Sudheer Kumar Reddy, Mangalore Police Commissioner: ಕರ್ನಾಟಕ ಸೂಪರ್ ಕಾಪ್ ಸುಧೀರ್ ರೆಡ್ಡಿ ಮಂಗಳೂರಿಗೆ ; ಮೊದಲ ದಿನವೇ ರೈಟ್ ಲೆಫ್ಟ್, ಕತ್ತಲಲ್ಲಿ ಗಾಡ್ ಆಫ್ ಆನರ್ ಏನ್ರೀ ಎಂದು ಗದರುತ್ತಲೇ ಚಾರ್ಜ್ !

30-05-25 10:46 pm       Mangalore Correspondent   ಕರಾವಳಿ

ಕರ್ನಾಟಕದಲ್ಲಿ ಸೂಪರ್ ಕಾಪ್, ಆಂಧ್ರ ಪ್ರದೇಶದಲ್ಲಿ ಸಿಂಗಂ ಎಂದು ಬಿರುದು ಪಡೆದಿರುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ ಆಗಮಿಸಿದ್ದಾರೆ.

ಮಂಗಳೂರು, ಮೇ 30 : ಕರ್ನಾಟಕದಲ್ಲಿ ಸೂಪರ್ ಕಾಪ್, ಆಂಧ್ರ ಪ್ರದೇಶದಲ್ಲಿ ಸಿಂಗಂ ಎಂದು ಬಿರುದು ಪಡೆದಿರುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕೋಮು ದ್ವೇಷದ ದಳ್ಳುರಿಗೆ ತುತ್ತಾಗಿರುವ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ರಾಜ್ಯ ಸರಕಾರ ಗುರುತರ ಜವಾಬ್ದಾರಿ ನೀಡಿದ್ದು, ಶುಕ್ರವಾರ ಸಂಜೆ 7 ಗಂಟೆಗೆ ಮಂಗಳೂರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

ಸುಧೀರ್ ಕುಮಾರ್ ರೆಡ್ಡಿ ಈ ಹಿಂದೆ 2018ರಲ್ಲಿ ದಕ್ಷಿಣ ಕನ್ನಡ ಎಸ್ಪಿಯಾಗಿ ಐದು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಮರಳು ಮಾಫಿಯಾ ಒತ್ತಡದಿಂದಾಗಿ ಅವರನ್ನು ಅರ್ಧದಲ್ಲಿಯೇ ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು. ಆನಂತರ, ಎರಡು ವರ್ಷ ಕರ್ತವ್ಯ ನಿರ್ವಹಿಸಿ ಕರ್ನಾಟಕದ ವ್ಯವಸ್ಥೆಯ ಬಗ್ಗೆ ರೋಸಿ ಹೋಗಿ, 2020ರಲ್ಲಿ ಆಂಧ್ರ ಪ್ರದೇಶಕ್ಕೆ ಡೆಪ್ಯುಟೇಶನ್ ಮೇಲೆ ಹೋಗಿದ್ದರು. ಡೆಪ್ಯುಟೇಶನ್ ಕರ್ತವ್ಯ ಮೂರು ವರ್ಷಕ್ಕೆ ಸೀಮಿತ ಆಗಿರುವುದರಿಂದ ಅಲ್ಲಿ ಒಂದೊಂದು ವರ್ಷ ಮೂರು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ವಿಜಿಲೆನ್ಸ್ ಎಸ್ಪಿಯಾಗಿ ಮೊದಲಿಗೆ ವಿಜಯವಾಡಕ್ಕೆ ತೆರಳಿದ್ದರು. ಅಲ್ಲಿಂದ ಕರ್ನೂಲ್ ಜಿಲ್ಲೆಯ ಎಸ್ಪಿಯಾಗಿ ನಿಯೋಜನೆಗೊಂಡಿದ್ದರು. 2022ರ ಆಗಸ್ಟ್ 19ರಂದು ಕೋಣಸೀಮಾ ಜಿಲ್ಲೆಯ ಎಸ್ಪಿಯಾಗಿದ್ದರು. ಆಬಳಿಕ ಪಶ್ಚಿಮ ಗೋದಾವರಿ ಜಿಲ್ಲೆಯ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿ ಅಲ್ಲಿನ ಅಕ್ರಮಗಳನ್ನು ಮಟ್ಟ ಹಾಕಿದ್ದು ಜನಮನ ಸೆಳೆದಿತ್ತು. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ತೆರಳುವಾಗ ಅಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಅದೇ ಕಾರಣಕ್ಕೆ ಕರ್ನಾಟಕದ ಸೂಪರ್ ಕಾಪ್ ಆಗಿದ್ದ ಸುಧೀರ್ ರೆಡ್ಡಿಯನ್ನು ಆಂಧ್ರ ಸರಕಾರ ನಿಯೋಜನೆ ಮಾಡಿತ್ತು. ಅಲ್ಲಿಗೆ ತೆರಳಿದ ಬೆನ್ನಲ್ಲೇ ಯಾವುದೇ ಮುಲಾಜೂ ಇಟ್ಟುಕೊಳ್ಳದೆ ಅಕ್ರಮಗಳನ್ನು ಮಟ್ಟ ಹಾಕಲು ಮುಂದಾಗಿದ್ದರು.

