VHP Mangalore, Tirupati Laddu: ತಿರುಪತಿ ಲಡ್ಡು ಅಪವಿತ್ರ ; ದೇವರ ನೈವೇದ್ಯಕ್ಕೆ ದನದ ಕೊಬ್ಬು ಸೇರಿಸಿದ್ದು ಅಕ್ಷಮ್ಯ ಅಪರಾಧ, ಹಿಂದುಗಳ ಭಾವನೆಗೆ ಧಕ್ಕೆ, ಸಿಬಿಐ ತನಿಖೆಗೆ ಆಗ್ರಹಿಸಿ ಸೆ.30ರಂದು ಧರ್ಮಾಗ್ರಹ ಸಭೆ 

26-09-24 08:59 pm       Mangalore Correspondent   ಕರಾವಳಿ

ಕೋಟ್ಯಂತರ ಹಿಂದುಗಳು ಆರಾಧಿಸುವ ತಿರುಪತಿ ವೆಂಕಟರಮಣ ದೇವರಿಗೆ ದನದ ಕೊಬ್ಬು ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡಿನ ನೈವೇದ್ಯ ಅರ್ಪಿಸುವಂತಾಗಿದ್ದು ಅಕ್ಷಮ್ಯ ಅಪರಾಧ. ಇದಕ್ಕೆ ಯಾರೆಲ್ಲ ಕಾರಣರಾಗಿದ್ದಾರೋ ಅವರನ್ನು ಪತ್ತೆ ಮಾಡಬೇಕು.

ಮಂಗಳೂರು, ಸೆ.26 : ಕೋಟ್ಯಂತರ ಹಿಂದುಗಳು ಆರಾಧಿಸುವ ತಿರುಪತಿ ವೆಂಕಟರಮಣ ದೇವರಿಗೆ ದನದ ಕೊಬ್ಬು ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡಿನ ನೈವೇದ್ಯ ಅರ್ಪಿಸುವಂತಾಗಿದ್ದು ಅಕ್ಷಮ್ಯ ಅಪರಾಧ. ಇದಕ್ಕೆ ಯಾರೆಲ್ಲ ಕಾರಣರಾಗಿದ್ದಾರೋ ಅವರನ್ನು ಪತ್ತೆ ಮಾಡಬೇಕು. ಉದ್ದೇಶಪೂರ್ವಕ ಕೃತ್ಯ ಎಸಗಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದ್ದು ಇದೇ ಘಟನೆಯನ್ನು ಖಂಡಿಸಿ ಸಾಧು ಸಂತರ ನೇತೃತ್ವದಲ್ಲಿ ಸೆ.30ರಂದು ಮಂಗಳೂರಿನಲ್ಲಿ ಧರ್ಮಾಗ್ರಹ ಸಭೆ ನಡೆಸಲು ನಿರ್ಧರಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಮಂಗಳೂರು ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ದೇವರಿಗೆ ದನದ ಕೊಬ್ಬು ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡು ಅರ್ಪಿಸಿರುವುದು ಅಕ್ಷಮ್ಯ ಅಪರಾಧ. ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆಂಧ್ರಪ್ರದೇಶ ಸರ್ಕಾರದ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸೆ.30ರಂದು ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಗ್ಗೆ 8ರಿಂದ 12.30ರ ವರೆಗೆ ಹಿಂದು ಮುಖಂಡರು, ಸಾಧು ಸಂತರನ್ನು ಒಳಗೊಂಡಂತೆ ಧರ್ಮಾಗ್ರಹ ಸಭೆ ನಡೆಸಲಾಗುವುದು. ಸಮಸ್ತ ಹಿಂದೂ ಬಾಂಧವರು ಈ ಸಭೆಯಲ್ಲಿ ಭಾಗವಹಿಸಬೇಕಾಗಿದೆ ಎಂದು ಹೇಳಿದರು. 

ದೇವರಿಗೆ ಅಪವಿತ್ರ ನೈವೇದ್ಯ ಅರ್ಪಿಸಿರುವುದು ದೇಶ- ವಿದೇಶದ ಹಿಂದುಗಳ ಪಾಲಿಗೆ ಅತ್ಯಂತ ನೋವಿನ ವಿಚಾರ. ಇದಕ್ಕೆ ಕಾರಣವಾದ ಆಂಧ್ರ ಪ್ರದೇಶ ಸರ್ಕಾರ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಆದ್ದರಿಂದ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದವರು ಆಗ್ರಹಿಸಿದರು.

ಪತ್ರ ಅಭಿಯಾನ ಕೈಗೊಳ್ಳಿ 

ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಅಭಿಯಾನವನ್ನು ವಿಹಿಂಪ ಆರಂಭಿಸುತ್ತಿದ್ದು, ಸಮಸ್ತ ಹಿಂದು ಬಾಂಧವರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾದುದನ್ನು ಪತ್ರದ ಮೂಲಕ ಉಲ್ಲೇಖಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು. ವಿಹಿಂಪ ಜೊತೆಗೆ ವೈಯಕ್ತಿಕ ನೆಲೆಯಲ್ಲೂ ಸಾರ್ವಜನಿಕರು ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹ ಮಾಡಬೇಕೆಂದು ಶಿವಾನಂದ ಮೆಂಡನ್ ಹೇಳಿದರು. 

ದೇವಸ್ಥಾನಗಳು ಸರ್ಕಾರ ವಶದಿಂದ ಹೊರಬರಲಿ 

ಧರ್ಮಾಗ್ರಹ ಸಭೆಯಲ್ಲಿ ತಿರುಪತಿ ಕ್ಷೇತ್ರ ಸೇರಿದಂತೆ ದೇಶದ ಎಲ್ಲಾ ಹಿಂದು ದೇವಸ್ಥಾನಗಳನ್ನು ಸರ್ಕಾರದ ವಶದಿಂದ ಹಿಂಪಡೆಯುವ ಬಗ್ಗೆಯೂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದವರು ಹೇಳಿದರು. ತಿರುಪತಿ ಶ್ರೀ ವೆಂಕಟರಮಣ ದೇವರ ಲಡ್ಡು ಪ್ರಸಾದವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಸ್ವೀಕರಿಸುವ ಪ್ರಸಾದದಲ್ಲಿ ದನದ ಕೊಬ್ಬನ್ನು ಮಿಶ್ರಣ ಮಾಡಿರುವುದರ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಎಲ್ಲಾ ದೇವಸ್ಥಾನ, ಮಠ ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಬೇಕು. ಅಲ್ಲದೆ ಧಾರ್ಮಿಕ ಕೇಂದ್ರಗಳು ಸರ್ಕಾರದ ಆಡಳಿತದಿಂದ ಮುಕ್ತವಾಗಲು ಹಿಂದು ಬಾಂಧವರು ಕೂಡ ಪ್ರಾರ್ಥನೆ ನಡೆಸಬೇಕು ಎಂದು ಶಿವಾನಂದ ಮೆಂಡನ್ ಕರೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಹರೀಶ್ ಕುಮಾರ್ ಶೇಟ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಉಪಸ್ಥಿತರಿದ್ದರು.

Mangalore VHP demands CBI probe into Tirupati laddu adulteration. The Vishwa Hindu Parishad (VHP) has demanded that the government order a CBI probe into the allegations of use of animal fat in Tirupati laddus.