Mangalore Airport, MP Brijesh Chowta: ಮಂಗಳೂರು ಏರ್ಪೋರ್ಟ್ ರನ್ ವೇ ವಿಸ್ತರಣೆ ; 45 ಎಕ್ರೆ ಭೂಸ್ವಾಧೀನಕ್ಕೆ ಅದಾನಿ ಕಂಪನಿಯಿಂದಲೇ ವೆಚ್ಚ, ಶಿರಾಡಿಯಲ್ಲಿ ರೈಲ್ವೇ- ಹೆದ್ದಾರಿ ಅಭಿವೃದ್ಧಿಗೆ ಜಂಟಿ ಸರ್ವೆ ; ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಸತ್ತಿನ ಗಮನಸೆಳೆದ ಸಂಸದ ಬ್ರಿಜೇಶ್ ಚೌಟ 

10-04-25 10:41 pm       Mangalore Correspondent   ಕರಾವಳಿ

ಮಂಗಳೂರು ಏರ್ಪೋರ್ ರನ್ ವೇ ವಿಸ್ತರಣೆ ಉದ್ದೇಶಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ 45 ಎಕ್ರೆ ಭೂಸ್ವಾಧೀನ ಆಗಲಿದೆ. 45 ಎಕ್ರೆ ಭೂಮಿ ಸ್ವಾಧೀನ ಪಡಿಸುವುದಕ್ಕೆ ತಗಲುವ ವೆಚ್ಚವನ್ನು ಏರ್ಪೋರ್ಟ್ ನಿರ್ವಹಣೆ ಗುತ್ತಿಗೆ ಪಡೆದಿರುವ ಅದಾನಿ ಕಂಪನಿ ಭರಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರು, ಎ.10 : ಮಂಗಳೂರು ಏರ್ಪೋರ್ ರನ್ ವೇ ವಿಸ್ತರಣೆ ಉದ್ದೇಶಕ್ಕೆ ಭೂಮಿ ಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು ಸದ್ಯದಲ್ಲೇ 45 ಎಕ್ರೆ ಭೂಸ್ವಾಧೀನ ಆಗಲಿದೆ. 45 ಎಕ್ರೆ ಭೂಮಿ ಸ್ವಾಧೀನ ಪಡಿಸುವುದಕ್ಕೆ ತಗಲುವ ವೆಚ್ಚವನ್ನು ಏರ್ಪೋರ್ಟ್ ನಿರ್ವಹಣೆ ಗುತ್ತಿಗೆ ಪಡೆದಿರುವ ಅದಾನಿ ಕಂಪನಿ ಭರಿಸಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಚೌಟ, ಏರ್ಪೋರ್ಟ್ ರನ್ ವೇ ವಿಸ್ತರಣೆ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು, ವಿಮಾನ ಯಾನ ಸಚಿವರು ನನ್ನನ್ನು ಕರೆದು ಮಾತನಾಡಿದ್ದಾರೆ. ಈಗಾಗಲೇ ರಾಜ್ಯ ಸರಕಾರದಿಂದಲೂ ಭೂಸ್ವಾಧೀನಕ್ಕೆ ಪ್ರಸ್ತಾಪ ಕೇಂದ್ರಕ್ಕೆ ಹೋಗಿತ್ತು. ರಾಜ್ಯ ಮತ್ತು ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರು ವಿಮಾನ ಯಾನ ಸಚಿವಾಲಯದ ಅಧಿಕಾರಿಗಳಿಗೆ ಪ್ರಕ್ರಿಯೆ ಪೂರೈಸಿದ್ದಾರೆ. ರಾಜ್ಯದ ಬೇಡಿಕೆಯಂತೆ ಭೂಮಿ ಕಳಕೊಳ್ಳುವವರಿಗೆ ಹಣ ನೀಡುವುದಕ್ಕೆ ಅದಾನಿ ಕಂಪನಿ ಒಪ್ಪಿಕೊಂಡಿದೆ ಎಂದು ತಿಳಿಸಿದರು.

