Mangalore Waqf protest, Adyar, Police: ವಕ್ಫ್ ತಿದ್ದುಪಡಿ ವಿರುದ್ಧ ಒಕ್ಕೊರಲ ಧ್ವನಿಯೆತ್ತಿದ ಕರಾವಳಿ ಮುಸ್ಲಿಮರು ; ಗೊಂದಲ ಬದಿಗಿಟ್ಟು ಹಾರಾಡಿದ ತ್ರಿವರ್ಣ ಧ್ವಜ, ಅಡ್ಯಾರ್ ಹೆದ್ದಾರಿ ಫುಲ್ ಜಾಮ್ ! ಯುವಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

18-04-25 10:17 pm       Mangalore Correspondent   ಕರಾವಳಿ

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರಾವಳಿಯಲ್ಲಿ ಉಲೆಮಾಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73-ರ ಬದಿಯಲ್ಲೇ ಸಮಾವೇಶ ನಡೆದಿದ್ದರಿಂದ ಹೆದ್ದಾರಿಯೂ ಬಂದ್ ಆಗಿತ್ತು.

ಮಂಗಳೂರು, ಎ.18 : ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರಾವಳಿಯಲ್ಲಿ ಉಲೆಮಾಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆಗೆ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73-ರ ಬದಿಯಲ್ಲೇ ಸಮಾವೇಶ ನಡೆದಿದ್ದರಿಂದ ಹೆದ್ದಾರಿಯೂ ಬಂದ್ ಆಗಿತ್ತು.

ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಇರಲಿಲ್ಲ. ಧಾರ್ಮಿಕ ಮುಖಂಡರು, ಉಲೆಮಾಗಳು ಸೇರಿದಂತೆ ಮುಸ್ಲಿಮ್ ಸಂಘಟನೆಗಳ ಪ್ರಮುಖರು ಮಾತ್ರ ಇದ್ದರು. ವಿಶೇಷ ಅಂದ್ರೆ, ಸಮಾವೇಶದ ಉದ್ದಕ್ಕೂ ರಾಷ್ಟ್ರ ಧ್ವಜ ಬಿಟ್ಟರೆ ಬೇರಾವುದೇ ಧ್ವಜ ಹಾರಾಡಲಿಲ್ಲ. ಸಾಮಾನ್ಯವಾಗಿ ಮುಸ್ಲಿಮರ ಸಮಾವೇಶಗಳಲ್ಲಿ ಹಸಿರು ಬಣ್ಣದ ಬಾವುಟಗಳೇ ಇರುತ್ತಿದ್ದವು. ಈ ಬಾರಿ ಅವ್ಯಾವುದಕ್ಕೂ ಅವಕಾಶ ಇರಲಿಲ್ಲ. ಹೆಚ್ಚಿನ ನಿಂದನಾತ್ಮಕ ಘೋಷಣೆಗಳಾಗಲೀ, ಆಕ್ರೋಶ ಮಾತುಗಳೂ ಇರಲಿಲ್ಲ. ಸಂವಿಧಾನ ಮತ್ತು ಅಂಬೇಡ್ಕರ್ ಪರವಾಗಿ ಘೋಷಣೆಗಳಿದ್ದವು. ವಕ್ಫ್ ವಿರೋಧಿ ಘೋಷಣೆಗೆ ಪ್ರತಿಯಾಗಿ ಯುವಕರು ಆಜಾದಿ ಆಜಾದಿ ಎಂದು ಕೂಗುತ್ತಿದ್ದರು. ಉಲೆಮಾಗಳ ನೇತೃತ್ವದ ಸಮಾವೇಶ ಆಗಿದ್ದರಿಂದ ಎಲ್ಲವೂ ಶಾಂತಿಯುತವಾಗಿಯೇ ನಡೆದಿತ್ತು.  

