Mangalore crime, Arun Ullal: ಬೇರೆಯವರ ಹಾಲ್ ಗಳಲ್ಲಿ ಮದುವೆ ಆಗಬೇಡಿ, ಮಕ್ಕಳನ್ನ ಹಿಂದೂಗಳ ಶಾಲೆಗಳಲ್ಲೇ ಓದಿಸಿ ; ಸಾಹಿತಿ ಅರುಣ್ ಉಳ್ಳಾಲ್ ಭಾಷಣಕ್ಕೆ ಜಾಲತಾಣದಲ್ಲಿ ಟೀಕೆ, ಸೈಬರ್ ಕ್ರೈಂ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ

05-10-24 10:06 pm       Mangalore Correspondent   ಕರಾವಳಿ

ಕಿನ್ಯದ ಕೇಶವ ಶಿಶು ಮಂದಿರದ ಆಶ್ರಯದಲ್ಲಿ ನಡೆದಿದ್ದ ನವ ದಂಪತಿ ಸಮಾವೇಶದಲ್ಲಿ ಭಾಗವಹಿಸಿದ್ದ ತೊಕ್ಕೊಟ್ಟಿನ‌ ಯುವ ಸಾಹಿತಿ, ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅವರು ಅನ್ಯಮತೀಯರ ಸಭಾಂಗಣಗಳಲ್ಲಿ ಹಿಂದೂಗಳು ಮದುವೆ ಆಗಬೇಡಿ, ಹಿಂದೂ ಮಕ್ಕಳನ್ನ ಹಿಂದೂಗಳ ಶಾಲೆಗಳಲ್ಲೇ ಓದಿಸಬೇಕೆಂದು ಹೇಳಿದ್ದ ಭಾಷಣಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಸೈಬರ್ ಕ್ರೈಂ ಠಾಣೆಯಲ್ಲಿ ಅರುಣ್ ಉಳ್ಳಾಲ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಾಗಿದೆ. 

ಉಳ್ಳಾಲ, ಅ.5: ಕಿನ್ಯದ ಕೇಶವ ಶಿಶು ಮಂದಿರದ ಆಶ್ರಯದಲ್ಲಿ ನಡೆದಿದ್ದ ನವ ದಂಪತಿ ಸಮಾವೇಶದಲ್ಲಿ ಭಾಗವಹಿಸಿದ್ದ ತೊಕ್ಕೊಟ್ಟಿನ‌ ಯುವ ಸಾಹಿತಿ, ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಅವರು ಅನ್ಯಮತೀಯರ ಸಭಾಂಗಣಗಳಲ್ಲಿ ಹಿಂದೂಗಳು ಮದುವೆ ಆಗಬೇಡಿ, ಹಿಂದೂ ಮಕ್ಕಳನ್ನ ಹಿಂದೂಗಳ ಶಾಲೆಗಳಲ್ಲೇ ಓದಿಸಬೇಕೆಂದು ಹೇಳಿದ್ದ ಭಾಷಣಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಸೈಬರ್ ಕ್ರೈಂ ಠಾಣೆಯಲ್ಲಿ ಅರುಣ್ ಉಳ್ಳಾಲ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಾಗಿದೆ. 

