Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ ಯಾತ್ರೆ ; ಮಳೆಯಲ್ಲಿ ತೋಯ್ದರೂ ಕದಲದ ಜನ, ಕಾರ್ಯಕ್ರಮ ಮಾತ್ರ ನೀರಸ ! ಸೇನಾ ಕಾರ್ಯಾಚರಣೆಗೆ ಬಹುಪರಾಕ್

20-05-25 11:12 pm       Mangalore Correspondent   ಕರಾವಳಿ

ರಾಜ್ಯದೆಲ್ಲೆಡೆ ಬಿಜೆಪಿ ವತಿಯಿಂದ ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಪ್ರಶಂಸಿಸಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನಲ್ಲೂ ಮಂಗಳವಾರ ಸಂಜೆ ಮಳೆಯ ನಡುವೆಯೂ ತಿರಂಗಾ ಯಾತ್ರೆ ನಡೆಸಲಾಗಿತ್ತು. ನಗರದ ಪಿವಿಎಸ್ ವೃತ್ತದ ಬಿಜೆಪಿ ಕಚೇರಿಯಿಂದ ಲಾಲ್ ಬಾಗ್ ವೃತ್ತದ ವರೆಗೆ ವಿದ್ಯಾರ್ಥಿಗಳು, ಮಹಿಳೆಯರು, ಹಿಂದು ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.

ಮಂಗಳೂರು, ಮೇ 20 : ರಾಜ್ಯದೆಲ್ಲೆಡೆ ಬಿಜೆಪಿ ವತಿಯಿಂದ ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಪ್ರಶಂಸಿಸಿ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನಲ್ಲೂ ಮಂಗಳವಾರ ಸಂಜೆ ಮಳೆಯ ನಡುವೆಯೂ ತಿರಂಗಾ ಯಾತ್ರೆ ನಡೆಸಲಾಗಿತ್ತು. ನಗರದ ಪಿವಿಎಸ್ ವೃತ್ತದ ಬಿಜೆಪಿ ಕಚೇರಿಯಿಂದ ಲಾಲ್ ಬಾಗ್ ವೃತ್ತದ ವರೆಗೆ ವಿದ್ಯಾರ್ಥಿಗಳು, ಮಹಿಳೆಯರು, ಹಿಂದು ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.

ಮಳೆರಾಯ ಹನಿ ಹನಿಯಾಗಿ ಇಣುಕುತ್ತಿದ್ದರೂ, 80ರ ಹರೆಯದ ಕಲ್ಲಡ್ಕ ಪ್ರಭಾಕರ ಭಟ್ ದಂಪತಿ ಸೇರಿದಂತೆ ಸ್ವಾಮೀಜಿಗಳು, ಬಿಜೆಪಿ ಶಾಸಕರು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಕೂಡ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದು ಲಾಲ್ ಬಾಗ್ ವೃತ್ತದ ಬಳಿಯೇ ಸಮಾವೇಶಗೊಂಡರು. ಅಷ್ಟರಲ್ಲಿಯೇ ಮಳೆರಾಯ ಧೋ ಎಂದು ಸುರಿದಿದ್ದು, ಜನರ ಉತ್ಸಾಹವನ್ನು ತಣಿಸಲು ಯತ್ನಿಸಿದ. ಆದರೆ ಹೆಚ್ಚಿನವರು ಕೊಡೆ ಹಿಡಿದೇ ಬಂದಿದ್ದರಿಂದ ತಾವು ನಿಂತಲ್ಲಿಯೇ ಕೊಡೆ ಹಿಡಿದು ನಿಂತು ಬಿಟ್ಟರು. ಕೊಡೆ ಇಲ್ಲದವರು ಪಕ್ಕದ ಕಟ್ಟಡಗಳ ಅಡಿಯಲ್ಲಿ ಆಸರೆ ಪಡೆದರು.