ಸೈನಿಕರು ವೃತ್ತಿ ಸಂದರ್ಭದಲ್ಲಿ ಅಂಗವಿಕಲರಾದರೂ ಅವರಿಗೆ ಅಂಗವೈಕಲ್ಯ ವೇತನ ಪಡೆಯಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದು ಸಮಸ್ಯೆ ಪರಿಹಾರಕ್ಕೆ ಸಿಂಗಲ್ ವಿಂಡೋ ಮಾಡಲು ಆಗ್ರಹ ಮಾಡಿದ್ದೇನೆ. ಒಂದು ಸಾವಿರ ಅಂಗವಿಕಲ ಮಾಸಾಶನ ಪಡೆಯಲು ಸುಪ್ರೀಂ ಕೋರ್ಟಿಗೆ ಅಲೆದಾಡಲು ಸೈನಿಕರಿಗೆ ಸಾಧ್ಯವಾಗಲ್ಲ. ಈ ಬಗ್ಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದ್ದೇನೆ.

ಶಿರಾಡಿಯಲ್ಲಿ ರೈಲ್ವೇ- ರಸ್ತೆ ಜಂಟಿ ಅಭಿವೃದ್ಧಿ

ಸುರತ್ಕಲ್ ನಿಂದ ನಂತೂರು ನಡುವಿನ ರಸ್ತೆಯನ್ನು ಬಂದರು ಮಂಡಳಿ ಕೈಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ನೀಡುವಂತೆ ಕೇಳಿಕೊಂಡಿದ್ದೇನೆ. ಅದಕ್ಕೆ ಹೆದ್ದಾರಿ ಸಚಿವರು ಒಪ್ಪಿಗೆ ನೀಡಿದ್ದು, ಸುರತ್ಕಲ್ – ನಂತೂರು ಹೆದ್ದಾರಿ ಅಭಿವೃದ್ಧಿಗೆ ಟೆಂಡರ್ ನೀಡಿದ್ದಾರೆ. ಇದಲ್ಲದೆ, ಗುರುವಾಯನಕೆರೆ- ಪೆರಿಯಶಾಂತಿ ಹಾಗೂ ಬಜಗೋಳಿ ನಡುವೆ ಹೊಸ ರಸ್ತೆ ನಿರ್ಮಾಣಕ್ಕೂ ಪ್ರಸ್ತಾಪ ಇಟ್ಟಿದ್ದೇವೆ. ಮಂಗಳೂರು ನಗರವನ್ನು ಬಂದರು ನಗರಿಯನ್ನಾಗಿ ಅಭಿವೃದ್ಧಿ ಪಡಿಸಲು ವಿಶೇಷ ಆದ್ಯತೆ ನೀಡುವಂತೆ ಕೇಂದ್ರ ಸರಕಾರದ ಗಮನ ಸೆಳೆದಿದ್ದೇನೆ. ಇದಕ್ಕಾಗಿ ಮಂಗಳೂರು- ಬೆಂಗಳೂರು ನಡುವೆ ರೈಲ್ವೇ ಮತ್ತು ಹೆದ್ದಾರಿ ಅಭಿವೃದ್ಧಿ ಆಗಬೇಕಿದೆ. ಶಿರಾಡಿ ಭಾಗದಲ್ಲಿ ರೈಲ್ವೇ ಮತ್ತು ಹೆದ್ದಾರಿ ಒಂದೇ ಪ್ರಕಾರದಲ್ಲಿ ಅಭಿವೃದ್ಧಿ ಪಡಿಸಲು ಸರ್ವೆ ಮಾಡಿಸಿ, ಡಿಪಿಆರ್ ರಚಿಸುವಂತೆ ಸಲಹೆ ನೀಡಿದ್ದೇನೆ. ಪ್ರತ್ಯೇಕ ಇಲಾಖೆಯಾದರೂ ಎಲ್ಲೆಲ್ಲೋ ಇರುವ ಬದಲು ಒಟ್ಟೊಟ್ಟಿಗೆ ರಚನೆಯಾದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದರು.