ರೌಡಿಸಂ, ಗ್ಯಾಂಬ್ಲಿಂಗ್, ಅಕ್ರಮಿಗಳ ವಿರುದ್ಧ ಕೇಸು ದಾಖಲಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ಜೈಲಿಗಟ್ಟಿದ್ದರು. ಕರ್ನೂಲ್ ಜಿಲ್ಲೆಯಲ್ಲೂ ಇಂತಹದ್ದೇ ಸ್ಥಿತಿಯಿತ್ತು. ಅಲ್ಲಿ ಹೋದ ಬೆನ್ನಲ್ಲೇ 30ಕ್ಕೂ ಹೆಚ್ಚು ಪೊಲೀಸರನ್ನು ವರ್ಗಾವಣೆ ಮಾಡಿಸಿ, ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದರು. ಲೋನ್ ಏಪ್ಸ್ ನಿಂದ ಸಂತ್ರಸ್ತರಾದ ಜನರಿಗೆ ನ್ಯಾಯ ಕೊಡಿಸುವುದಕ್ಕಾಗಿ ವಿದೇಶದಲ್ಲಿದ್ದ ಆರೋಪಿಗಳನ್ನೂ ಅರೆಸ್ಟ್ ಮಾಡಿ ತಂದಿದ್ದರು. 50ಕ್ಕೂ ಹೆಚ್ಚು ಮಂದಿಗೆ ಕೋಕಾ ಏಕ್ಟ್ (ಎಪಿ) ಹಾಕಿದ್ದರು. ಪಶ್ಚಿಮ ಗೋದಾವರಿ ಜಿಲ್ಲೆಯಿಂದ ವರ್ಗಾವಣೆ ಆದೇಶ ಬಂದಾಗ ಅಲ್ಲಿನ ಜನರು ತೆರೆದ ಜೀಪಿನಲ್ಲಿ ಸುಧೀರ್ ರೆಡ್ಡಿಯನ್ನು ಕುಳ್ಳಿರಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿಸಿದ್ದರು.  



ಇಂಜಿನಿಯರಿಂಗ್ ಪದವೀಧರ ಸುಧೀರ್; 

ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಸುಧೀರ್ ರೆಡ್ಡಿ ಪಾಂಡಿಚೇರಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು 2010ರಲ್ಲಿ ಐಪಿಎಸ್ ಅಧಿಕಾರಿಯಾಗಿದ್ದರು. ಕರ್ತವ್ಯಕ್ಕೆ ಕರ್ನಾಟಕ ಕೇಡರ್ ಆಯ್ದುಕೊಂಡು ಮೊದಲಿಗೆ ಭಟ್ಕಳದಲ್ಲಿ ಎಎಸ್ಪಿಯಾಗಿ ನಿಯೋಜನೆಗೊಂಡಿದ್ದರು. ಆನಂತರ, ಬೀದರ್ ಜಿಲ್ಲೆಗೆ ಎಸ್ಪಿಯಾಗಿ ಭಡ್ತಿ ಪಡೆದು ಬಳಿಕ ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2018ರಲ್ಲಿ ಬಂಟ್ವಾಳದಲ್ಲಿ ಕೋಮು ವೈಷಮ್ಯದ ಕೊಲೆಯಿಂದಾಗಿ ನಲುಗಿದ್ದಾಗಲೇ ಸುಧೀರ್ ರೆಡ್ಡಿ ಆಗಮನವಾಗಿತ್ತು. ಶರತ್ ಮಡಿವಾಳ ಪ್ರಕರಣದಲ್ಲಿ ಯಾರೂ ಊಹಿಸದ ರೀತಿಯಲ್ಲಿ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ್ದು ಅವರ ಕಾರ್ಯಶೈಲಿಯನ್ನು ತೋರಿಸಿತ್ತು. ಆದರೆ ಬಂಟ್ವಾಳದ ಮರಳು ಮಾಫಿಯಾ, ಆಗಿನ ಉಸ್ತುವಾರಿ ಸಚಿವ ರಮಾನಾಥ ರೈಗೆ ಒತ್ತಡ ಹೇರಿ ಸುಧೀರ್ ರೆಡ್ಡಿಯನ್ನು ಅರ್ಧದಲ್ಲೇ ವರ್ಗಾವಣೆ ಆಗುವಂತೆ ಮಾಡಿತ್ತು. ಆವಾಗ ಜಾಲತಾಣದಲ್ಲಿ ವೀ ವಾಂಟ್ ಸುಧೀರ್ ರೆಡ್ಡಿ ಎನ್ನುವ ಅಭಿಯಾನವೂ ನಡೆದಿತ್ತು.

ಮೊದಲ ದಿನವೇ ಪೊಲೀಸರಿಗೆ ಬಿಸಿ

ಶುಕ್ರವಾರ ಸಂಜೆ 6.30ರ ವೇಳೆಗೆ ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಗೆ ಸುಧೀರ್ ರೆಡ್ಡಿ ಆಗಮಿಸಿದ್ದರು. ಮಂಗಳೂರು ಪೊಲೀಸರು ಹಿರಿಯ ಅಧಿಕಾರಿಗೆ ಗಾಡ್ ಆಫ್ ಆನರ್ ಕೊಡಲು ಸಿದ್ಧತೆ ನಡೆಸಿದ್ದರು. ಇಬ್ಬರು ಡಿಸಿಪಿಗಳು ಹಿರಿಯ ಅಧಿಕಾರಿ ಬರುತ್ತಾರೆಂದು ಹೊರಗಡೆಯೇ ಕಾದು ಕುಳಿತಿದ್ದರು. ಆದರೆ, ಗಾಡ್ ಆಫ್ ಆನರ್ ಕೊಡಿಸಲು ಪೇದೆಗಳನ್ನು ನಿಯೋಜಿಸಿದ್ದನ್ನು ನೋಡಿ, ಏನ್ರೀ 6 ಗಂಟೆ ಕಳೀತು, ಕತ್ತಲಲ್ಲಿ ಗಾಡ್ ಆಫ್ ಆನರ್ ಇದ್ಯಾ.. ಹೋಗ್ರೀ ಅಂತ ಪೊಲೀಸರತ್ತ ಬಿರು ನುಡಿಗಳನ್ನಾಡುತ್ತಲೇ ಒಳನಡೆದರು. ನಿರ್ಗಮಿತ ಅನುಪಮ್ ಅಗರ್ವಾಲ್ ಅವರಿಂದ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಧಿಕಾರಿಗಳನ್ನು ಕರೆದು ಮೀಟಿಂಗ್ ಮಾಡಿದ್ದು, ರೈಟ್ ಲೆಫ್ಟ್ ತೆಗೆದಿದ್ದಾರೆ. ಆಮೂಲಕ ಮೊದಲ ದಿನವೇ ಬಿಸಿಯನ್ನೂ ಮುಟ್ಟಿಸಿದ್ದಾರೆ. ಬಹುತೇಕ ಪ್ರಮುಖ ಠಾಣೆಗಳ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡುವ ಸಾಧ್ಯತೆ ಗೋಚರಿಸಿದೆ.

Renowned as the "Super Cop" in Karnataka and "Singam" in Andhra Pradesh, IPS officer Sudheer Kumar Reddy has officially taken charge as the Mangaluru City Police Commissioner. Arriving in the communally sensitive city on Friday at 7 PM, Reddy assumes the high-stakes role assigned by the state government.