ಆದರೆ ಕಾರ್ಯಕ್ರಮ ಏರ್ಪಡಿಸಿದ ಸಂಘ ಪರಿವಾರದವರು ಇದೇ ಮೊದಲ ಬಾರಿಗೆ ಸೋತು ಬಿಟ್ಟರು. ಜನರು ಮಳೆಯ ನಡುವೆಯೂ ಹಿಂತಿರುಗದೆ ಕುತೂಹಲದಿಂದ ನಿಂತಿದ್ದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತಕ್ಕೆ ಸರಿಯಾಗಿ ಮಾತನಾಡಲು ತಿಳಿಯದ ವ್ಯಕ್ತಿಗೆ ಕೊಟ್ಟದ್ದೇ ಅರ್ಧ ಸಪ್ಪೆ ಆಗುವಂತಾಗಿತ್ತು. ವೇದಿಕೆಯಲ್ಲಿ ಮಾಜಿ ನೇವಿ ಅಧಿಕಾರಿ ಸುಧೀರ್ ಪೈ ಮತ್ತು ಸಾಮಾಜಿಕ ಕಾರ್ಯಕರ್ತೆ ಉಡುಪಿಯ ರಶ್ಮಿ ಸಾಮಂತ್ ಅವರಿದ್ದರೂ, ಮಳೆಯಿಂದಾಗಿ ಒಟ್ಟು ಕಾರ್ಯಕ್ರಮವನ್ನು ಐದೇ ನಿಮಿಷದಲ್ಲಿ ಮುಗಿಸಲು ಆಯೋಜಕರು ತರಾತುರಿ ತೋರಿದರು. ಸುಧೀರ್ ಪೈ ಅವರಿಗೆ ಭಾಷಣ ತಿಳಿಯದಿದ್ದರೂ, ರಶ್ಮಿ ಸಾಮಂತ್ ಕೂಡ ಜನರನ್ನು ಆಕರ್ಷಿಸಲು ಸಫಲವಾಗಲಿಲ್ಲ.

ಒಂದೇ ನಿಮಿಷದಲ್ಲಿ ಭಾಷಣ ಮುಗಿಸುತ್ತೇನೆಂದು ಹೇಳಿ, ನಾವು ಭಾರತೀಯರು ಫಕ್ಕನೆ ಎಚ್ಚರವಾಗುವುದಿಲ್ಲ. ನಾವು ಪ್ರಯಾಣಿಸುತ್ತಿರುವ ದೋಣಿಯಲ್ಲಿ ತೂತು ಬಿದ್ದರೂ, ಪಕ್ಕದ ದೋಣಿ ತೂತು ಬಿದ್ದಿದ್ಯಾ ಎಂದು ನೋಡುತ್ತಾರೆ. ಸಮಸ್ಯೆ ತಮ್ಮ ಬುಡಕ್ಕೆ ಬರೋ ವರೆಗೂ ಎಚ್ಚರ ಆಗೋಲ್ಲ. ಭಯೋತ್ಪಾದನೆ ದೂರದ ಕಾಶ್ಮೀರದಲ್ಲಿ ಮಾತ್ರ ಇದೆಯೆಂದು ನಾವು ಸುಖವಾಗಿದ್ದೇವೆ. ಕಳೆದ ಬಾರಿ ಸಿಎಎ ಎನ್ನಾರ್ಸಿ ಕಾಯ್ದೆ ಬಂದಾಗ ನಮ್ಮದೇ ಮಂಗಳೂರಿನಲ್ಲಿ ಪ್ರತಿಭಟನೆ ನಡೆದು ಗಲಾಟೆಯಾಗಿತ್ತು. ಯಾಕೆ ಇವರು ಪ್ರತಿಭಟನೆ ಮಾಡಿದ್ರು, ಆಗ ನಮ್ಮ ಜನ ಯಾಕೆ ಅದರ ಪರವಾಗಿ ಪ್ರತಿಭಟನೆ ಮಾಡಲಿಲ್ಲ. ಕಾಶ್ಮೀರದಲ್ಲಿ 20 ಪಾಕಿಸ್ತಾನಿ ಮಹಿಳೆಯರು ಮದುವೆಯಾಗಿ ಬಂದು ದೀರ್ಘಾವಧಿ ವೀಸದಲ್ಲಿದ್ದರೂ, ಅವರಿಗೆ ನೂರಕ್ಕೂ ಹೆಚ್ಚು ಮಕ್ಕಳಾಗಿ ಅವರೆಲ್ಲ ಭಾರತೀಯ ಪ್ರಜೆಗಳಾಗಿದ್ದಾರೆ. ಸಿಎಎ, ಎನ್ನಾರ್ಸಿ ಕಾಯ್ದೆ ಇರುತ್ತಿದ್ದರೆ, ಹೀಗಾಗುತ್ತಿತ್ತೇ.. ಇಂಥ ಕಾಯ್ದೆ ಇದರ ಮೊದಲೇ ಬರಬೇಕಿತ್ತು. ದುರಂತ ಅಂದ್ರೆ, ನಮ್ಮ ನಡುವೆ ಇದ್ದವರು ಈ ಕಾಯ್ದೆ ಬರಬಾರದೆಂದು ನಮ್ಮದೇ ನೆಲದಲ್ಲಿ ಹೋರಾಟ ನಡೆಸುತ್ತಾರೆ ಎಂದು ಹೇಳಿ ಮುಗಿಸಿರು.

