ಮಸೀದಿಯಾಗಿದ್ದ ಕೊಡವೂರಿನ ಜೈನ ಬಸದಿ !  ಸ್ಥಳೀಯರ ವಿರೋಧ ಹಿನ್ನೆಲೆ ಮಸೀದಿಗೆ ಜಾಗಕ್ಕೆ ಸರಕಾರದಿಂದ ತಡೆ

25-06-21 10:08 pm       Udupi Correspondent   ಕರಾವಳಿ

ಒಂದು ಕಾಲದಲ್ಲಿ ಜೈನ ಬಸದಿಯಾಗಿದ್ದು ಟಿಪ್ಪು ಆಡಳಿತ ಕಾಲದಲ್ಲಿ ಮಸೀದಿಯಾಗಿ ಪರಿವರ್ತನೆಯಾಗಿತ್ತು ಎನ್ನಲಾದ ವಿವಾದಿತ ಜಾಗವನ್ನು ಸ್ಥಳೀಯರ ವಿರೋಧ ಹಿನ್ನೆಲೆಯಲ್ಲಿ ವಕ್ಫ್ ಅಧೀನದಿಂದ ಮರಳಿ ಕಂದಾಯ ಇಲಾಖೆ ವಶಕ್ಕೆ ಪಡೆದಿರುವ ಪ್ರಸಂಗ ಕೊಡವೂರಿನಲ್ಲಿ ನಡೆದಿದೆ.

ಉಡುಪಿ, ಜೂನ್ 25: ಒಂದು ಕಾಲದಲ್ಲಿ ಜೈನ ಬಸದಿಯಾಗಿದ್ದು ಟಿಪ್ಪು ಆಡಳಿತ ಕಾಲದಲ್ಲಿ ಮಸೀದಿಯಾಗಿ ಪರಿವರ್ತನೆಯಾಗಿತ್ತು ಎನ್ನಲಾದ ವಿವಾದಿತ ಜಾಗವನ್ನು ಸ್ಥಳೀಯರ ವಿರೋಧ ಹಿನ್ನೆಲೆಯಲ್ಲಿ ವಕ್ಫ್ ಅಧೀನದಿಂದ ಮರಳಿ ಕಂದಾಯ ಇಲಾಖೆ ವಶಕ್ಕೆ ಪಡೆದಿರುವ ಪ್ರಸಂಗ ಕೊಡವೂರಿನಲ್ಲಿ ನಡೆದಿದೆ. ಕಳೆದ ಬಾರಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಕ್ಫ್ ಅಧೀನಕ್ಕೆ ನೀಡಲಾಗಿದ್ದ ಆದೇಶಕ್ಕೆ ತಡೆಹೇರಿ ಕಂದಾಯ ಸಚಿವ ಆರ್. ಅಶೋಕ್ ಆದೇಶ ಮಾಡಿದ್ದಾರೆ.

ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಕಂದಾಯ ಇಲಾಖೆ ಹೊರಡಿಸಿರುವ ಆದೇಶವನ್ನು ಪೋಸ್ಟ್ ಮಾಡಿದ್ದು, ಇದಕ್ಕಾಗಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಇದ್ದಾಗ 2017ರಲ್ಲಿ ಸ್ಥಳೀಯರ ವಿರೋಧ ಲೆಕ್ಕಿಸದೆ ವಿವಾದಿತ ಭೂಮಿಯನ್ನು ವಕ್ಫ್ ಅಧೀನಕ್ಕೆ ನೀಡಲಾಗಿತ್ತು. ಆಗಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ, 67 ಸೆಂಟ್ ಭೂಮಿಯನ್ನು ವಕ್ಫ್ ಅಧೀನಕ್ಕೆ ಒಪ್ಪಿಸಲು ಶಿಫಾರಸು ಮಾಡಿದ್ದರು. ಆದರೆ, ಈಗಿನ ಜಿಲ್ಲಾಧಿಕಾರಿ ಆಗಿರುವ ತಪ್ಪನ್ನು ಸರಿಪಡಿಸಿ ವಕ್ಫ್ ಅಧೀನದಿಂದ ಮರಳಿ ವಶಕ್ಕೆ ಪಡೆಯಲು ವರದಿ ನೀಡಿದ್ದಾರೆ. ಅದರಂತೆ, ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಭೂಮಿ ವಿವಾದ ಹೊರಬಂದಿದ್ದು ಹೇಗೆ ?

