ಕೆಆರ್ ಐಡಿಎಲ್ ಕಮಿಷನ್‌ ಆರೋಪದ ಬಗ್ಗೆ ಸಚಿವ ಖಂಡ್ರೆ ತನಿಖೆಗೆ ಸೂಚನೆ ; 7 ಪರ್ಸೆಂಟ್ ಅಲ್ಲ, ಸಂಸ್ಥೆಯ ನಿರ್ವಹಣೆಗಾಗಿ ಹತ್ತು ಶೇ. ಕಮಿಷನ್ ಪಡೆಯುವುದು ಸತ್ಯ! ಸಂಸ್ಥೆಯ ಎಂಡಿಯಿಂದಲೇ ಸ್ಪಷ್ಟನೆ

01-09-26 09:05 pm       HK News Staffer   ಕರಾವಳಿ

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆ.ಆರ್.ಐ.ಡಿ.ಎಲ್) ಸಂಸ್ಥೆಯ ಇಂಜಿನಿಯರುಗಳು ಉಸ್ತುವಾರಿ ಸಚಿವರ ಹೆಸರಲ್ಲಿ ಕಮಿಷನ್‌ ಪಡೆಯುತ್ತಿದ್ದಾರೆಂಬ ಶಾಸಕ ಅಶೋಕ್ ರೈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ ಬಿ. ಖಂಡ್ರೆ ತನಿಖೆಗೆ ಸೂಚಿಸಿದ್ದಾರೆ.

ಮಂಗಳೂರು, ಸೆ.1: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆ.ಆರ್.ಐ.ಡಿ.ಎಲ್) ಸಂಸ್ಥೆಯ ಇಂಜಿನಿಯರುಗಳು ಉಸ್ತುವಾರಿ ಸಚಿವರ ಹೆಸರಲ್ಲಿ ಕಮಿಷನ್‌ ಪಡೆಯುತ್ತಿದ್ದಾರೆಂಬ ಶಾಸಕ ಅಶೋಕ್ ರೈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಈಶ್ವರ ಬಿ. ಖಂಡ್ರೆ ತನಿಖೆಗೆ ಸೂಚಿಸಿದ್ದಾರೆ. 

ಉಸ್ತುವಾರಿ ಸಚಿವರ ಅಥವಾ ಇಲಾಖೆಯ ಸಚಿವರ ಹೆಸರಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬಂದಿ ಅಥವಾ ಅಧಿಕಾರಿಗಳು ಹಣ ವಸೂಲಿ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ಕೆಆರ್ ಐಡಿಎಲ್ ಕಾರ್ಯ ನಿರ್ವಾಹಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂಬ ಆರೋಪದಲ್ಲಿ ಸತ್ಯಾಂಶವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಸೂಪರಿಂಟೆಂಡೆಂಟ್ ಇಂಜಿನಿಯರ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ತ್ರಿಸದಸ್ಯ ತಂಡ ರಚಿಸಿ, ಒಂದೊಮ್ಮೆ ಭ್ರಷ್ಟಾಚಾರ ನಡೆಸುತ್ತಿರುವುದು ನಿಜವಾದಲ್ಲಿ ಶಿಸ್ತು ಕ್ರಮದ ಶಿಫಾರಸಿನೊಂದಿಗೆ ಏಳು ದಿನದೊಳಗೆ ವರದಿ ಸಲ್ಲಿಸುವಂತೆ ಸಚಿವರು ಇಲಾಖೆಯ ಕಾರ್ಯದರ್ಶಿ ಮತ್ತು ಕೆಆರ್ ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ. 

ಹತ್ತು ಶೇ. ಕಮಿಷನ್‌ ಪಡೆಯುತ್ತೇವೆ..! 

ಇದೇ ವೇಳೆ, ಮಂಗಳೂರು ಕೆಆರ್ ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದು ಸಂಸ್ಥೆಗೆ ಪ್ರತ್ಯೇಕ ಅನುದಾನ ಇಲ್ಲದಿರುವುದರಿಂದ ಗುತ್ತಿಗೆ ಕಾಮಗಾರಿಯಲ್ಲೇ ಹತ್ತು ಶೇಕಡಾ ಕಮಿಷನ್ ಕಡಿತ ಮಾಡುತ್ತಿದ್ದು ಇದು ಭ್ರಷ್ಟಾಚಾರ ಅಲ್ಲ‌. ನಿಯಮದ ಭಾಗವೇ ಆಗಿರುತ್ತದೆ ಎಂದು ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‌

