ತೊಕ್ಕೊಟ್ಟು : ಮನೆ ಮಂದಿ ಮಲಗಿದ್ದಾಗಲೇ ಕಳ್ಳರ ಕನ್ನ ; 15 ಪವನ್ ಚಿನ್ನಾಭರಣ, ನಗದು ಕಳವು

19-03-21 10:30 am       Mangaluru correspondent   ಕರಾವಳಿ

ಮನೆ ಮಂದಿ ಮಲಗಿದ್ದಾಗಲೇ  ಮೇಲ್ಛಾವಣಿಯ ಹಂಚು ಸರಿಸಿ ನಗ, ನಗದು ಕಳವುಗೈದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ. 

ಉಳ್ಳಾಲ, ಮಾ.19 : ಮನೆ ಮಂದಿ ಮಲಗಿದ್ದಾಗಲೇ  ಮೇಲ್ಛಾವಣಿಯ ಹಂಚು ಸರಿಸಿ ನಗ, ನಗದು ಕಳವುಗೈದ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ. ಹಂಚು ತೆಗೆದು ಒಳನುಗ್ಗಿದ ಕಳ್ಳರು 15 ಪವನ್ ಚಿನ್ನ, 5000 ನಗದನ್ನು ಕಳವುಗೈದಿದ್ದಾರೆ. ನಿನ್ನೆ ರಾತ್ರಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ರಕ್ಷಾ ಕ್ಲಿನಿಕ್ ಬಳಿ ಘಟನೆ ನಡೆದಿದೆ.

ಓವರ್ ಬ್ರಿಡ್ಜ್ ರಕ್ಷಾ ಕ್ಲಿನಿಕ್ ಬಳಿಯ ನಿವಾಸಿ, ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಜಯರಾಜ್ ಕೆ. ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಜಯರಾಜ್ ಅವರ ಪತ್ನಿ ಮರಣ ಹೊಂದಿದ್ದು ಮನೆಯಲ್ಲಿ ಅಮ್ಮ, ಇಬ್ಬರು ತಂಗಿಯಂದಿರ ಜೊತೆ ನೆಲೆಸಿದ್ದಾರೆ. 

ನಿನ್ನೆ ರಾತ್ರಿ ದೇವರ ಕೋಣೆಯ ಹಂಚು ಸರಿಸಿ ಒಳ ನುಗ್ಗಿದ ಕಳ್ಳರು ಹಾಲಲ್ಲಿ ಇರುವ ಕಪಾಟಿನ ಬೀಗ ತೆಗೆದು 15 ಪವನ್ ಚಿನ್ನ ಮತ್ತು ಹೊರಗಡೆ ಇದ್ದ ಸುಮಾರು 5000 ದಷ್ಟು ನಗದು , ಎರಡು ಸ್ಮಾರ್ಟ್ ಫೋನ್, ಒಂದು ಸಾಮಾನ್ಯ ಮೊಬೈಲನ್ನ ದೋಚಿ ಪರಾರಿಯಾಗುತ್ತಿದ್ದ ವೇಳೆ ಕೋಣೆಯಲ್ಲಿ ಮಲಗಿದ್ದ ಜಯರಾಜ್ ಅವರ ಹಿರಿಯ ತಂಗಿ ಹರಿಣಾಕ್ಷಿ ಅವರು ಎಚ್ಚರಗೊಂಡು ಬೊಬ್ಬೆ ಹೊಡೆದಿದ್ದು ಕಳ್ಳರು ಓಡಿದ್ದಾರೆ.

ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ನರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿದ್ದಾರೆ.

Mangalore Thieves break into house and steal 15 pounds gold in ullal. The police are now investigating the case.