ಉಳಿದಿದ್ದು 27 ಸಾವಿರ ಎಕ್ರೆ ಮಾತ್ರ

ಕರ್ನಾಟಕ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಶಾಫಿ ಸಹದಿ ಪ್ರಮುಖ ಭಾಷಣ ಮಾಡಿದರು. ವಕ್ಫ್ ತಿದ್ದುಪಡಿ ಕಾಯ್ದೆಯ ಅಂಶಗಳನ್ನು ಹೇಳುತ್ತ ಅದರಲ್ಲಾಗಿರುವ ಲೋಪಗಳನ್ನು ಎತ್ತಿಹೇಳಿದ ಅವರು ಈ ರೀತಿಯ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನಾನು ಅಧ್ಯಕ್ಷನಾಗಿದ್ದಾಗ ರಾಜ್ಯದಲ್ಲಿ 1.13 ಲಕ್ಷ ಎಕರೆ ಭೂಮಿ ವಕ್ಫ್ ಕೈಲಿತ್ತು ಎಂಬುದನ್ನು ನೋಡಿದ್ದೇನೆ. ಆದರೆ ಈ ಪೈಕಿ ಹೆಚ್ಚಿನವು ಸರಕಾರದ ಜೊತೆಗೆ ವ್ಯಾಜ್ಯದಲ್ಲಿದೆ. ವಕ್ಫ್ ಆಯೋಗದ ಬಳಿ ಇರುವುದು 27 ಸಾವಿರ ಎಕರೆ ಮಾತ್ರ.

ತಿದ್ದುಪಡಿ ಕಾಯ್ದೆಯಲ್ಲಿ ಪ್ರಮುಖವಾಗಿ ಈಗ ಇರುವ ಟ್ರಿಬ್ಯುನಲ್ ತೆಗೆದು ಜಿಲ್ಲಾಧಿಕಾರಿಗೆ ವ್ಯಾಜ್ಯ ನಿರ್ಣಯಿಸಲು ಅಧಿಕಾರ ಕೊಟ್ಟಿದ್ದಾರೆ. ಇದರಿಂದ ಪರೋಕ್ಷವಾಗಿ ಉಳ್ಳವರು ಜಿಲ್ಲಾಧಿಕಾರಿ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ರಹದಾರಿ ಮಾಡಿಕೊಟ್ಟಿದ್ದಾರೆ. ಕೋರ್ಟ್ ಹೋಗುವುದಕ್ಕೂ ಆಸ್ಪದ ಕೊಡದೆ ಜಿಲ್ಲಾಧಿಕಾರಿಗೆ ಪರಮಾಧಿಕಾರ ನೀಡಿರುವುದನ್ನು ನಾವು ಒಪ್ಪುವುದಿಲ್ಲ. ನಾವು ಮಾತ್ರವಲ್ಲ, ಜಾತ್ಯತೀತ ಭಾವನೆಯುಳ್ಳ ಯಾರು ಕೂಡ ಒಪ್ಪಲ್ಲ. ನಾವು ಯಾವುದೇ ಬೆಲೆ ತೆತ್ತಾದರೂ ಈ ಕಾಯ್ದೆಯನ್ನು ಜಾರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಹೆದ್ದಾರಿ ಬಂದ್ ಮಾಡಿಸಲು ಜಟಾಪಟಿ

