ಅಪಘಾತದಲ್ಲಿ ಗಾಯಗೊಂಡರೂ ಲೆಕ್ಕಿಸದೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು !

19-08-21 03:41 pm       Udupi Correspondent   ಕರಾವಳಿ

ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಗಾಯಗೊಂಡರೂ, ವಿದ್ಯಾರ್ಥಿಗಳು ಆ್ಯಂಬುಲೆನ್ಸ್ ಮೂಲಕ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ ಪ್ರಸಂಗ ಗಂಗೊಳ್ಳಿಯಲ್ಲಿ ನಡೆದಿದೆ.

ಕುಂದಾಪುರ, ಆಗಸ್ಟ್ 19: ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ಗಾಯಗೊಂಡರೂ, ವಿದ್ಯಾರ್ಥಿಗಳು ಆ್ಯಂಬುಲೆನ್ಸ್ ಮೂಲಕ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ ಪ್ರಸಂಗ ಗಂಗೊಳ್ಳಿಯಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳಾದ ಶಿರೂರು ನಿವಾಸಿ ಮಸಾಯಿದ್ ಮತ್ತು ಗಂಗೊಳ್ಳಿ ನಿವಾಸಿ ವಾಜಿದ್ ಬೈಕ್ ಅಪಘಾತದಲ್ಲಿ ಗಾಯಗೊಂಡರೂ ಆಂಬುಲೆನ್ಸ್ ನಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಅಚ್ಚರಿ ಮೂಡಿಸಿದ್ದಾರೆ.

ಪ್ರಥಮ ವರ್ಷದ ಪದವಿ ಪರೀಕ್ಷೆಗಾಗಿ ಬೈಕ್ ನಲ್ಲಿ ಬಂದಿದ್ದ ಮಸಾಯಿದ್‌ ಗಂಗೊಳ್ಳಿಗೆ ತೆರಳಿ ತಮ್ಮ ಸ್ನೇಹಿತ ವಾಜಿದ್ ನನ್ನು ಕರೆದುಕೊಂಡು ಕಾಲೇಜಿಗೆ ಸಾಗುತ್ತಿದ್ದಾಗ ಈ ಅವಘಡ ನಡೆದಿದೆ. ಗಂಗೊಳ್ಳಿ-ತ್ರಾಸಿ ಮಾರ್ಗದ ಕೊಡಪಾಡಿ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್ ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ವಿದ್ಯಾರ್ಥಿಗಳನ್ನು ಗಂಗೊಳ್ಳಿಯ ಆಪತ್ಬಾಂಧವ ಆ್ಯಂಬುಲೆನ್ಸ್ ನ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದಾರೆ. 

ಅಪಘಾತದಲ್ಲಿ ಗಾಯಗಳಾಗಿದ್ದರೂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆಂಬುಲೆನ್ಸ್ ಮೂಲಕ ವಿದ್ಯಾರ್ಥಿಗಳಿಬ್ಬರೂ ಭಂಡಾರ್ಕಾರ್ಸ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಪರೀಕ್ಷೆ ಬರೆದ ಬಳಿಕ ವಿದ್ಯಾರ್ಥಿಗಳು ಮತ್ತೆ ಚಿಕಿತ್ಸೆ ಪಡೆಯಲಿದ್ದಾರೆ.

Kundapura two Students attend exams coming by ambulance after bike accident. After writing exams both were taken to hospital for further treatment.