ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್ ಜೋಸೆಫ್; ದೇವಿಗೆ ಒಂದು ಕೆಜಿ 600 ಗ್ರಾಮ್ ತೂಕದ ಬೆಳ್ಳಿ ಕಡಗ ಅರ್ಪಣೆ

12-06-26 04:31 pm       HK News Staffer   ಕರಾವಳಿ

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ, ಒಂದು ಕೇಜಿ 600 ಗ್ರಾಮ್ ತೂಕದ ಬೆಳ್ಳಿ ಕಡಗವನ್ನು ದೇವಿಗೆ ಅರ್ಪಿಸಿದ್ದಾರೆ.

ಉಡುಪಿ, ಜೂನ್ 12: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವೇಳೆ, ಒಂದು ಕೇಜಿ 600 ಗ್ರಾಮ್ ತೂಕದ ಬೆಳ್ಳಿ ಕಡಗವನ್ನು ದೇವಿಗೆ ಅರ್ಪಿಸಿದ್ದಾರೆ. 

ಮಧ್ಯಾಹ್ನ 3.30ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಉಡುಪಿ ಜಿಲ್ಲೆಯ ಕೊಲ್ಲೂರಿಗೆ ಆಗಮಿಸಿದ ವಿಜಯ್ ಶರ್ಟ್, ಬನಿಯಾನ್ ಕಳಚಿ ಕೇವಲ ಲುಂಗಿ ಮತ್ತು ಶಲ್ಯವನ್ನು ಮೈಗೆ ಸುತ್ತಿಕೊಂಡು ದೇವರ ದರ್ಶನ ಮಾಡಿದ್ದಾರೆ. ದೇವರಿಗೆ ಸಂಕಲ್ಪ ಪೂಜೆ ಮಾಡಿ ಕೇವಲ 20 ನಿಮಿಷ ಮಾತ್ರ ದೇವಸ್ಥಾನದಲ್ಲಿ ಕಳೆದಿದ್ದಾರೆ. 

ದೇವರ ದರ್ಶನ ಸಂದರ್ಭದಲ್ಲಿ ವಿಜಯ್ ಅವರು 1 ಕೇಜಿ 600 ಗ್ರಾಮ್ ತೂಕದ ಬೆಳ್ಳಿ ಕಡಗವನ್ನು ಅರ್ಪಿಸಿದ್ದಾರೆಂದು ಕೊಲ್ಲೂರು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ಮಾಧ್ಯಮಕ್ಕೆ ತಿಳಿಸಿದ್ದಾರೆ. ಕೊಲ್ಲೂರು ದೇಗುಲ ದೇಶದ ಪ್ರಖ್ಯಾತ ಶಕ್ತಿಪೀಠಗಳಲ್ಲಿ ಒಂದಾಗಿದ್ದು ತಮಿಳುನಾಡು ಮತ್ತು ಕೇರಳದ ಅಸಂಖ್ಯಾತ ಭಕ್ತರು ಆಗಮಿಸುತ್ತಾರೆ. ಹಿಂದೆ ತಮಿಳುನಾಡು ಸಿಎಂ ಆಗಿದ್ದ ಎಂಜಿಆರ್, ಜಯಲಲಿತಾ ಕೂಡ ಹಲವು ಬಾರಿ ಕೊಲ್ಲೂರಿಗೆ ಭೇಟಿ ನೀಡಿದ್ದರು.‌ ಎಂಜಿಆರ್ ಅವರು ಒಂದು ಕೇಜಿಯ ಚಿನ್ನದ ಖಡ್ಗವನ್ನು ದೇವಿಗೆ ಅರ್ಪಿಸಿದ್ದರು. 

ಈ ಬಾರಿ ಜೋಸೆಫ್ ವಿಜಯ್ ಸಿಎಂ ಹುದ್ದೆಗೇರಿ ಒಂದು ತಿಂಗಳು ಭರ್ತಿ ಆಗುತ್ತಲೇ ದಿಢೀರ್ ಆಗಿ ಕೊಲ್ಲೂರಿಗೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದು ವಿಶೇಷ. ‌ವಿಜಯ್ ಹೆತ್ತವರು ಚುನಾವಣೆಗೂ ಮುನ್ನ ಹರಕೆ ಹೊತ್ತಿದ್ದು ಪ್ರಾರ್ಥನೆ ಫಲಿಸಿದ ಹಿನ್ನೆಲೆಯಲ್ಲಿ ವಿಜಯ್ ಈಗ ದೇಗುಲಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.