Iftar lunch Mudipu Mangalore, Video: ಮುಡಿಪು ರಸ್ತೆಯಲ್ಲೇ ಇಫ್ತಾರ್ ಹೆಸರಲ್ಲಿ ಸಹಭೋಜನ ; ಹಿಂದೂ ಜಾಗರಣ ವೇದಿಕೆಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ, ಸಹಾಯಕ ಚುನಾವಣಾಧಿಕಾರಿಗೆ ದೂರು 

31-03-24 08:23 pm       Mangalore Correspondent   ಕರಾವಳಿ

ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯು ಸಹಾಯಕ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.

ಉಳ್ಳಾಲ, ಮಾ.31: ಮುಡಿಪು ಪೇಟೆಯ ರಾಜ್ಯ ಹೆದ್ದಾರಿಯಲ್ಲೇ ವಾಹನ ಸಂಚಾರಕ್ಕೆ ತೊಡಕುಂಟು ಮಾಡಿ ಇಫ್ತಾರ್ ಕೂಟ ನಡೆಸಿದ್ದ "ಆಟೋ ರಾಜಕನ್ಮಾರ್ " ಜಿಲ್ಲಾ ಆಟೋ ಚಾಲಕರ ಸಂಘಟನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ರಾಷ್ಟ್ರೀಯವಾದಿ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯು ಸಹಾಯಕ ಚುನಾವಣಾ ಅಧಿಕಾರಿಗೆ ದೂರು ನೀಡಿದೆ.

ಮುಡಿಪು ಜಂಕ್ಷನ್ನಲ್ಲಿ ಕಳೆದ ಶುಕ್ರವಾರ ಸಂಜೆ ರಿಕ್ಷಾ ಚಾಲಕರ "ಆಟೋ ರಾಜಕನ್ಮಾರ್" ಜಿಲ್ಲಾ ಸಂಘಟನೆಯು ರಾಜ್ಯ ಹೆದ್ದಾರಿಯಲ್ಲೇ ಸೌಹಾರ್ದ ಬೃಹತ್ ಇಫ್ತಾರ್ ಕೂಟ ಆಯೋಜಿಸಿತ್ತು. ಈ ಹಿಂದೆ ಖಾಸಗಿ ಸಭಾಂಗಣದಲ್ಲಿ ನಡೆಸಲಾಗುತ್ತಿದ್ದ ಇಫ್ತಾರ್ ಕೂಟವನ್ನ ಸಾರ್ವಜನಿಕ ರಸ್ತೆಯಲ್ಲೇ ನಡೆಸಿ ವಾಹನ ಸಂಚಾರಕ್ಕೆ ತೊಡಕುಂಟು ಮಾಡಿದ್ದ "ಆಟೋ ರಾಜಕನ್ಮಾರ್" ಸಂಘಟನೆ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ರಾಷ್ಟ್ರೀಯವಾದಿ ಚಿಂತಕರು ಸಾಮಾಜಿಕ ಜಾಲತಾಣಗಳಲ್ಲಿ ಇಫ್ತಾರ್ ಕೂಟದ ವೀಡಿಯೋ ಹಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಮಧ್ಯೆ ಮುಡಿಪು ವಲಯದ ಹಿಂದೂ ಜಾಗರಣಾ ವೇದಿಕೆಯು ರಸ್ತೆ ತಡೆದು ನಡೆಸಿದ್ದ ಇಫ್ತಾರ್ ಕೂಟದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಹಾಯಕ ಚುನಾವಣಾಧಿಕಾರಿ, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ ಅವರಿಗೆ ಲಿಖಿತ ದೂರು ನೀಡಿದೆ. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಮುಡಿಪು ಜಂಕ್ಷನ್ ನಲ್ಲಿ ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ನೀಡಿ ಇಫ್ತಾರ್ ಕೂಟ ನಡೆಸಿದ್ದು ಇಫ್ತಾರ್ ಹೆಸರಲ್ಲಿ ಸಾರ್ವಜನಿಕರಿಗೆ ಸಹಭೋಜನದ ವ್ಯವಸ್ಥೆ ಮಾಡಿದ್ದಾರೆ. ಆಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹಿಂ.ಜಾ.ವೇ. ಜಿಲ್ಲಾಧ್ಯಕ್ಷರಾದ ನರಸಿಂಹ ಮಾಣಿ ಹೇಳಿದ್ದಾರೆ.

ಹಿಂ.ಜಾ.ವೇ ಮಂಗಳೂರು ಸಂಪರ್ಕ ಪ್ರಮುಖ್ ಪ್ರಶಾಂತ್ ಶೆಟ್ಟಿ ಇರಾ, ತಾಲೂಕು ಸಹ ಸಂಚಾಲಕ ಪ್ರಶಾಂತ್ ಮುಡಿಪು, ಮುಡಿಪು ವಲಯ ಸಹ ಸಂಚಾಲಕ ಗುರುಕಿರಣ್, ಉಲ್ಲಾಸ್ ಮುಡಿಪು ಜತೆಯಲ್ಲಿದ್ದರು.

Iftar lunch hoisted at Mudipu junction in Mangalore goes viral, Hindu Jagrana vedike files complaint to election commision for violating election code of conduct.