ಮಂಗಳೂರು ಬಂದರು ಅಭಿವೃದ್ಧಿ ಆಗಿಲ್ಲ

1964ರಲ್ಲಿ ಮಂಗಳೂರು ಏರ್ಪೋರ್ಟ್, ಬಂದರು ನಿರ್ಮಾಣ ಆಗಿದ್ದರೂ ಮುಂಬೈನಂತೆ ಬೆಳೆದಿಲ್ಲ. ಗುಜರಾತಿನಲ್ಲಿ ಮೋದಿ ಸಿಎಂ ಆದಬಳಿಕ ಆಗಿರುವ ಖಾಂಡ್ಲಾ ಇನ್ನಿತರ ನಾಲ್ಕು ಬಂದರುಗಳು ಮುಂಬೈಗೆ ಪೈಪೋಟಿ ನೀಡುವಷ್ಟು ಬೆಳೆದು ನಿಂತಿದೆ. ನಮ್ಮ ಬಂದರು ಯಾಕೆ ಅಭಿವೃದ್ಧಿ ಆಗಿಲ್ಲ ಎನ್ನುವ ಬಗ್ಗೆ ನಾವು ಚಿಂತನೆ ನಡೆಸಬೇಕು. ನಮ್ಮ ಶಾಸಕರೆಲ್ಲ ಸೇರಿ ಕರಾವಳಿಯ ಅಭಿವೃದ್ಧಿ ಬಗ್ಗೆ ರಾಜ್ಯದ ಅಧಿವೇಶನದಲ್ಲಿಯೂ ಒತ್ತಾಯ ಮಾಡಿದ್ದಾರೆ ಎಂದರು.

ಕೋಸ್ಟ್ ಗಾರ್ಡ್ ಅಕಾಡೆಮಿಗೆ ಕ್ಲಿಯರೆನ್ಸ್

ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪನೆ ಬಗ್ಗೆ ರಕ್ಷಣಾ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಒಂದು ಸಾವಿರ ಕೋಟಿಗಿಂತ ಹೆಚ್ಚಿನ ವೆಚ್ಚದ ಯೋಜನೆಯಾದರೆ ಸಚಿವ ಸಂಪುಟದ ಒಪ್ಪಿಗೆ ಬೇಕಾಗುತ್ತದೆ. ಅದಕ್ಕಾಗಿ ಅದರೊಳಗೆ ಯೋಜನೆ ರೂಪಿಸುವಂತೆ ಸಲಹೆ ನೀಡಿದ್ದಾರೆ. ಆದರೆ ಯೋಜನಾ ವೆಚ್ಚ ತಗ್ಗಿಸುವುದು ಬೇಡ, ಅಗತ್ಯವಿದ್ದರೆ ಸಂಪುಟದ ಒಪ್ಪಿಗೆ ತೆಗೆಸಿಕೊಡುತ್ತೇನೆಂದು ರಕ್ಷಣಾ ಸಚಿವರಲ್ಲಿಯೂ ಮಾತನಾಡಿದ್ದೇನೆ. ಸಂಪುಟದ ಕ್ಲಿಯರೆನ್ಸ್ ಸಿಗುವ ವಿಶ್ವಾಸ ಇದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ಮಂಗಳೂರು ಏರ್ಪೋರ್ಟ್ ಏರ್ ಕ್ರೂ ಬೇಸ್ ಸೌಲಭ್ಯ ಇರುವ ದೇಶದ 13 ವಿಮಾನ ನಿಲ್ದಾಣಗಳಲ್ಲಿ ಒಂದು. ಮಂಗಳೂರನ್ನು ಹೊರತುಪಡಿಸಲು ಯತ್ನ ನಡೆದಿತ್ತು. ಏರ್ ಕ್ರೂ ಬೇಸ್ ಸೌಲಭ್ಯವನ್ನು ದೇಶದ ದೊಡ್ಡ ನಗರಗಳಿಗೆ ಮಾತ್ರ ಸೀಮಿತಗೊಳಿಸಿದರೆ ಕರಾವಳಿಯ ಜನರಿಗೆ ವಿಮಾನ ಸಿಬಂದಿಯಾಗುವ ಅವಕಾಶ ಸಿಗಲ್ಲ. ಈ ಬಗ್ಗೆ ವಿಮಾನ ಯಾನ ಸಚಿವರಿಗೂ ಮನವರಿಕೆ ಮಾಡಿದ್ದು, ಏರ್ ಕ್ರೂ ಬೇಸ್ ಉಳಿಸಿಕೊಳ್ಳುವುದಕ್ಕೆ ಒತ್ತಾಯ ಮಾಡಿದ್ದೇನೆ ಎಂದರು.

