Siddaramaiah, Cm Mangalore, BJP black flag: ಸಿಎಂ ಸಿದ್ದರಾಮಯ್ಯಗೆ ಮಂಗಳೂರಿನಲ್ಲಿ ಕಪ್ಪು ಬಾವುಟ ಪ್ರದರ್ಶನ ಯತ್ನ ; ಯುವಮೋರ್ಚಾ ಕಾರ್ಯಕರ್ತರು ಪೊಲೀಸರ ವಶಕ್ಕೆ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ವಹಿಸಲು ಒತ್ತಾಯ 

16-05-25 06:05 pm       Mangalore Correspondent   ಕರಾವಳಿ

ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಲು ಯತ್ನಿಸಿದ್ದಾರೆ. 

ಮಂಗಳೂರು, ಮೇ 16 : ಮಂಗಳೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಲು ಯತ್ನಿಸಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರು ಏರ್ಪೋರ್ಟ್ ನಿಂದ ಮಂಗಳೂರಿಗೆ ಬರುತ್ತಿದ್ದಾಗ ಯೆಯ್ಯಾಡಿ ಬಳಿ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ್ದಾರೆ. ಆದರೆ ಸಿಎಂ ಬೆಂಗಾವಲು ಪಡೆಯ ಕಾರು ಬರುವುದಕ್ಕೆ ಮುನ್ನವೇ ಕಪ್ಪು ಕೋಟಿನಲ್ಲಿದ್ದ ಸಿಸಿಬಿ ಪೊಲೀಸರು ತಡೆ ಹಾಕಿದ್ದಾರೆ. ಸಿದ್ದರಾಮಯ್ಯ ಅವರಿಗೆ ಧಿಕ್ಕಾರ ಕೂಗುತ್ತಾ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. 

ಕಾರ್ಯಕರ್ತರನ್ನು ಬಳಿಕ ಪೊಲೀಸ್ ಬಸ್ಸಿನಲ್ಲಿ ವಶಕ್ಕೆ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನ ಪಡೀಲ್ ನಲ್ಲಿ ನಿರ್ಮಿಸಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಹಾಗೂ ಉಳ್ಳಾಲ ದರ್ಗಾ ಉರುಸ್ ನಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. 

ಮಂಗಳೂರು ಏರ್ಪೋರ್ಟ್ ನಿಂದ ನೇರವಾಗಿ ಉರ್ವಾ ಮಾರ್ಕೆಟ್ ಬಳಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಗಾಗಿ ಸಿಎಂ ಸಿದ್ದರಾಮಯ್ಯ ಮೊದಲು ತೆರಳಬೇಕಿತ್ತು. ಸಿದ್ದರಾಮಯ್ಯ ಚಾಮರಾಜನಗರದಿಂದ ಮಂಗಳೂರಿಗೆ ಆಗಮಿಸುವಾಗಲೇ ಸಂಜೆ ಗಂಟೆ 4.30 ಆಗಿದ್ದರಿಂದ ಉರ್ವಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ನೇರವಾಗಿ ಪಡೀಲಿಗೆ ತೆರಳಿದ್ದಾರೆ.

BJP Yuva Morcha Members Show Black Flags to CM Siddaramaiah Near Yeyadi in Mangalore.