ಸಂಸ್ಥೆಯು ಇಡೀ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಿಗೆ ಅಂದಾಜು ವೆಚ್ಚದ ಮೇಲೆ 3% ಸಂಸ್ಥೆಯ ಸೇವಾ ಶುಲ್ಕವನ್ನು ಅಳವಡಿಸಿಕೊಂಡು, ನಂತರ ಕರ್ನಾಟಕ PWD ಎಸ್.ಆರ್ ದರವನ್ನು ಅಳವಡಿಸಿಕೊಂಡು ತಯಾರಿಸಿದ ಅಂದಾಜು ಪಟ್ಟಿಯಲ್ಲಿ ಗುತ್ತಿಗೆದಾರರ ಉಳಿತಾಯವೆಂದು 10% ಲಾಭಾಂಶ ಲಭ್ಯವಿದ್ದು ಸ್ವತಃ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಅಭಿಯಂತರರರುಗಳೇ ಗ್ರೂಪ್ ಲೀಡರ್ ಮುಖಾಂತರ ಕಾಮಗಾರಿ ಕೈಗೊಳ್ಳುವುದರಿಂದ ಗುತ್ತಿಗೆದಾರರ ಉಳಿತಾಯ 7% ಸಂಸ್ಥೆಗೆ (ಜಾಬ್ ಸೇವಿಂಗ್ಸ್) ಭರಿಸಲಾಗುತ್ತದೆ. ಒಟ್ಟಾರೆಯಾಗಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಸೇವಾ ಶುಲ್ಕ 3% ಹಾಗೂ ಜಾಬ್ ರೇಟ್ ಸೇವಿಂಗ್ಸ್ 7% ಸೇರಿ ಒಟ್ಟು 10% ಕಡಿತ ಮಾಡಿ ಸಂಸ್ಥೆಯ ಖಾತೆಗೆ ಜಮಾ ಮಾಡುವುದು ಸಂಸ್ಥೆಯ ನಿಯಮವಾಗಿರುತ್ತದೆ.

ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 1800 ಜನ ಖಾಯಂ ಹಾಗೂ ಹೊರಗುತ್ತಿಗೆ ಸಿಬ್ಬಂದಿ ವೇತನ ಹಾಗೂ ಇತರೇ ವೆಚ್ಚಗಳನ್ನು ನಿಗಮಕ್ಕೆ ಜಮಾ ಆಗುವ ಜಾಬ್ ಸೇವಿಂಗ್ಸ್ ಉಳಿತಾಯದಿಂದ ಭರಿಸಲಾಗುತ್ತದೆ. ಸರ್ಕಾರದಿಂದ ಸಂಸ್ಥೆಗೆ ಯಾವುದೇ ವೇತನ, ಭತ್ಯೆ ಇತ್ಯಾದಿ ಆಡಳಿತಾತ್ಮಕ ವೆಚ್ಚವನ್ನು ನೀಡುವುದಿಲ್ಲ. ಆದುದರಿಂದ ಜಮೆಯಾಗುವ ಅನುದಾನವನ್ನು ಸಂಸ್ಥೆಯ ಆಡಳಿತಾತ್ಮಕ ವೆಚ್ಚಕ್ಕೆ ಉಪಯೋಗಿಸಲಾಗುತ್ತದೆ. ಸಂಸ್ಥೆಯು ಆಡಳಿತ ಮಂಡಳಿ ಹಾಗೂ ಸರ್ಕಾರ ನೇಮಿಸಿದ ಅಧ್ಯಕ್ಷರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಂಸ್ಥೆಯ ಎಲ್ಲಾ ಲೆಕ್ಕಪತ್ರಗಳು ಆಂತರಿಕ ಲೆಕ್ಕಪರಿಶೋಧನೆ ಮತ್ತು ಶಾಸನಬದ್ಧ ಲೆಕ್ಕಪರಿಶೋಧನೆಗೆ ಒಳಪಟ್ಟಿರುತ್ತದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿರುವಂತೆ ನಮ್ಮ ಅಧಿಕಾರಿಗಳು 3% ಸೇವಾ ಶುಲ್ಕ ಮತ್ತು ಗುತ್ತಿಗೆದಾರರ ಉಳಿತಾಯ 7% ಕಡಿತ ಮಾಡಿ ನಿಗಮದ ಖಾತೆಗೆ ಜಮಾ ಮಾಡಿ ಕಾಮಗಾರಿ ನಿರ್ವಹಿಸಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಮೂಲಕ ಶಾಸಕರು ಹೇಳಿರುವುದರಲ್ಲಿ ತಪ್ಪಿಲ್ಲ. ಸಂಸ್ಥೆಯ ನಿಯಮದಂತೆ ಕಮಿಷನ್‌ ಪಡೆಯಲಾಗಿದೆ ವಿನಾ ಯಾವುದೇ ಭ್ರಷ್ಟಾಚಾರ ಎಸಗಿಲ್ಲ ಎಂದು ಕೆಆರ್ ಡಿಐಎಲ್ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.