ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಯಾರು..? ಮಿಥುನ್ ರೈ, ಐವಾನ್ ಡಿಸೋಜ ಮುಂಚೂಣಿಯಲ್ಲಿ ; ಇನ್ನೊಂದು ವಾರದಲ್ಲಿ ಆಯ್ಕೆ ಸಾಧ್ಯತೆ  

26-08-26 10:48 pm       HK News Desk   ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಯಾರು ಆಯ್ಕೆಗೊಳ್ಳುತ್ತಾರೆಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಪಕ್ಷದ ಒಳಗಡೆ ಶುರುವಾಗಿದೆ. ಇನ್ನೇನು ಒಂದು ವಾರದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಿ ಕೆಪಿಸಿಸಿ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ಮಿಥುನ್ ರೈ ಜಿಲ್ಲಾಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಮಂಗಳೂರು, ಆಗಸ್ಟ್ 24 ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಯಾರು ಆಯ್ಕೆಗೊಳ್ಳುತ್ತಾರೆಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಪಕ್ಷದ ಒಳಗಡೆ ಶುರುವಾಗಿದೆ. ಇನ್ನೇನು ಒಂದು ವಾರದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಸರು ಅಂತಿಮಗೊಳಿಸಿ ಕೆಪಿಸಿಸಿ ಪಟ್ಟಿ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ಮಿಥುನ್ ರೈ ಜಿಲ್ಲಾಧ್ಯಕ್ಷರಾಗಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಇತ್ತೀಚೆಗೆ ಎಐಸಿಸಿ ಕಡೆಯಿಂದ ವೀಕ್ಷಕರಾಗಿ ಕೇರಳದ ಶಾಸಕ ಜಯಂತ್ ಮತ್ತು ಕೆಪಿಸಿಸಿ ಕಡೆಯಿಂದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮತ್ತಿತರರು ಆಗಮಿಸಿದ್ದರು. ಪಕ್ಷದ ಎಲ್ಲ ಬ್ಲಾಕ್ ಪದಾಧಿಕಾರಿಗಳು, ನಗರ ಘಟಕದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಿದ ಪಕ್ಷದ ಸದಸ್ಯರನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇದಕ್ಕೂ ಮುನ್ನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಯಾರು ಆಕಾಂಕ್ಷಿ ಇದ್ದೀರಿ ಎನ್ನುವ ನೆಲೆಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಈ ವೇಳೆ ಹಲವರು ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನುವ ಮಾಹಿತಿಗಳಿದ್ದವು. ಆದರೆ ಆರು ಮಂದಿಯ ಹೆಸರನ್ನು ನಾವು ಫೈನಲ್ ಮಾಡಿ ಸೂಚಿಸುತ್ತೇವೆ ಎಂದು ವೀಕ್ಷಕರು ತಿಳಿಸಿದ್ದರು.

ಮಾಹಿತಿ ಪ್ರಕಾರ, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಿಥುನ್ ರೈ, ಪದ್ಮರಾಜ್ ಪೂಜಾರಿ, ಪಿಯೂಶ್ ರೋಡ್ರಿಗಸ್, ಶಶಿಧರ ಹೆಗ್ಡೆ, ಲುಕ್ಮಾನ್ ಬಂಟ್ವಾಳ, ಐವಾನ್ ಡಿಸೋಜ, ಎಂ.ಜಿ.ಹೆಗ್ಡೆ, ಸುಳ್ಯದ ವೆಂಕಪ್ಪ ಗೌಡ, ಪುತ್ತೂರಿನ ವಿಶ್ವನಾಥ ರೈ, ವಿಟ್ಲದ ಡಾ.ರಾಜಾರಾಮ್ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಯಾರು ಹಿತವರು ಮತ್ತು ಯಾಕಾಗಿ ಎನ್ನುವ ನೆಲೆಯಲ್ಲಿ ಪಕ್ಷದ ಪ್ರಮುಖರಲ್ಲಿ ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿದ್ದರು. ಒಂದು ರೀತಿಯಲ್ಲಿ ಪಾರದರ್ಶಕ ಮತ್ತು ಪ್ರಜಾಪ್ರಭುತ್ವ ನೆಲೆಯಲ್ಲಿ ಅಧ್ಯಕ್ಷರ ಆಯ್ಕೆಗೆ ವೇದಿಕೆ ರೆಡಿ ಮಾಡಲಾಗಿತ್ತು. ಈ ಕುರಿತು ವರದಿಯನ್ನು ದೆಹಲಿ ಹೈಕಮಾಂಡ್ ನಾಯಕರ ಮಟ್ಟದ ಆಯ್ಕೆ ಸಮಿತಿಗೆ ಸಲ್ಲಿಸಲಾಗಿತ್ತು. 

ಹಾಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಳೆದ ಒಂಬತ್ತು ವರ್ಷಗಳಿಂದ ಈ ಸ್ಥಾನದಲ್ಲಿದ್ದಾರೆ. ಇದೇ ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಈಗ ಮೆಸ್ಕಾಂ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಬಿಲ್ಲವ ಸಮುದಾಯದ ಹರೀಶ್ ಕುಮಾರ್ ಮೂರು ಅವಧಿಗೆ ಅಧ್ಯಕ್ಷರಾಗಿದ್ದರಿಂದ ಮತ್ತೊಮ್ಮೆ ಅದೇ ಸಮುದಾಯದವರನ್ನು ಪರಿಗಣಿಸುತ್ತಾರೆಯೇ ಎಂಬ ಪ್ರಶ್ನೆ ಇದೆ. ಸದ್ಯ ಮಿಥುನ್ ರೈ ಬೆಂಬಲಿಗರು ತಮ್ಮವರೇ ಜಿಲ್ಲಾಧ್ಯಕ್ಷರು ಎಂದರೆ, ಇತ್ತ ಐವಾನ್ ಡಿಸೋಜ ಬೆಂಬಲಿಗರು ಕೂಡ ತಮ್ಮವರೇ ಅಧ್ಯಕ್ಷ ಎಂದು ಹೇಳಿ ತಿರುಗಾಡುತ್ತಿದ್ದಾರೆ. ಇದೇನಿದ್ದರೂ ಪಕ್ಷದ ಪಾಲಿಗೆ ಮುಂದಿನ ಚುನಾವಣೆಯೇ ಮುಖ್ಯವಾಗಿದ್ದು, ಜಿಲ್ಲಾಧ್ಯಕ್ಷರ ಆಯ್ಕೆಗೆ ಜಾತಿ ಪ್ರಭಾವ, ಹಣಬಲ ಇತ್ಯಾದಿ ನೆಲೆಯಲ್ಲಿ ಚುನಾವಣೆ ಗೆಲ್ಲಿಸುವುದನ್ನೇ ಮಾನದಂಡ ಇಟ್ಟುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದಲ್ಲದೆ, ಅಧ್ಯಕ್ಷರಾದವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ಷರತ್ತನ್ನು ಪಕ್ಷದ ನಾಯಕರು ಮುಂದಿಟ್ಟಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ಮುಖ್ಯವಾಗಬೇಕು ಎಂಬ ವಾದ ಸರಣಿಯನ್ನು ರಾಜ್ಯ ನಾಯಕರು ಹೇಳುತ್ತಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಈ ವಾದ ಸರಣಿಗಳು ಬೆಲೆ ಕಳಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ. ಜಿಲ್ಲಾಧ್ಯಕ್ಷರಾದವರು ಚುನಾವಣೆಗೆ ನಿಂತವರೂ ಇದ್ದಾರೆ. ಮತ್ತೊಂದೆಡೆ ಕ್ರಿಸ್ತಿಯನ್ ಲಾಬಿ ಜೋರಾಗಿದ್ದು, ಈ ನೆಲೆಯಲ್ಲಿ ಐವಾನ್ ಡಿಸೋಜ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿದ್ದ ಐವಾನ್ ಡಿಸೋಜಗೆ ಹಾಲಿ ಸಿಎಂ ಡಿಕೆಶಿ ಅಭಯ ಸಿಗುತ್ತಾ ಎನ್ನುವ ಪ್ರಶ್ನೆ ಇದೆ. ಈ ನೆಲೆಯಲ್ಲಿ ಮಿಥುನ್ ರೈ ಕೈ ಮೇಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.