ಮುಂಬೈನ ಭರತ ವರ್ಷೀಯ ದಿಗಂಬರ ಜೈನ ಮಹಾಸಮಾಜ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕಾಳ ಎಂಬವರು ಕೊಡವೂರಿನ ವಿವಾದಿತ ಭೂಮಿಯ ವಿಡಿಯೋ ಮಾಡಿ, ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಜೈನ ಬಸದಿಗೆ ಸೇರಿದ ಭೂಮಿಯನ್ನು ಕರ್ನಾಟಕದ ಬಿಜೆಪಿ ಸರಕಾರ ವಕ್ಫ್ ಬೋರ್ಡಿಗೆ ಹಸ್ತಾಂತರಿಸಿ, ಹಿಂದು ಮತ್ತು ಜೈನರಿಗೆ ಮಹಾ ಮೋಸ ಮಾಡಿದೆ. ಹಿಂದುಗಳ ಪಕ್ಷ ಎನ್ನುತ್ತಿರುವ ಬಿಜೆಪಿ ಮಾಡಿದ್ದೇನು ನೋಡಿ ಎಂದು ಹೇಳಿ ವಿಡಿಯೋ ಮಾಡಿದ್ದು ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಸ್ಥಳೀಯರು ವಿವಾದಿತ ಜಾಗದಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಜಾಗದ ವಿವಾದ ಕೋರ್ಟಿನಲ್ಲಿರುವ ಮಧ್ಯೆ ಕಂದಾಯ ಇಲಾಖೆ ಭೂಮಿಯನ್ನು ಅಕ್ರಮವಾಗಿ ವಕ್ಫ್ ಬೋರ್ಡಿಗೆ ಒಪ್ಪಿಸಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಸರಕಾರಿ ನೋಂದಣಿಯೇ ಇಲ್ಲದ ಕಟ್ಟಡ ಅಲ್ಲಿರುವುದು. ಅಲ್ಲದೆ, ಸದ್ರಿ ಜಾಗದಲ್ಲಿ ದೇವಳದ ಕೆರೆಯ ಮಾದರಿಯ ಪುಷ್ಕರಿಣಿ ಕೂಡ ಇದೆ. ಇದು ಅಲ್ಲಿ ಈ ಹಿಂದೆ ಬಸದಿ ಇತ್ತು ಎನ್ನುವುದನ್ನು ಸೂಚಿಸುತ್ತದೆ. ಆದರೆ, ಈಗ ದಿಢೀರ್ ಆಗಿ ಸದ್ರಿ ಜಾಗವನ್ನು ಕರ್ನಾಟಕದ ಸರಕಾರ ಮುಸ್ಲಿಮರಿಗೆ ಒಪ್ಪಿಸಿದ್ದು, ಸ್ಥಳೀಯರಲ್ಲದ ಕೆಲವರು ಇಲ್ಲಿಗೆ ಬಂದು ನಮಾಜ್ ಮಾಡಲು ಆರಂಭಿಸಿದ್ದಾರೆ. ಕೋಮು ಸಂಘರ್ಷ ಆಗುವುದೆಂದು ಹೊರಗಡೆ ಪೊಲೀಸರನ್ನು ನಿಲ್ಲಿಸಿ ಭದ್ರತೆಯನ್ನೂ ಕೊಡಲಾಗಿದೆ. ಭೂವಿವಾದ ಕೋರ್ಟಿನಲ್ಲಿ ಇರುವಾಗ ಇದು ಹೇಗೆ ಸಾಧ್ಯ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದರು.

