Mangalore, Deralakatte: ದೇರಳಕಟ್ಟೆಯಲ್ಲಿ ಫುಟ್ ಪಾತ್ ಅತಿಕ್ರಮಿಸಿದರೂ ನಿರ್ಲಕ್ಷ್ಯ ! ಮರಳು ಕಳ್ಳರಿಗೆ, ದೊಡ್ಡವರಿಗೆ ಮಾತ್ರ ವಿಶೇಷ ರಿಯಾಯ್ತಿ, ಪೊಲೀಸರ ಟಾರ್ಗೆಟ್ 40 ಟಾಸ್ಕಿಗೆ ಬಡಪಾಯಿಗಳಷ್ಟೇ ಬಲಿಪಶು ! 

29-09-24 06:56 pm       Mangalore Correspondent   ಕರಾವಳಿ

ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜಿನ ಮುಂಭಾಗದ ರಾಜ್ಯ ಹೆದ್ದಾರಿ ಬದಿಯ ಫುಟ್ ಪಾತ್ ಅತಿಕ್ರಮಿಸಿ ರಾಶಿಗಟ್ಟಲೆ ವಾಹನಗಳನ್ನ ಪಾರ್ಕ್ ಮಾಡಲಾಗುತ್ತಿದ್ದು ಪಾದಚಾರಿಗಳು ನಡೆದಾಡುವುದಕ್ಕೂ ಕಷ್ಟಕರ ಸ್ಥಿತಿಯಾಗಿದೆ.

ಉಳ್ಳಾಲ, ಸೆ.29: ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜಿನ ಮುಂಭಾಗದ ರಾಜ್ಯ ಹೆದ್ದಾರಿ ಬದಿಯ ಫುಟ್ ಪಾತ್ ಅತಿಕ್ರಮಿಸಿ ರಾಶಿಗಟ್ಟಲೆ ವಾಹನಗಳನ್ನ ಪಾರ್ಕ್ ಮಾಡಲಾಗುತ್ತಿದ್ದು ಪಾದಚಾರಿಗಳು ನಡೆದಾಡುವುದಕ್ಕೂ ಕಷ್ಟಕರ ಸ್ಥಿತಿಯಾಗಿದೆ. ದಿನದಲ್ಲಿ 40‌ ಕೇಸುಗಳ ಟಾಸ್ಕ್ ಪೂರ್ತಿಗೊಳಿಸಲು ಬಡ ವಾಹನ ಸವಾರರಿಗೆ ನಿತ್ಯವೂ ಕೇಸು ಜಡಿದು ದಂಡ ಪೀಕಿಸುತ್ತಿರುವ ಟ್ರಾಫಿಕ್ ಪೊಲೀಸರು ಕೆಲವು ಪ್ರತಿಷ್ಠಿತ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳು, ಮರಳು ಸಾಗಾಟದ ಲಾರಿಗಳಿಗಾಗಿ ತಮ್ಮ ಕಾನೂನು ಕ್ರಮಗಳನ್ನು ಸಂಪೂರ್ಣ ಸಡಿಲಿಸಿ ಬಿಟ್ಟಿದ್ದಾರೆ.