ಕೊಂಕಣ ರೈಲ್ವೇ ವಿಲೀನಕ್ಕೆ ಒತ್ತಾಯ

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸಲು ಒತ್ತಾಯಿಸಿದ್ದೇನೆ. ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು, ಅದು ಸಾಧ್ಯವಾದಲ್ಲಿ ಕರಾವಳಿಯ ರೈಲ್ವೇ ಅಭಿವೃದ್ಧಿ ಸಾಧ್ಯವಾಗಲಿದೆ. ಕೊಂಕಣ ರೈಲ್ವೇ ಮತ್ತು ಎಚ್ಎಂಆರ್ ಡಿಸಿ ವಿಲೀನಗೊಳ್ಳಬೇಕಿದ್ದು, ರಾಜ್ಯ ಮತ್ತು ಕರಾವಳಿಯ ಅಭಿವೃದ್ಧಿ ದೃಷ್ಟಿಯಿಂದ ಇದು ಅಗತ್ಯ ಆಗಬೇಕಿರುವ ಕೆಲಸವಾಗಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ತೊಡಿಕಾನ, ಉಪ್ಪಿನಂಗಡಿ, ಪುತ್ತೂರು ಸೇರಿದಂತೆ ನಾಲ್ಕು ದೇವಸ್ಥಾನಗಳನ್ನು ಪ್ರಸಾದಂ ಯೋಜನೆಯಡಿ ಅಭಿವೃದ್ಧಿ ಪಡಿಸಲು ಪ್ರಸ್ತಾಪ ಇಟ್ಟಿದ್ದೇನೆ. ಈ ಬಾರಿಯ ಅಧಿವೇಶನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಎಲ್ಲ ಬಗೆಯ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.

ಆಲಿವ್ ಲಿರ್ಡ್ ಎನ್ನುವ ವಿಶೇಷ ಜಲಚರ ಕರಾವಳಿಯಲ್ಲಿದ್ದು, ಅಳಿವಿನಂಚಿನಲ್ಲಿರುವ ಇವುಗಳ ಅಭಿವೃದ್ದಿಗಾಗಿ ಕೇಂದ್ರ ಸರಕಾರದಿಂದ ವಿಶೇಷ ಯೋಜನೆ ಹಮ್ಮಿಕೊಳ್ಳಲು ಆಗ್ರಹಿಸಿದ್ದೇನೆ ಎಂದು ಹೇಳಿದ ಸಂಸದರು, ಈ ಬಾರಿಯ ಅಧಿವೇಶನದಲ್ಲಿ ನಾವೆಲ್ಲ ಬೇಡಿಕೆ ಇರಿಸಿದ್ದ ವಕ್ಫ್ ತಿದ್ದುಪಡಿ ಕಾಯ್ದೆಯಾಗಿ ರೂಪುಗೊಂಡಿದೆ. ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅತಿ ಹೆಚ್ಚು ವಕ್ಫ್ ಭೂಮಿ ಅತಿಕ್ರಮಣವಾಗಿದೆ. ಇದರ ಬಗ್ಗೆ ಹೊಸ ಕಾಯ್ದೆಯಡಿ ಕ್ರಮ ಆಗಬೇಕಾಗಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಶಾಸಕ ವೇದವ್ಯಾಸ ಕಾಮತ್, ಪ್ರೇಮಾನಂದ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

"Mangaluru Airport Runway Expansion: Adani Funds Land Acquisition, Joint Survey for Railway-Highway Development in Shiradi; MP Brijesh Chowta Highlights Comprehensive District Development in Parliament"