ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ್ಷಣೆ

02-09-26 08:44 pm       HK News Staffer   ಕರಾವಳಿ

ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ದೋಣಿಯೊಂದು ನೀರಿನ ಸೆಳೆತಕ್ಕೆ ಸಿಲುಕಿ ಗಂಗೊಳ್ಳಿ ಅಳಿವೆಯಲ್ಲಿ ಮುಳುಗಿದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಸುಮಾರು ಆರು ಮಂದಿ ಮೀನುಗಾರರನ್ನು ತಕ್ಷಣವೇ ರಕ್ಷಿಸಲಾಗಿದ್ದು, ಭಾರೀ ಅನಾಹುತ ತಪ್ಪಿದೆ.

ಗಂಗೊಳ್ಳಿ, ಸೆ.2: ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ದೋಣಿಯೊಂದು ನೀರಿನ ಸೆಳೆತಕ್ಕೆ ಸಿಲುಕಿ ಗಂಗೊಳ್ಳಿ ಅಳಿವೆಯಲ್ಲಿ ಮುಳುಗಿದ ಘಟನೆ ನಡೆದಿದೆ. ದೋಣಿಯಲ್ಲಿದ್ದ ಸುಮಾರು ಆರು ಮಂದಿ ಮೀನುಗಾರರನ್ನು ತಕ್ಷಣವೇ ರಕ್ಷಿಸಲಾಗಿದ್ದು, ಭಾರೀ ಅನಾಹುತ ತಪ್ಪಿದೆ.

ನೀರಿನಲ್ಲಿ ಮುಳುಗಿದ್ದ ದೋಣಿಯನ್ನು ಬಳಿಕ ಯಶಸ್ವಿಯಾಗಿ ದಡಕ್ಕೆ ಎಳೆದು ತರಲಾಗಿದೆ.ಇದೇ ಗಂಗೊಳ್ಳಿ ಅಳಿವೆಯಲ್ಲಿ ಕಳೆದ ವಾರವೂ ಭಾರೀ ಅಲೆಗಳಿಗೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಸಂಪೂರ್ಣವಾಗಿ ಮುಳುಗಿತ್ತು. ಆ ಸಂದರ್ಭದಲ್ಲಿ ದೋಣಿಯಲ್ಲಿದ್ದ 27 ಮಂದಿ ಮೀನುಗಾರರನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಿಸಲಾಗಿತ್ತು.

ಆ ಘಟನೆಯ ನೆನಪು ಮಾಸುವ ಮುನ್ನವೇ ಇಂದು ಮತ್ತೊಂದು ದೋಣಿ ಅಪಾಯಕ್ಕೆ ಸಿಲುಕಿರುವುದು ಸ್ಥಳೀಯ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ. ಗಂಗೊಳ್ಳಿ ಅಳಿವೆಯಲ್ಲಿ ಪದೇಪದೆ ದೋಣಿಗಳು ಅಪಾಯಕ್ಕೆ ಸಿಲುಕುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮೀನುಗಾರರು ಒತ್ತಾಯಿಸಿದ್ದಾರೆ.