ಯೆನಪೋಯ ಮೆಡಿಕಲ್ ಕಾಲೇಜಿನ ಮುಂಭಾಗದ ಫುಟ್ ಪಾತಲ್ಲಿ ದಿನ ನಿತ್ಯವೂ 500ಕ್ಕೂ ಹೆಚ್ಚಿನ ದ್ವಿಚಕ್ರ ಹಾಗೂ ಕಾರುಗಳನ್ನ ರಾಜಾರೋಷವಾಗಿ ಪಾರ್ಕ್ ಮಾಡಲಾಗುತ್ತಿದೆ. ಇದರಿಂದಾಗಿ ಪಾದಚಾರಿಗಳಿಗೆ ನಡೆದಾಡಲೂ ಕಷ್ಟಕರವಾಗಿದ್ದು ಫುಟ್ ಪಾತ್ ಇಲ್ಲದೆ ಮುಖ್ಯ ರಸ್ತೆಯ ಮೇಲಿಂದಲೇ ಜನರು ಹಾದು ಹೋಗುತ್ತಿದ್ದಾರೆ. ಇಲ್ಲಿ ನಿತ್ಯವೂ ಪಾರ್ಕ್ ಮಾಡಲಾಗುತ್ತಿರುವ ವಾಹನಗಳು ಯಾವ ಸಂಸ್ಥೆಗೆ ಸೇರಿದ್ದು ಎಂಬುದು ಟ್ರಾಫಿಕ್ ಪೊಲೀಸರಿಗೂ ತಿಳಿದಿರುವ ವಿಚಾರ. ಹಾಗಾಗಿಯೇ ಪೊಲೀಸರು ಪ್ರಭಾವಿಗಳ ಎದುರು ಮಂಡಿಯೂರಿ ಕುಳಿತಿದ್ದಾರೆ. 

ಟ್ರಾಫಿಕ್ ಪೊಲೀಸರು ಯೆನೆಪೋಯ ಆಸ್ಪತ್ರೆ ಮುಂಭಾಗದಲ್ಲಿ ನಿತ್ಯವೂ ರಸ್ತೆಗೆ ಅಡ್ಡಲಾಗಿ ನಿಂತು ದ್ವಿಚಕ್ರ ವಾಹನ ಸವಾರರು, ಖಾಸಗಿ ಬಸ್ಸು ಸಿಬ್ಬಂದಿಗಳು, ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ನಿಂತಿರುವ ಲೈನ್ ಸೇಲ್ ವಾಹನಗಳ ಚಾಲಕರನ್ನು ಜಾಡಿಸಿ ದಂಡ ಕಕ್ಕಿಸುತ್ತಾರೆ. ಪಕ್ಕದಲ್ಲೇ ಉಳ್ಳವರು ರಸ್ತೆ ಬದಿಯಲ್ಲೇ ವಾಹನಗಳನ್ನ ಪಾರ್ಕಿಂಗ್ ಮಾಡುತ್ತಿದ್ದು ಅದರ ವಿರುದ್ಧ ಪೊಲೀಸರು ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಇದಲ್ಲದೆ ಹಗಲಿರುಳು ನಂಬರ್ ಪ್ಲೇಟ್ ಇಲ್ಲದೆ ಭುಸುಗುಡುತ್ತ ಮರಳು ಸಾಗಾಟ ನಡೆಸುವ ಲಾರಿಗಳಿಗೂ ಪೊಲೀಸರು ರಾಜಾತಿಥ್ಯ ನೀಡಿದಂತಿದೆ. 

ಬರಗೆಟ್ಟು ಹೋದ ಹೆದ್ದಾರಿಗಳಲ್ಲಿ ತೇಪೆ ಕಾಮಗಾರಿಗಳಾಗುತ್ತಿದ್ದರೆ ಟ್ರಾಫಿಕ್ ಪೊಲೀಸರು ಅಲ್ಲೇ ಬಿಡಾರ ಹೂಡಿ ವಾಹನ ತಪಾಸಣೆ ಮಾಡುವುದನ್ನ ನಿತ್ಯವೂ ಕಾಣಬಹುದಾಗಿದೆ. ಯೆನಪೋಯ ಮುಂಭಾಗದ ಅನಧಿಕೃತ ಪಾರ್ಕಿಂಗನ್ನ ಪೊಲೀಸರು ಶೀಘ್ರವೇ ತೆರವುಗೊಳಿಸಿ ಕಾನೂನು ಎಲ್ಲರಿಗೂ ಒಂದೇ‌ ರೀತಿ  ಅನ್ವಯ ಎಂಬುದನ್ನ ತೋರಿಸಿ ಕೊಡಬೇಕಿದೆ. 