ಹೆದ್ದಾರಿ ಬದಿಯಲ್ಲೇ ಸಮಾವೇಶ ಆಯೋಜಿತಗೊಂಡಿದ್ದರಿಂದ ಸಭೆಯ ಒಳಭಾಗಕ್ಕೆ ಪ್ರವೇಶಿಸುವಲ್ಲಿ ತೀವ್ರ ಜನಜಂಗುಳಿ ಉಂಟಾಗಿತ್ತು. ಇದರಿಂದಾಗಿ ಹೆದ್ದಾರಿಯೂ ಎರಡು ಕಡೆಗಳಲ್ಲಿ ಬ್ಲಾಕ್ ಆಗಿತ್ತು. ವಾಹನಗಳ ಸಂದಣಿ ಹೆಚ್ಚಿರದ ಕಾರಣ ಹೆದ್ದಾರಿ ಸಂಚಾರಕ್ಕೆ ಅವಕಾಶಗಳಿದ್ದವು. ಆದರೆ ಹೆದ್ದಾರಿಯನ್ನು ಬಂದ್ ಮಾಡಲೇಬೇಕೆಂದು ಕೆಲವು ಯುವಕರು ಪಟ್ಟು ಹಿಡಿದ ರೀತಿ ವರ್ತಿಸುತ್ತಿದ್ದರು. ಆದರೆ ಕೆಲವು ಹಿರಿಯ ನಾಯಕರು, ಧಾರ್ಮಿಕ ಮುಖಂಡರು ಹೆದ್ದಾರಿ ಬಂದ್ ಮಾಡುವುದು ಬೇಡ ಎಂದು ಹೇಳುತ್ತಿದ್ದರೂ ಯುವಕರು ಕೇಳುತ್ತಿರಲಿಲ್ಲ. ಪೊಲೀಸರು ಮನವಿ ಮಾಡಿದರೂ ಹೆದ್ದಾರಿ ಸಂಚಾರಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಅಡ್ಯಾರ್ ನಲ್ಲಿ ಎರಡು ಬದಿಯಲ್ಲೂ 2-3 ಕಿಮೀ ಉದ್ದಕ್ಕೆ ಸಂಜೆ ವರೆಗೂ ಬ್ಲಾಕ್ ಆಗಿತ್ತು. ಬ್ಲಾಕ್ ನಡುವೆ ಬಸ್ ಇತರ ವಾಹನಗಳಲ್ಲಿದ್ದ ಕೆಲವು ಪ್ರಯಾಣಿಕರು ಇಳಿದು ಜನರ ಮಧ್ಯೆಯೇ ನಡೆದು ಹೋಗುತ್ತಿದ್ದರು.

ಮರಕ್ಕೆ ಹತ್ತಿ ಕುಳಿತಿದ್ದ ಜನರು

ಸಮಾವೇಶ ನಡೆಯುತ್ತಿದ್ದ ಪ್ರದೇಶದಲ್ಲಿ ಜನರು ತುಂಬಿದ್ದರಿಂದ ಒಳಗೆ ಹೋಗುವುದಕ್ಕೂ ಆಗದೆ, ರಸ್ತೆಯಲ್ಲಿ ನಿಲ್ಲುವುದಕ್ಕೂ ಆಗದ ಸ್ಥಿತಿಯಿತ್ತು. ಇದೇ ವೇಳೆ, ಒಂದಷ್ಟು ಯುವಕರು ರಸ್ತೆಯಲ್ಲಿ ನಿಂತುಕೊಂಡಿದ್ದ ಲಾರಿ, ಬಸ್ ಗಳ ಮೇಲ್ಭಾಗಕ್ಕೆ ಹತ್ತಿ ಕುಳಿತು ಘೋಷಣೆ ಕೂಗುತ್ತಿದ್ದರು. ಕೆಲವರು ಅಲ್ಲಿದ್ದ ಮರಗಳ ಮೇಲೆ ಹತ್ತಿ ಕುಳಿತುಕೊಂಡಿದ್ದರು. ಸುತ್ತಮುತ್ತಲ ಕಟ್ಟಡಗಳ ಮೇಲ್ಭಾಗದಲ್ಲಿಯೂ ಜನರು ಹತ್ತಿ ನಿಂತು ಸಮಾವೇಶದತ್ತ ಗಮನ ನೆಟ್ಟಿದ್ದರು. ಹಿರಿಯರು ರಸ್ತೆ ಬದಿಯಲ್ಲಿ ಕುರ್ಚಿ ಹಾಕಿ ಕುಳಿತುಕೊಂಡಿದ್ದರು. ಅಡ್ಯಾರ್ ನಲ್ಲಿ ಬ್ಲಾಕ್ ಆಗುತ್ತೆ ಎಂದು ಮೊದಲೇ ಸೂಚನೆ ಕೊಟ್ಟಿದ್ದರಿಂದ ಮತ್ತು ಆಯಾ ಭಾಗದಲ್ಲಿ ಪೊಲೀಸರನ್ನು ನಿಯೋಜಿಸಿದ್ದರಿಂದ ಹೆಚ್ಚಿನ ವಾಹನಗಳು ಪರ್ಯಾಯ ರಸ್ತೆಗಳಲ್ಲಿ ಸಾಗಿದ್ದವು. ಸಂಜೆಯ ಸಾರಿಗೆ ಬಸ್ಸುಗಳು ಕೂಡ ಪರ್ಯಾಯ ರಸ್ತೆಗಳಲ್ಲೇ ಸಾಗಿದ್ದವು. ಸಮಾವೇಶ ಸಂಜೆ 4ರಿಂದ 6.30 ಗಂಟೆ ವರೆಗೂ ನಡೆದಿದ್ದು ಧಾರ್ಮಿಕ ಮುಖಂಡರು ಬ್ಯಾರಿ ಮತ್ತು ಮಲಯಾಳ ಭಾಷೆಯಲ್ಲಿ ವಕ್ಫ್ ತಿದ್ದುಪಡಿ ವಿರುದ್ಧ ಧ್ವನಿ ಎತ್ತಿದ್ದಾರೆ.