ಆನಂತರ ಈ ವಿಚಾರ ಉಡುಪಿ ಶಾಸಕ ರಘುಪತಿ ಭಟ್ ಗಮನಕ್ಕೆ ಬಂದಿದ್ದು, ಸ್ಥಳೀಯರು ಕಂದಾಯ ಇಲಾಖೆಯಿಂದ ಆಗಿರುವ ಪ್ರಮಾದವನ್ನು ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಜೈನ ಸಮಾಜದವರು ಮಾಡಿರುವ ವಿಡಿಯೋ ಬಗ್ಗೆಯೂ ಶಾಸಕರ ಗಮನಕ್ಕೆ ತಂದಿದ್ದರು. ರಘುಪತಿ ಭಟ್ ಈ ಬಗ್ಗೆ ಕೂಡಲೇ ಕಂದಾಯ ಸಚಿವ ಆರ್. ಅಶೋಕ್ ಗಮನಕ್ಕೆ ತಂದಿದ್ದು, ತಪ್ಪು ಆಗಿರುವುದನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದರು.

ಸಿದ್ದರಾಮಯ್ಯ ಸರಕಾರದಲ್ಲಿ ಎಡವಟ್ಟು

ಕಲ್ಮತ್ ಮಸೀದಿ, ಪಳ್ಳಿ ಜಿಡ್ಡ ಕೊಡವೂರು, ಇವರ ಹೆಸರಲ್ಲಿ ಕೊಡವೂರು ಗ್ರಾಮದ 67 ಸೆಂಟ್ ಭೂಮಿಯನ್ನು ಮಸೀದಿ ಕಮಿಟಿಗೆ ನೀಡುವಂತೆ 2017ರಲ್ಲಿ ಸಿದ್ದರಾಮಯ್ಯ ಸರಕಾರ ಇದ್ದಾಗ ವಕ್ಫ್ ಮಂಡಳಿ ಮೂಲಕ ಸರಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಬಗ್ಗೆ ಜಾಗದ ಪರಿಶೀಲಿಸಿ ವರದಿ ನೀಡುವಂತೆ ಆಗಿನ ಜಿಲ್ಲಾಧಿಕಾರಿಗೆ ಹಿಂಬರಹ ಬಂದಿತ್ತು. ವಿವಾದ ಇರುವುದನ್ನು ಗಮನ ಹರಿಸದೆ ಆಗಿನ ಜಿಲ್ಲಾಧಿಕಾರಿಯ ಮೂಲಕ ವರದಿ ಪಾಸ್ ಆಗುವಂತೆ ನೋಡಿಕೊಳ್ಳಲಾಗಿತ್ತು. 2018ರಲ್ಲಿ ವಕ್ಫ್ ಮಂಡಳಿಯ ಮೂಲಕ ಸಲ್ಲಿಕೆಯಾಗಿದ್ದ ಅರ್ಜಿ 2020ರಲ್ಲಿ ನೋಟಿಫೈ ಆಗಿತ್ತು. 2021ರ ಜನವರಿಯಲ್ಲಿ ಭೂಮಿಯನ್ನು ಮಸೀದಿ ಕಮಿಟಿಗೆ ಹಸ್ತಾಂತರ ಮಾಡಲಾಗಿತ್ತು. ಅಲ್ಲದೆ, 1908ರಲ್ಲಿ ಸರಕಾರದಿಂದ ನೀಡಲ್ಪಟ್ಟ ತಸ್ತೀಕು ಭೂಮಿಯೆಂದು ಅದರಲ್ಲಿ ನಮೂದಿಸಲಾಗಿತ್ತು.

