವಷ್ಟರ ಮಟ್ಟಿಗೆ ಬೆಳೆದಿದೆ. ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆದು ನಿಂತಿದೆ. 

ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವುದಕ್ಕಾಗಿ ಉಡುಪಿ - ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಎಸ್ಸಿ ಮತಗಳು ಚದುರಿ ಹೋಗದೆ ಮೋದಿಗಾಗಿ ಓಟ್ ಹಾಕಬೇಕಿದೆ ಎಂದು ಹೇಳಿದ ಶಿವಶಂಕರ್, 370 ವಿಧಿ ರದ್ದತಿಯ ಮೊದಲು ಕಾಶ್ಮೀರದಲ್ಲಿ 500 ರೂ. ಪಡೆದು ಸೈನಿಕರಿಗೆ ಕಲ್ಲು ಹೊಡೆಯುವ ಸ್ಥಿತಿ ಇತ್ತು. ಈಗ ಕಾಶ್ಮೀರದ ಜನರೂ ಬದಲಾಗಿದ್ದಾರೆ, ನಾವು ಪ್ರವಾಸೋದ್ಯಮ, ಅಭಿವೃದ್ಧಿಯಲ್ಲಿ ಜೊತೆಯಾಗುತ್ತೇವೆ ಎಂದು ಬಯಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾಶ್ಮೀರ ಒಂದರಲ್ಲೇ 36 ಕೋಟಿ ಆದಾಯ ಬಂದಿದೆ‌‌‌. ಹತ್ತು ವರ್ಷದಲ್ಲಿ ಭಾರತ ಬದಲಾಗಿದ್ದು ಅಭಿವೃದ್ಧಿ ಪಥದಲ್ಲಿದೆ. ಭವ್ಯ ಭಾರತಕ್ಕಾಗಿ ಲೋಕಸಭೆ ಗೆಲ್ಲಿಸುವ ಬಿಜೆಪಿ ನಾಗಾಲೋಟ ಮುಂದುವರಿಯಬೇಕಿದೆ ಎಂದರು.

BJP SC Morcha leader Shivashankar in Mangalore, Slams Congress government over gaurantee