Mangalore Bantwal Murder, SDPI, Congress resign: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ಕೊಲೆ ಸರಣಿ ; ಸರ್ಕಾರದ ವೈಫಲ್ಯ ಬಗ್ಗೆ ಮುಸ್ಲಿಂ ನಾಯಕರ ಆಕ್ರೋಶ, ಕಾಂಗ್ರೆಸ್ ಹುದ್ದೆಗಳಿಗೆ ರಾಜಿನಾಮೆ, ಎಸ್ಡಿಪಿಐನಿಂದ ಎಸ್ಪಿ ಕಚೇರಿ ಚಲೋ ಎಚ್ಚರಿಕೆ

28-05-25 10:41 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ಕೊಲೆ ಸರಣಿ ಮುಂದುವರಿದ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ತಮ್ಮ ಜವಾಬ್ದಾರಿಗಳಿಗೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಮಂಗಳೂರು, ಮೇ 28 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ಕೊಲೆ ಸರಣಿ ಮುಂದುವರಿದ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರು ತಮ್ಮ ಜವಾಬ್ದಾರಿಗಳಿಗೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಮಾಜಿ ಮೇಯರ್ ಕೆ. ಅಶ್ರಫ್ ಅವರು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಈ ಬಗ್ಗೆ ಚರ್ಚಿಸಲು ಮೇ 29ರಂದು ಮಂಗಳೂರಿನಲ್ಲಿ ಮುಸ್ಲಿಂ ನಾಯಕರು ಸಭೆ ಆಯೋಜಿಸಿದ್ದಾರೆ.

ಇದೇ ವೇಳೆ, ಮಾಜಿ ಕಾರ್ಪೊರೇಟರ್, ಕಾಂಗ್ರೆಸ್ ಕಾರ್ಪೊರೇಟರ್ ಸುಹೈಲ್ ಕಂದಕ್ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 90 ಶೇಕಡಾ ಮತ ಹಾಕಿದ ಮುಸ್ಲಿಮರಿಗೆ ಹತ್ತು ಶೇಕಡಾ ರಕ್ಷಣೆ ಕೊಡಲು ಆಗಲ್ಲ ಅಂದ್ರೆ, ನಿಮಗೆ ನಮ್ಮ ಮತದ ಮೌಲ್ಯ ಗೊತ್ತಿಲ್ಲ ಎಂದರ್ಥ. ಮುಂದಿನ ಚುನಾವಣೆಯಲ್ಲಿ ಅದನ್ನು ಅರ್ಥ ಮಾಡಿಸಿಕೊಡುವ ಜವಾಬ್ದಾರಿ ನಮ್ಮದು ಎಂದು ಹೇಳಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಟ್ವೀಟ್ ಮಾಡಿದ್ದಾರೆ. ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸ್ಥಾನದಲ್ಲಿದ್ದ ಉಳ್ಳಾಲದ ಮಹಮ್ಮದ್ ಶಮೀರ್ ಎಂಬವರು ಕೂಡ ರಾಜಿನಾಮೆ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಮತ್ತೊಬ್ಬ ಯುವ ಕಾಂಗ್ರೆಸ್ ಮುಖಂಡ ಶಂಸುದ್ದೀನ್ ಅಜ್ಜಿನಡ್ಕ ಎಂಬವರು ಕೂಡ, ಕಾಂಗ್ರೆಸ್ ಆಡಳಿತ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್ಪಿ ಕಚೇರಿ ಚಲೋ ಎಚ್ಚರಿಕೆ

ಇದೇ ವೇಳೆ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಷ್ ಆಲಿ ಹೇಳಿಕೆ ನೀಡಿದ್ದು, ಸಂಘ ಪರಿವಾರದ ಅಣತಿಯಂತೆ ಅಬ್ದುಲ್ ರಹಿಮಾನ್ ಹತ್ಯೆ ನಡೆದಿದ್ದು, ಇದಕ್ಕೆ ಭರತ್ ಕುಮ್ಡೇಲು ಕಾರಣ. ಅಶ್ರಫ್ ಕಲಾಯಿ ಹತ್ಯೆಯ ಆರೋಪಿಯೂ ಆಗಿರುವ ಭರತ್ ಕುಮ್ಡೇಲುನನ್ನು 24 ಗಂಟೆಯಲ್ಲಿ ಕೊಲೆ ಆರೋಪದಲ್ಲಿ ಬಂಧಿಸದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ.

ಸುಹಾಸ್ ಶೆಟ್ಟಿಯ ಹತ್ಯೆ ನಂತರ ಮಂಗಳೂರಿನ ಹಲವು ಕಡೆಗಳಲ್ಲಿ ಮುಸ್ಲಿಂ ಯುವಕರ ಮೇಲೆ ಹತ್ಯಾ ಯತ್ನ ನಡೆದಿತ್ತು. ಇದರ ಬಳಿಕವೂ ಭರತ್ ಕುಮ್ಡೇಲು, ಶಿವಾನಂದ ಮೆಂಡನ್ ಸೇರಿದಂತೆ ಸಂಘ ಪರಿವಾರದ ನಾಯಕರು ದ್ವೇಷದ ಭಾಷಣ ಮಾಡಿದ್ದು ಮುಸ್ಲಿಂ ಯುವಕರ ಹತ್ಯೆ ಬಗ್ಗೆ ಮುನ್ಸೂಚನೆ ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಹತ್ಯೆಯಾಗಿದೆ. ಇದರಲ್ಲಿ ಭರತ್ ಕೈವಾಡವಿದ್ದು, ಆತನ ಬಂಧನ ಆಗದಿದ್ದಲ್ಲಿ ಎಸ್ಪಿ ಕಚೇರಿ ಚಲೋ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಹೋರಾಟ ಮಾಡುತ್ತೇವೆ ಎಂದು ಮೂನಿಷ್ ಆಲಿ ಹೇಳಿದ್ದಾರೆ.

A series of alleged communal hate killings in the Dakshina Kannada district has triggered widespread anger among Muslim leaders and community members. Accusing the government of gross failure in maintaining law and order and protecting minorities, several Muslim leaders have tendered their resignations from various Congress party positions in protest.