ರಶ್ಮಿ ಸಾಮಂತ್ ಅವರಲ್ಲಿ ವಿಚಾರ ಇದ್ದರೂ, ಮಳೆಯ ನಡುವೆ ಸ್ಪೀಕರ್ ಕೂಡ ಸರಿ ಇಲ್ಲದೆ ಜನರಿಗೆ ಭಾಷಣ ಕೇಳುತ್ತಿರಲಿಲ್ಲ. ಭಾಷಣವನ್ನು ಆದಷ್ಟು ಬೇಗ ಮುಗಿಸುವುದಕ್ಕೇ ಆದ್ಯತೆ ನೀಡಿದಂತೆ ಮಾತನಾಡಿ ಮುಗಿಸಿದ್ರು. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡುತ್ತಾರೆಂದು ಎಲ್ಲರೂ ನಿರೀಕ್ಷಿಸಿ ಕಾದು ಕುಳಿತಿದ್ದರೂ ಅವರಿಗೆ ಭಾಷಣಕ್ಕೆ ಅವಕಾಶ ನೀಡಲಿಲ್ಲ. ಎದುರಲ್ಲಿ ಕುಳಿತಿದ್ದ ಸ್ವಾಮೀಜಿಗಳಂತೂ ಲೆಕ್ಕಕ್ಕೇ ಇರಲಿಲ್ಲ. ವಜ್ರದೇಹಿ ಶ್ರೀ, ಚಿಲಿಂಬಿ ಮಠದ ಶ್ರೀಗಳು, ಒಡಿಯೂರು ಸ್ವಾಮೀಜಿ ಇದ್ದರು. ಸಿಂಧೂರ ವಿಜಯೋತ್ಸವ ಸಮಿತಿ ಸಂಚಾಲಕರಾಗಿ ಕೇಶವ ನಂದೋಡಿ ಇದ್ದರು. ಮಾಹಿತಿ ಪ್ರಕಾರ, ಬಿಜೆಪಿ ವತಿಯಿಂದ ಆಯೋಜಿಸಬೇಕಿದ್ದ ತಿರಂಗ ಯಾತ್ರೆ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಕೇವಲ ಬಿಜೆಪಿಯದ್ದೆಂದು ಬೇಡ, ಸಮಾನ ಮನಸ್ಕ ನಾಗರಿಕರೆಲ್ಲ ಬರಲಿ. ಎಲ್ಲ ನಾಗರಿಕರ ಪರವಾಗಿ ಆಯೋಜಿಸೋಣ ಎಂದು ಆರೆಸ್ಸೆಸ್ ಕಡೆಯಿಂದ ಸೂಚನೆ ಬಂದಿದ್ದರಿಂದ ಈ ರೀತಿ ಮಾಡಲಾಗಿತ್ತಂತೆ. ಹೀಗಾಗಿ ಸೇರಿದ್ದ ಜನರು ಕೂಡ ಹೋದ ಬಸವ, ಬಂದ ಬಸವ ಎನ್ನುವಂತೆ ಮನೆಯತ್ತ ನಡೆದರು.

Despite heavy rains, hundreds of people took part in the Tiranga Yatra organised by Mangalore unit of the Bharatiya Janata Party (BJP) to celebrate Operation Sindoor, on May 20.