ಟಿಪ್ಪು ಕಾಲದಲ್ಲಿ ಮಸೀದಿಯಾಗಿತ್ತೇ ಜೈನ ಬಸದಿ ?

ಟಿಪ್ಪು ಆಡಳಿತ ಕಾಲದಲ್ಲಿ ಕರಾವಳಿಯ ಉದ್ದಕ್ಕೂ ಬಸದಿ, ದೇವಸ್ಥಾನಗಳಿದ್ದ ಪ್ರದೇಶವನ್ನು ಕಬಳಿಸಿ ಅಲ್ಲಿ ಮಸೀದಿ ನಿರ್ಮಿಸಲಾಗಿತ್ತು. ಕೊಡವೂರಿನಲ್ಲಿಯೂ ಅದೇ ರೀತಿ ಬಸದಿಯನ್ನು ಕೆಡವಿ ಮಸೀದಿ ಮಾಡಲಾಗಿತ್ತು. ಈಗ ಇರುವ ಕಟ್ಟಡದ ಹಿಂಭಾಗದಲ್ಲಿ ದೇವಳದಲ್ಲಿ ಇರುವಂತಹ ಪುಷ್ಕರಣಿ ಕೆರೆ ಇರುವುದೇ ಅದಕ್ಕೆ ಸಾಕ್ಷಿ ಎಂದು ಸ್ಥಳೀಯರು ಹೇಳುತ್ತಾರೆ. ಆದರೂ ಕೆಲವರು ಇಲ್ಲಿ ಟಿಪ್ಪು ಕಾಲದ ಮಸೀದಿ ಇತ್ತು ಎನ್ನುತ್ತಾರೆ. ಏನಿದ್ದರೂ ಇಲ್ಲಿ ಮಸೀದಿ ಅಥವಾ ಬಸದಿ ಇತ್ತು ಎನ್ನುವುದಕ್ಕೆ ಇನ್ನಷ್ಟು ದಾಖಲೆಯ ಅಗತ್ಯವಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಕೆಲವು ಮಸೀದಿಗಳು ಕೂಡ ಹಿಂದೆ ಜೈನ ಬಸದಿಗಳಾಗಿದ್ದವು. ಹಿಂದೆ ಟಿಪ್ಪು ಆಡಳಿತ ಕಾಲದಲ್ಲಿ ಈ ಭಾಗದ ಜೈನರನ್ನು ಬಲವಂತದಿಂದ ಮತಾಂತರಿಸಿ, ಬಸದಿಗಳನ್ನು ಮಸೀದಿ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ, ಇಲ್ಲಿನ ಝೀನತ್ ಬಕ್ಷ್ ಮಸೀದಿ ಸೇರಿ ಕೆಲವು ಮಸೀದಿಗಳಲ್ಲಿ ಪುಷ್ಕರಣಿ ಕೆರೆ ಮತ್ತು ಅಲ್ಲಿ ಈ ಹಿಂದೆ ಜೈನ ಬಸದಿಯೋ, ದೇವಸ್ಥಾನವೋ ಇರುವ ರೀತಿ ಚಿತ್ರಣಗಳಿವೆ. ಕೇರಳದ ಕಾಸರಗೋಡು ಭಾಗದಲ್ಲಿಯೂ ಹಲವು ಕಡೆ ಇದೇ ರೀತಿ ಬಸದಿ ಮಸೀದಿ ಆಗಿರುವ ನಿದರ್ಶನಗಳಿವೆ. 

Those representing the illegal structure have been claiming it is a mosque of the Tippu era, but there is enough evidence to prove that there once stood a Jain Basadi, says Udupi MLA Raghupati Bhat. In a victory of sorts, locals in Kodavoor village in Udupi Taluk of Karnataka have managed to reverse an order that had 'granted' land where once stood a Jain Basadi to the waqf board. Through a government notification issued on 22 June 2021, the Department of Revenue has denotified the grant of land to the Waqf board and taken the same under its own administration.