ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸಂಚಾರ ಎಂದಿನಂತೆ, ಯಾವುದೇ ಬಲವಂತದ ಬಂದ್ ನಡೆದಿಲ್ಲ- ಎಸ್ಪಿ ಅರುಣ್ ಸ್ಪಷ್ಟನೆ

25-08-26 02:55 pm       HK News Staffer   ಕರಾವಳಿ

ದರ್ಬೆಯಲ್ಲಿ ಝೆರಾಕ್ಸ್ ಅಂಗಡಿ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದ ಪೊಲೀಸರ ನಡೆಯನ್ನು ಖಂಡಿಸಿ ಪುತ್ತೂರು ನಗರದಲ್ಲಿ ಹಿಂದು ಸಂಘಟನೆಗಳು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು ಬಹುತೇಕ ಅಂಗಡಿ, ವ್ಯಾಪಾರ ಸಂಕೀರ್ಣಗಳು ಬಂದ್ ಆಗಿವೆ.

ಪುತ್ತೂರು, ಆ.25: ದರ್ಬೆಯಲ್ಲಿ ಝೆರಾಕ್ಸ್ ಅಂಗಡಿ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದ ಪೊಲೀಸರ ನಡೆಯನ್ನು ಖಂಡಿಸಿ ಪುತ್ತೂರು ನಗರದಲ್ಲಿ ಹಿಂದು ಸಂಘಟನೆಗಳು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು ಬಹುತೇಕ ಅಂಗಡಿ, ವ್ಯಾಪಾರ ಸಂಕೀರ್ಣಗಳು ಬಂದ್ ಆಗಿವೆ. 

ಹಿಂದೂ ಜಾಗರಣ ವೇದಿಕೆ ವತಿಯಿಂದ ಸ್ವಯಂಪ್ರೇರಿತ ಬಂದ್ ಕರೆ ನೀಡಲಾಗಿದ್ದು ಬಿಜೆಪಿ, ವಿವಿಧ ಹಿಂದೂ ಪರ ಸಂಘಟನೆಗಳು ಹಾಗೂ ಬಿಎಂಎಸ್ ಆಟೋ ಯೂನಿಯನ್ ಬೆಂಬಲ ವ್ಯಕ್ತಪಡಿಸಿವೆ. ಪುತ್ತೂರು ನಗರದ ಹಲವು ವರ್ತಕರು ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದು, ಬೆರಳೆಣಿಕೆಯಷ್ಟೇ ಅಂಗಡಿಗಳು ತೆರೆದಿವೆ. ರಸ್ತೆಯಲ್ಲಿ ಆಟೋ ರಿಕ್ಷಾಗಳ ಸಂಚಾರ ಗಣನೀಯ ಕಡಿಮೆಯಾಗಿದ್ದು ಯಾವುದೇ ವಾಹನಗಳ ಓಡಾಟಕ್ಕೆ ತೊಂದರೆ ಇಲ್ಲ. ಇತ್ತ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರ ಅಂಗಡಿಗಳೂ ಬಂದ್ ಆಗಿವೆ. 

ಬಂದ್ ಹಾಗೂ ಈದ್ ಮಿಲಾದ್ ಒಂದೇ ದಿನ ಬಂದಿರುವುದರಿಂದ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಒಬ್ಬರು ಹೆಚ್ಚುವರಿ ಎಸ್‌ಪಿ, 1 ಡಿವೈಎಸ್‌ಪಿ, 8 ಪಿಎಸ್‌ಐ, 10 ಎಎಸ್‌ಐ ಹಾಗೂ 50 ಸಿಬ್ಬಂದಿ ಹಾಗೂ ಅಲ್ಲದೆ ಹೆಚ್ಚುವರಿಯಾಗಿ 5 ಕೆಎಸ್‌ಆರ್‌ಪಿ ತುಕಡಿ, 3 ಡಿಎಆರ್ ತುಕಡಿ ಮತ್ತು 1 ಸ್ಪೆಷಲ್ ಆಕ್ಷನ್ ಫೋರ್ಸ್ ತುಕಡಿಯನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ. 

ಇದೇ ವೇಳೆ, ಪುತ್ತೂರಿಗೆ ಎಸ್ಪಿ ಅರುಣ್ ಭೇಟಿ ನೀಡಿದ್ದು ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು. ಮಾಧ್ಯಮಕ್ಕೆ ಮಾತನಾಡಿದ ಅವರು, ಪುತ್ತೂರಿನಲ್ಲಿ ಬೆಳಗ್ಗೆ ಈದ್ ಮಿಲಾದ್ ಮೆರವಣಿಗೆ ಅತ್ಯಂತ ಶಾಂತ ರೀತಿಯಿಂದ ನೆರವೇರಿದೆ. ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದಲ್ಲಿ ಯಾವುದೇ ರೀತಿಯ ಬಲವಂತದ ಬಂದ್ ನಡೆದಿಲ್ಲ. ಸಂಘಟನೆಯವರು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದಾರೆ. ಪ್ರಸ್ತುತ ಪುತ್ತೂರಿನಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ” ಎಂದರು.

ದರ್ಬೆ ಪ್ರಕರಣದ ತನಿಖೆ ಕುರಿತು ಸ್ಪಷ್ಟಪಡಿಸಿದ ಅವರು, “ನಾವು ಎಲ್ಲರನ್ನೂ ಕಾನೂನಿನ ಚೌಕಟ್ಟಿನಲ್ಲಿ ಒಂದೇ ರೀತಿಯಾಗಿ ನೋಡುತ್ತೇವೆ. ತಪ್ಪು ಮಾಡಿದವರ ವಿರುದ್ಧ ಕಾನೂನು ರೀತಿಯಲ್ಲಿ ಬಂಧನ ಪ್ರಕ್ರಿಯೆ ನಡೆಯಲಿದೆ, ಅಗತ್ಯವಿದ್ದ ಪ್ರಕರಣಗಳಲ್ಲಿ ನೋಟೀಸ್ ನೀಡಿ ವಿಚಾರಣೆ ನಡೆಸಲಾಗುವುದು” ಎಂದು ಹೇಳಿದರು.