ಯೆನಪೋಯ ಮೆಡಿಕಲ್ ಕಾಲೇಜಿನ ಎದುರಿನ ಪಾರ್ಕಿಂಗ್ ವಿಚಾರವನ್ನು ಈ ಹಿಂದೆ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಪಸ್ತಾಪಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಟಾರ್ಗೆಟ್ 40 ನೆಪದಲ್ಲಿ ಪೊಲೀಸರು ಬಡವರನ್ನ ಹುಲಿ ಬೇಟೆಯಾಡಿದ ಹಾಗೆ ರಸ್ತೆಯಲ್ಲಿ ಅಡ್ಡ ಹಾಕಿ ಹಗಲು ದರೋಡೆ ನಡೆಸುತ್ತಿದ್ದಾರೆಯೇ ಹೊರತು ಸಂಚಾರಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸದುದ್ಧೇಶ ಅವರಿಗಿಲ್ಲ. ಮರಳು ಸಾಗಾಟದ ಲಾರಿಗಳು ರಾಜಾರೋಷವಾಗಿ ಅಬ್ಬರಿಸುತ್ತ ಸಾಗುತ್ತವೆ. ಉಲ್ಲವರಿಗೊಂದು, ಇಲ್ಲದವರಿಗೆ ಮತ್ತೊಂದೆನ್ನುವ ಪೊಲೀಸರ ಇಬ್ಬಗೆ ನೀತಿ ವಿರುದ್ಧ ಜನರೇ ತಿರುಗಿ ಬೀಳುವ ದಿನಗಳು ಬರಲಿವೆ ಎಂದು ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಗೌರವಾಧ್ಯಕ್ಷ ದಿನೇಶ್ ಕುಂಪಲ ಹೇಳಿದ್ದಾರೆ. 

ಟ್ರಾಫಿಕ್ ಪೊಲೀಸರು ನಿಯಮ ಮೀರಿ ಯಾವುದೇ ಸುರಕ್ಷತಾ ಕ್ರಮ ವಹಿಸದೆ ತೊಕ್ಕೊಟ್ಟು ಓವರ್ ಬ್ರಿಡ್ಜ್ , ಜಪ್ಪಿನಮೊಗರು ಪ್ರದೇಶದ ಹೆದ್ದಾರಿಯಲ್ಲೇ ವಾಹನಗಳನ್ನ ತಡೆದು ದಂಡವನ್ನು ಪೀಕಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತಿರುವಾಗ ಪೊಲೀಸರು ತಡೆದು ಅಪಘಾತ ಸಂಭವಿಸಿದಲ್ಲಿ ಯಾರು ಹೊಣೆ. ಇದರಿಂದ ಜನಸಾಮಾನ್ಯರಲ್ಲದೆ ಪೊಲೀಸರ ಜೀವಕ್ಕೂ ಕಂಟಕವಿದೆ. ಕೆಟ್ಟು ಹೋಗಿರುವ ಅವೈಜ್ಞಾನಿಕ ಹೆದ್ದಾರಿಗಳಲ್ಲಿ ಎಷ್ಟೋ ಜನರು ಅಪಘಾತಕ್ಕೀಡಾಗಿ ಸತ್ತು ಹೋಗಿದ್ದಾರೆ. ಇಂತಹ ಎಷ್ಟು ಪ್ರಕರಣಗಳಲ್ಲಿ ಪೊಲೀಸರು, ಹೆದ್ದಾರಿ ಅಧಿಕಾರಿಗಳು ಅಥವಾ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿಸಿದ್ದಾರೆ..?ಸಂಚಾರಿ ಕಾನೂನನ್ನು ಎಲ್ಲರಿಗೂ ಸಮಾನವಾಗಿ ಪ್ರಯೋಗಿಸಿದರೆ ಟ್ರಾಫಿಕ್ ಪೊಲೀಸರ ಮೇಲೆ ಜನರಿಗೆ ವಿಶ್ವಾಸ ಬರಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ತಲಪಾಡಿ ಪ್ರತಿಕ್ರಿಯಿಸಿದ್ದಾರೆ.

Mangalore Deralakatte Yenepoya Hospital footpath encroached, pedestrians face huge trouble.