ತಲಪಾಡಿ ಬಳಿಯ ಕಿನ್ಯ ಕೇಶವ ಶಿಶು ಮಂದಿರದ ಆಶ್ರಯದಲ್ಲಿ ಕಳೆದ ಭಾನುವಾರ ತಲಪಾಡಿಯ ದೇವಿಪುರದ ಸಭಾಂಗಣದಲ್ಲಿ ನಡೆದಿದ್ದ ನವ ದಂಪತಿ ಸಮಾವೇಶದಲ್ಲಿ ಸಾಹಿತಿ, ಉಪನ್ಯಾಸಕರಾದ ಡಾ.ಅರುಣ್ ಉಳ್ಳಾಲ್ ದಂಪತಿ ಭಾಗವಹಿಸಿದ್ದರು. ಕಾರ್ಯಕ್ರಮವು ಬೆಳಗ್ಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತ್ತು. ಮಧ್ಯಾಹ್ನದ ನಂತರ ಕಾರ್ಯಕ್ರಮದ ಬಗೆಗೆ ಅನಿಸಿಕೆ ವ್ಯಕ್ತಪಡಿಸಿದ್ದ ಅರುಣ್ ಉಳ್ಳಾಲ್ ಅವರು ಹಿಂದೂಗಳಿಗೆ ತೊಂದರೆ ಎದುರಾಗಿದೆ, ಹಿಂದುಗಳು ಹಿಂದೂಗಳ ಮಾಲಕತ್ವದ ಸಭಾಂಗಣಗಳಲ್ಲೇ ಮದುವೆಯಾಗಬೇಕು. ಅನ್ಯಮತೀಯರ ಸಭಾಂಗಣದಲ್ಲಿ ಅವರ ಸಮುದಾಯದವರಿಗಿಂತ ಹಿಂದೂಗಳ ಮದುವೆ ಆಗುವುದೇ ಹೆಚ್ಚು. ನನ್ನ ಮನೆಯ ಬಳಿಯೇ ಸುಸಜ್ಜಿತ ಚರ್ಚ್ ಸಭಾಂಗಣ ಇದ್ದರೂ ನಾನು ಅಲ್ಲಿ ಮದುವೆ ಆಗಿಲ್ಲ. ನಾನು ಅಲ್ಲಿ ಸಿಬ್ಬಂದಿ ಕೂಡಾ ಆಗಿದ್ದೆ. ನನಗೆ ಬಾಡಿಗೆಯಲ್ಲಿ ರಿಯಾಯಿತಿಯೂ ಸಿಗುತ್ತಿತ್ತು. ಸಿದ್ಧಾಂತಕ್ಕಾಗಿ ಇಕ್ಕಟ್ಟಾದರೂ ಹಿಂದೂಗಳಿಗೆ ಸೇರಿದ ಅಂಬಿಕಾ ರೋಡಿನ ಗಟ್ಟಿ ಸಮಾಜದಲ್ಲೇ ನಾನು ಮದುವೆ ಆಗಿದ್ದೆ. ನಾವು ಯಾರಿಗೋ ವ್ಯಯಿಸಿದ ಹಣ ವಿದೇಶಕ್ಕೆ ಸಲ್ಲುತ್ತದೆ. ಮಂಗಳೂರಿನಲ್ಲಿರುವ ಅನ್ಯಮತೀಯರ ಸಭಾಂಗಣಗಳಿಗೆ ನಮ್ಮದೇ ಆದಾಯ. ಮಂಗಳೂರು ನಗರದಲ್ಲಿರುವ ಹಿಂದೂ ಶಾಲೆಗಳಲ್ಲಿ ವರ್ಷ, ವರ್ಷವೂ ಹಿಂದೂ ಮಕ್ಕಳ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಹಿಂದೂಗಳು ತಮ್ಮ ಮಕ್ಕಳನ್ನು ಹಿಂದೂ ಶಾಲೆಗಳಿಗೆ ಕಳುಹಿಸಿ. ಮಂಗಳೂರಿನ ಪ್ರತಿಷ್ಠಿತ ಅನ್ಯಮತೀಯ ಕಾಲೇಜುಗಳಲ್ಲಿ ಹನ್ನೊಂದು ಕಾಮರ್ಸ್ ಬ್ಯಾಚುಗಳಿವೆ. ನಮ್ಮವರ ಕಾಲೇಜುಗಳಲ್ಲಿ ಒಂದು ಕಾಮರ್ಸ್ ಕ್ಲಾಸಿಗೂ ವಿದ್ಯಾರ್ಥಿಗಳಿಲ್ಲ. ಎಲ್ಲದಕ್ಕೂ ನಾವು ಅನ್ಯ ಮತೀಯರನ್ನೇ ಅವಲಂಬಿಸಿದ್ದೇವೆಂದು ಹೇಳಿದ್ದರು. 

ಈ ಬಗ್ಗೆ ಸ್ಥಳೀಯ ಚಾನೆಲ್ ಒಂದು ಅರುಣ್ ಉಳ್ಳಾಲ್ ಅವರು ನವ ದಂಪತಿ ಸಮಾವೇಶದಲ್ಲಿ ಮಾಡಿದ್ದ ಅನಿಸಿಕೆಯ ಭಾಷಣದ ವೀಡಿಯೋವನ್ನು ಪ್ರಸಾರ ಮಾಡಿತ್ತು. ವೀಡಿಯೋ ವೈರಲ್ ಆದ ತಕ್ಷಣವೇ ಸಾಹಿತಿ ಅರುಣ್ ಉಳ್ಳಾಲ್ ಅವರ ವಿರುದ್ಧ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿದಂತೆ ಅನ್ಯಮತೀಯರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರುಣ್ ಉಳ್ಳಾಲ್ ಅವರು ಪ್ರಸ್ತುತ ಮಂಗಳೂರಿನ‌ ಕ್ರೈಸ್ತ ಧರ್ಮೀಯರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಧರ್ಮ‌ ದ್ವೇಷವನ್ನ ಹರಡುತ್ತಿರುವ ಉಪನ್ಯಾಸಕನನ್ನ ಕೆಲಸದಿಂದ‌ ಕಿತ್ತೆಸೆಯುವಂತೆ ಜಾಲತಾಣಗಳಲ್ಲಿ ಆಗ್ರಹ ಕೇಳಿಬಂದಿದೆ. ಧರ್ಮಗಳ ನಡುವೆ ವಿಷಬೀಜ ಬಿತ್ತಿ ದ್ವೇಷ ಭಾಷಣಗೈದ ಅರುಣ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗಿತ್ತು. ಇದೀಗ ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಸಾಹಿತಿ ಅರುಣ್ ಉಳ್ಳಾಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂ 118/2024 ಕಲಂ; 66(C) IT ACT AND  196,351 (BNS), 2023 ರಂತೆ ಪ್ರಕರಣ ದಾಖಲು ಮಾಡಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

The Mangaluru City Cybercrime, Economic offences and Narcotics (CEN) police on Saturday, October 5, booked a case of promoting enmity between communities against one Arun Ullal, a teacher in the city.