ದ್ರಾವಿಡ ನಾಡಿನ ಸಿಎಂ ಜೋಸೆಫ್ ವಿಜಯ್ ದಿಢೀರ್ ಕೊಲ್ಲೂರಿಗೆ ; ಬಿಝಿ ಮಧ್ಯೆಯೇ ದೆಹಲಿಯಿಂದ ಮೂಕಾಂಬಿಕೆ ದರ್ಶನಕ್ಕೆ, ಕೊಲ್ಲೂರು ದೇವಿಗೆ ಚಿನ್ನದ ಖಡ್ಗ ನೀಡಿದ್ದ ಎಂಜಿಆರ್! 

12-06-26 02:56 pm       HK News Staffer   ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೋಸೆಫ್ ವಿಜಯ್ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಸ್ವಾಗತಿಸಿದ್ದಾರೆ.

ಮಂಗಳೂರು, ಜೂನ್ 12: ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡುವ ಸಲುವಾಗಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೋಸೆಫ್ ವಿಜಯ್ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಸ್ವಾಗತಿಸಿದ್ದಾರೆ. 

ದೆಹಲಿಯಿಂದ ಮಂಗಳೂರಿಗೆ ವಿಶೇಷ ವಿಮಾನದ ಮೂಲಕ  ವಿಜಯ್ ಆಗಮಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮುಖಂಡರು, ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಆನಂತರ, ರಸ್ತೆ ಮಾರ್ಗವಾಗಿ ಸಿಎಂ ವಿಜಯ್ ಉಡುಪಿ ಮೂಲಕ ಬೈಂದೂರು ತಾಲೂಕಿನ ಕೊಲ್ಲೂರು ದೇವಸ್ಥಾನಕ್ಕೆ ತೆರಳಿದ್ದಾರೆ. 

ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ವಿಜಯ್ ಎರಡು ಬಾರಿ ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ. ಅಲ್ಲದೆ,  ತೀವ್ರ ಚಟುವಟಿಕೆ ನಿರತರಾಗಿರುವ ಅವರಿಗೆ, ಸ್ವಂತ ರಾಜ್ಯದಲ್ಲೇ ಸುತ್ತಾಡಲು ಇನ್ನು ಸಮಯ ಸಿಕ್ಕಿಲ್ಲ. ಆದರೆ ಇದರ ನಡುವಲ್ಲೇ ನೆರೆ ರಾಜ್ಯ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬರುತ್ತಿರುವುದು ಕುತೂಹಲ ಮೂಡಿಸಿದೆ.

ಫಲಿತಾಂಶಕ್ಕೂ ಮುನ್ನ ತಿರುಚೆಂದೂರಿನ ಮುರುಗನ್ ದೇವಸ್ಥಾನ ಹಾಗೂ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ವಿಜಯ್, ಸಿಎಂ ಆದ ಬಳಿಕ ಯಾವುದೇ ದೇವಸ್ಥಾನಕ್ಕೆ ಹೋಗಿರಲಿಲ್ಲ. ಇದೀಗ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ಬಳಿಕ ಶುಭ ಶುಕ್ರವಾರವೇ ಮೂಕಾಂಬಿಕೆಯ ಸನ್ನಿಧಿಗೆ ಬರುತ್ತಿದ್ದಾರೆ. ಅನಿರೀಕ್ಷಿತ ಎನ್ನುವಂತೆ, ಜೋಸೆಫ್ ವಿಜಯ್ ದಿಢೀರ್ ಕೊಲ್ಲೂರು ದೇವಿಯ ದರ್ಶನಕ್ಕೆ ಬರುತ್ತಿರುವುದೇಕೆ ಎನ್ನುವುದು ಕುತೂಹಲ ಸೃಷ್ಟಿಸಿದೆ. ತಮಿಳುನಾಡು ಸಿಎಂ ಭೇಟಿ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ‌. 

ಕೊಲ್ಲೂರಿಗೆ ಚಿನ್ನದ ಖಡ್ಗ ನೀಡಿದ್ದ ಎಂಜಿಆರ್ ! 

ತಮಿಳು ನಟರಾಗಿ ಸಿಎಂ ಸ್ಥಾನಕ್ಕೇರಿದ್ದ ಎಂಜಿಆರ್ ದ್ರಾವಿಡರ ಪಾಲಿಗೆ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದವರು. ಎಂಜಿಆರ್ ಕೂಡ ಸಿಎಂ ಆಗಿದ್ದಾಗ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದರು. ತನ್ನ ಹತ್ತು ವರ್ಷದ ಆಡಳಿತದಲ್ಲಿ ಹಲವು ಬಾರಿ ಕೊಲ್ಲೂರಿಗೆ ಬಂದಿದ್ದ ಎಂಜಿಆರ್, ಕೊಲ್ಲೂರು ದೇವಿಗೆ ಒಂದು ಕೇಜಿ ಚಿನ್ನದಿಂದ ಮಾಡಲ್ಪಟ್ಟ ಖಡ್ಗವನ್ನು ದಾನವಾಗಿ ನೀಡಿದ್ದರು. 

ಎಂಜಿಆರ್ ಬಳಿಕ ಅವರ ಉತ್ತರಾಧಿಕಾರಿಯಾಗಿದ್ದ ಜಯಲಲಿತಾ ಕೂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದರು. ಧರ್ಮ ಜ್ಯೋತಿಷ್ಯದ ಮೇಲೆ ಜಯಲಲಿತಾಗೆ ಅಪಾರ ನಂಬಿಕೆ ಇತ್ತು. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಜಯಲಲಿತಾ 2004ರಲ್ಲಿ ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಬಂದಿದ್ದರು. ದೇವಿಗೆ ಪ್ರಿಯವಾದ ಚಂಡಿಕಾ ಹೋಮವನ್ನು ಕೂಡ ಮಾಡಿಸಿದ್ದರು. ಶುಕ್ರವಾರದ ವಿಶೇಷ ಅನ್ನ ಸಂತರ್ಪಣೆಗೆ 30 ಸಾವಿರ ರೂಪಾಯಿ ದೇಣಿಗೆ ಮತ್ತು 1 ಟನ್ ತುಪ್ಪವನ್ನು ಅರ್ಪಿಸಿದ್ದರು. ಜಯಲಲಿತಾ ಅವರ ಕಾಲದಲ್ಲೇ ತಮಿಳುನಾಡಿನ ಹಲವು ನಗರಗಳಿಂದ ಕೊಲ್ಲೂರಿಗೆ ನೇರ ಸರ್ಕಾರಿ ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿತ್ತು. ಆನಂತರ ಕೊಲ್ಲೂರಿಗೆ ತಮಿಳುನಾಡು ಕಡೆಯ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.