ನೂರಾರು ಪೊಲೀಸರು ಸ್ಥಳದಲ್ಲಿ ಇದ್ದರೂ, ಸಾವಿರಾರು ಯುವಕರು ರಸ್ತೆಯ ಮಧ್ಯದಲ್ಲಿ ಕದಲದೆ ನಿಂತುಕೊಂಡಿದ್ದರಿಂದ ಅವರನ್ನು ಎಬ್ಬಿಸಲು ಸಾಧ್ಯವಾಗಲಿಲ್ಲ. ಆಂಬುಲೆನ್ಸ್ ಬಂದಾಗ ಮಾತ್ರ ಹೆದ್ದಾರಿ ಬಿಟ್ಟುಕೊಟ್ಟು ಉಳಿದ ವಾಹನಗಳನ್ನು ನಿಲ್ಲಿಸಿ ಕಾಯುವಂತೆ ಮಾಡಿದ್ದರು. ಇದರ ನಡುವೆಯೂ ಕೆಲವೊಂದು ವಾಹನಗಳನ್ನು ಪೊಲೀಸರು ತಳ್ಳಿ ಪಾಸ್ ಮಾಡಿಸುತ್ತಿದ್ದರು. ಪೊಲೀಸ್ ಕಮಿಷನರ್ ಹೆದ್ದಾರಿ ಸಂಚಾರಕ್ಕೆ ನಿರ್ಬಂಧ ಹಾಕಿದ್ದು, ಆನಂತರ ಹೈಕೋರ್ಟಿನಲ್ಲಿ ಹೆದ್ದಾರಿ ನಿರ್ಬಂಧಿಸುವಂತಿಲ್ಲ ಎಂಬ ಮಧ್ಯಂತರ ಆದೇಶ ಬಂದಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಇದೇ ವಿಚಾರ ಕೆಲವು ಯುವಕರ ಕೆಂಗಣ್ಣಿಗೂ ಗುರಿಯಾಗಿತ್ತು. ಎಸ್ಡಿಪಿಐ ಕಾರ್ಯಕರ್ತರು ಮಾತ್ರ ಜನರ ಗುಂಪಿನ ನಡುವೆಯೂ ಗೊಂದಲಕ್ಕೆ ಬಿದ್ದ ಪ್ರಯಾಣಿಕರನ್ನು, ಅರ್ಧದಲ್ಲಿ ಸಿಕ್ಕಿಬಿದ್ದ ಮಹಿಳೆಯರನ್ನು ಸಮಸ್ಯೆ ಆಗದಂತೆ ದಾಟಿಸುವ ಕೆಲಸ ಮಾಡುತ್ತಿದ್ದರು.

A large number of people gathered for a protest rally organised by the Ulama Coordination Karnataka against the Waqf Amendment Act at Shah Garden Maidan in Adyar, Kannur, on Friday. Despite the scorching heat, people began arriving from various places towards Adyar-Kannur from 2 PM onwards. Traffic movement came to a virtual halt for some time between Padil and Thumbay on Mangaluru-Bengaluru National Highway 75 on Friday evening due to gathering of people for protest against Waqf Amendment Act at Shah grounds in Adyar